ಮಡಿಕೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯ ಚಟುವಟಿಕೆಗಳು, ಆರ್ಥಿಕ ಸ್ಥಿತಿಗತಿ, ಮೂಲ ಸೌಕರ್ಯ ಹಾಗೂ ಸೇವೆ ಒದಗಿಸುವಲ್ಲಿ ತಾಂತ್ರಿಕ ಕೌಶಲ್ಯ ಮತ್ತಿತರ ಅಧ್ಯಾಯನ ಸಂಭಂದ ಸೋಮವಾರ ನಡೆದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ಸಿ. ನಾರಾಯಣ ಸ್ವಾಮಿ ಮಾತನಾಡಿ ‘ ನಗರ, ಸ್ಥಳೀಯ, ಗ್ರಾಮೀಣ ಸಂಸ್ಥೆಗಳ ಬಲವರ್ಧನೆಗೆ ಮುಂದಾಗಿ ‘ ಎಂದು ಕರೆಕೊಟ್ಟರು.
” ನಗರ, ಸ್ಥಳೀಯ,ಗ್ರಾಮೀಣ ಸಂಸ್ಥೆಗಳು ಲಭ್ಯವಿರುವ ಸಂಪನ್ಮೂಲವನ್ನು ಕ್ರೂಢಿಕರಿಸಿ ಅಗತ್ಯ ಸೇವೆಗಳನ್ನು ಕಲ್ಪಿಸಬೇಕು. ಅಭಿವೃದ್ಧಿಯತ್ತ ಮುನ್ನಡೆಯಬೇಕು. ಆದಾಯ ತೆರಿಗೆ ಸಂಗ್ರಹ ಮೂಲ ಸೌಲಭ್ಯ ಸೌಕರ್ಯಕ್ಕೆ ಒತ್ತು ನೀಡುವುದು, ಕುಡಿಯುವ ನೀರು, ವಿದ್ಯುತ್ ಪೂರೈಕೆ, ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವುದು, ಗ್ರಾಮೀಣಾಭಿವೃದ್ಧಿ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗೆ ಪೂರಕವಾಗಿ ಕಾರ್ಯಕ್ರಮ ರೂಪಿಸುವಂತಾಗಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಜವಾಬ್ದಾರಿಗಳಿದ್ದು, ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು ” ಎಂದರು.
ರಾಜ್ಯ 5ನೇ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್.ಪೋಂಡೆ ಮಾತನಾಡಿ ‘ ಗ್ರಾಮೀಣ, ನಗರ, ಸ್ಥಳೀಯ ಸಂಸ್ಥೆಗಳ ಕಾರ್ಯ ಚಟುವಟಿಕೆ, ಆರ್ಥಿಕ ಸ್ಥಿತಿಗತಿ, ಸಂಪನ್ಮೂಲ ಕ್ರೂಢೀಕರಣ, ಹಂಚಿಕೆ ಸಂಬಂಧ ಸಮರ್ಪಕ ಮಾಹಿತಿ ಒದಗಿಸುವಂತಾಗಬೇಕು. ಸ್ಥಳೀಯ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಆಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ‘ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಆದಾಯ ತೆರಿಗೆ ಸಂಗ್ರಹ ಸೇರಿದಂತೆ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ಸಮರ್ಪಕ ನಿರ್ವಹಣೆಗೆ ಖಾಯಂ ಸಿಬ್ಬಂದಿ ನೇಮಿಸುವಂತಾಗಬೇಕು. ಇದರಿಂದ, ಜವಾಬ್ದಾರಿ ಹೆಚ್ಚಾಗಲಿದೆ ಎಂದರು.
ಜಿಪಂ.ಸಿಇಓ ಆನಂದ್ ಪ್ರಕಾಶ್ ಮೀನಾ ಮಾತನಾಡಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವಂತಾಗಬೇಕು. ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ, ಸ್ಥಳೀಯವಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವಂತಾಗಬೇಕು ಎಂದು ಮನವಿ ಮಾಡಿದರು.

ಜಿಪಂ.ಮುಖ್ಯ ಲೆಕ್ಕಾಧಿಕಾರಿ ಜೀವಲ್ ಕಾನ್ ಮಾತನಾಡಿ ” ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮಂಜೂರಾದ 108 ಹುದ್ದೆಗಳಲ್ಲಿ 12 ಭರ್ತಿಯಾಗಿದ್ದು, 97 ಹುದ್ದೆಗಳು ಖಾಲಿಯಿದೆ. ತಾಪಂ ಗೆ ಮಡಿಕೇರಿ ತಾಲ್ಲೂಕಿನಲ್ಲಿ ಮಂಜೂರಾದ 23 ಹುದ್ದೆಗಳಲ್ಲಿ ಒಂದು ಹುದ್ದೆ ಭರ್ತಿಯಾಗಿದೆ. ಉಳಿದಂತೆ 22 ಹುದ್ದೆಗಳು ಖಾಲಿಯಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 23 ಹುದ್ದೆಗಳಲ್ಲಿ 4 ಹುದ್ದೆಗಳು ಭರ್ತಿಯಾಗಿದ್ದು, 19 ಹುದ್ದೆಗಳು ಖಾಲಿ ಉಳಿದಿವೆ. ಕುಶಾಲನಗರ ತಾಲ್ಲೂಕಿನಲ್ಲಿ ಮಂಜೂರಾದ 12 ಹುದ್ದೆಗಳಲ್ಲಿ 12 ಹುದ್ದೆಗಳು ಖಾಲಿಯಿವೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಮಂಜೂರಾದ 26 ಹುದ್ದೆಗಳಲ್ಲಿ 3 ಹುದ್ದೆಗಳು ಭರ್ತಿಯಾಗಿದ್ದು, 23 ಹುದ್ದೆಗಳು ಖಾಲಿಯಿವೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 12 ಮಂಜೂರಾತಿ ಹುದ್ದೆಗಳಲ್ಲಿ 12 ಹುದ್ದೆಗಳು ಖಾಲಿಯಿವೆ. ಒಟ್ಟಾರೆ 96 ಹುದ್ದೆಗಳಲ್ಲಿ 8 ಹುದ್ದೆಗಳು ಭರ್ತಿಯಾಗಿದ್ದು, 88 ಹುದ್ದೆಗಳು ಖಾಲಿಯಿವೆ ” ಎಂದು ಮಾಹಿತಿ ನೀಡಿದರು.
‘ಆಡಳಿತ ಸುಧಾರಣೆ ಮತ್ತು ಮಾಹಿತಿ ತಂತ್ರಜ್ಞಾನ ಉಪ ಕ್ರಮಗಳು ಸೇರಿದಂತೆ ಪಂಚತಂತ್ರ 2.0, ಇ-ಸ್ವತ್ತು, 15ನೇ ಹಣಕಾಸು, ನರೇಗಾ, ವಸತಿ, ಸ್ವಚ್ಛ ಭಾರತ ಮಿಷನ್, ಇ-ಕಚೇರಿ, ಐಪಿಜಿಆರ್ಎಸ್, ಮತ್ತಿತರ ಒಳಗೊಂಡಿವೆ ‘ ಎಂದು ಜೀವಲ್ ಖಾನ್ ತಿಳಿಸಿದರು.’
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ ಮಾತನಾಡಿ ‘ ಖಾಯಂ ನೌಕರರನ್ನು ನೇಮಕ ಮಾಡುವಂತಾಗಬೇಕು. ಡಾಟಾ ಆಪರೇಟರ್ ಗಳು ಅರ್ಧದಲ್ಲಿಯೇ ಕೆಲಸ ಬಿಡಲಿದ್ದು, ಸ್ಥಳೀಯ ಖಾಯಂ ಸಿಬ್ಬಂದಿಗಳನ್ನು ನಿಯೋಜಿಸುವಂತಾಗಬೇಕು. ವೇತನ ಹೆಚ್ಚಿಸಬೇಕು ‘ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ 10 ಕೋಟಿ ಅನುದಾನ : ಜಿ. ಪಲ್ಲವಿ
ಮಹಮ್ಮದ್ ಸನಾವುಲ್ಲಾ, ಕೆಂಪೇಗೌಡ, ಕೆ. ಯಾಲಕ್ಕಿ ಗೌಡ, ಪ್ರಸನ್ನ, ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಪೌರಾಯುಕ್ತರು, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸೇರಿದಂತೆ ಇನ್ನಿತರರು ಇದ್ದರು.