ರಾಜ್ಯದಲ್ಲಿ ಮೇ 5 ರಿಂದ 17 ರವರೆಗೆ ಒಳ ಮೀಸಲಾತಿ ವರ್ಗೀಕರಣ ಮಾಡುತ್ತಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆ ದತ್ತಾಂಶದಲ್ಲಿ ಬೌದ್ಧ ಧರ್ಮದ ಕಾಲಂ ಸೃಷ್ಟಿಸಿಲ್ಲ ಹಾಗೂ ಜಾತಿರಹಿತ ಬೌದ್ಧರೆಂದು ಸೇರಿಸಲು ಯಾವುದೇ ದತ್ತಾಂಶ ಇಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ ಸೋಮಶೇಖರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ಬುದ್ಧರ ಅನುಯಾಯಿಗಳಾಗಿದ್ದು, ನಾವೆಲ್ಲರೂ ಬೌದ್ಧ ಧರ್ಮವನ್ನು ಪರಿಪಾಲನೆ ಮಾಡುತ್ತಿದ್ದೇವೆ. ಜಾತಿರಹಿತವಾದ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಈಗಾಗಲೇ ಮನವಿ ಮಾಡಿದ್ದರೂ ಸಹ ಬೌದ್ಧ ಧರ್ಮದ ಕಾಲಂ ಹಾಗೂ ಜಾತಿರಹಿತ ಬೌಧರೆಂದು ಸೇರಿಸಲು ದತ್ತಾಂಶದಲ್ಲಿ ಹೊಸ ವಿಭಾಗ ರಚಿಸಿಲ್ಲ” ಎಂದರು.
“ಈಗಾಗಲೇ ಒಳಮೀಸಲಾತಿಯ ಜನಗಣತಿಯ ಸಮೀಕ್ಷೆಯಲ್ಲಿ ಜಾತಿ ಹೆಸರನ್ನು ಬರಸದೇ ಇರುವವರನ್ನು ಬೌದ್ದರೆಂದು ಪರಿಗಣಿಸಬೇಕು ಹಾಗೂ ಬೌದ್ಧರಾದವರಿಗೆ ದತ್ತಾಂಶದಲ್ಲಿ ಸರಳೀಕರಣದ ದಾಖಲೆಗಳನ್ನು ಪಡೆಯುವಂತೆ ಕ್ರಮಕೈಗೊಳ್ಳಬೇಕು. ಬೌದ್ಧರಾದವರಿಗೆ ದತ್ತಾಂಶದಲ್ಲಿ ಸರಳೀಕರಣದ ದಾಖಲೆಗಳನ್ನು ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ನಮೂದಿಸಲ್ಪಟ್ಟ ಜಾತಿರಹಿತ ಬೌದ್ಧ ಧರ್ಮೀಯರಿಗೆ ಜನಸಂಖ್ಯೆ ಗಾತ್ರಕ್ಕೆ ಅನುಗುಣವಾಗಿ ಅವರ ಸಾಂವಿಧಾನಿಕ ಹಕ್ಕನ್ನು ನೀಡಬೇಕು” ಎಂದು ಆಗ್ರಹಿಸಿದರು.
“ಒಳಮೀಸಲಾತಿ ಸಮೀಕ್ಷೆಯಲ್ಲಿ ದ್ರಾವಿಡ, ಆದಿ ದ್ರಾವಿಡ ಸೇರಿದಂತೆ ಒಳ ಪಂಗಡಗಳಿಗೆ ಪ್ರತ್ಯೇಕ ಕಾಲಂ ಇದೆ. ರಾಜ್ಯದಾದ್ಯಂತ ಅಂಬೇಡ್ಕರ್ ಮತ್ತು ಬೌದ್ಧರ ಅನುಯಾಯಿಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ಹೊಂದಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಪೂರೈಸಲು ನಮ್ಮ ಸಂಘಟನೆಗೆ ಪೂರಕವಾಗಿ ಒಳ ಮೀಸಲಾತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು” ಎಂದು ಒತ್ತಾಯಿಸಿದರು.