ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದು ಹೇಳುವ ಬಿಜೆಪಿ ನಾಯಕರಿಗೆ ಸತ್ಯ ಏನೆಂಬುದು ತಿಳಿದಿಲ್ಲ ಅಥವಾ ತಿಳಿದಿದ್ದರೂ ಮುಚ್ಚಿಡುತ್ತಿದ್ದಾರೆ ಎಂಬ ಅನುಮಾನವಿದೆ. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಂಸ್ಕೃತದಿಂದ ಉಗಮವಾಗಿಲ್ಲ.
ದೆಹಲಿಯ ಬಿಜೆಪಿ ಸರ್ಕಾರ ಮತ್ತು ಸಂಸ್ಕೃತ ಭಾರತಿ ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗದೊಂದಿಗೆ 10 ದಿನಗಳಿಂದ ನಡೆಸಿದ ಸಂಸ್ಕೃತ ಕಲಿಕಾ ಉಪಕ್ರಮದ ಸಮಾರೋಪ ಸಮಾರಂಭ ಇತ್ತೀಚಿಗೆ ನಡೆದಿತ್ತು. ಈ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಂಸ್ಕೃತ ಅತ್ಯಂತ ವೈಜ್ಞಾನಿಕ ಭಾಷೆಯಾಗಿದ್ದು, ಕಂಪ್ಯೂಟರ್ ಸ್ನೇಹಿಯಾಗಿದೆ. ನಾಸಾ ವಿಜ್ಞಾನಿಗಳು ಕೂಡ ಭಾಷೆಯ ಕೋಡಿಂಗ್ ಮತ್ತು ಇತರ ವೈಜ್ಞಾನಿಕ ಕಾರ್ಯಗಳಿಗೆ ಪ್ರಾಚೀನ ಭಾರತೀಯ ಭಾಷೆಯ ಸಾಮರ್ಥ್ಯವನ್ನು ಗುರುತಿಸಿದ್ದಾರೆ ಎಂದು ಹೇಳಿದ್ದರು. ಇದೇ ಕಾರ್ಯಕ್ರಮದಲ್ಲಿ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ, ಆರ್ಎಸ್ಎಸ್ ನಾಯಕರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಲ್ಲರೂ ಸಂಸ್ಕೃತವನ್ನು ಗುಣಗಾನ ಮಾಡಿದ್ದೆ ಮಾಡಿದ್ದು. ಪ್ರಾಚೀನ ಭಾಷೆ ಸಂಸ್ಕೃತ, ಭಾರತೀಯರೆಲ್ಲರೂ ಈ ಭಾಷೆಯನ್ನು ಕಲಿಯಿರಿ ಎಂದು ಉಪದೇಶ ಕೂಡ ಮಾಡಿದರು.
ಕೇವಲ ಈ ಕಾರ್ಯಕ್ರಮ ಮಾತ್ರವಲ್ಲ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಸಂಸ್ಕೃತದ ಬಗ್ಗೆ ಕಳೆದ 10 ವರ್ಷಗಳಿಂದ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಅನುದಾನ ಕೂಡ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಕೆಲವು ಸ್ವಾಮೀಜಿಗಳಂತೂ ಸಂಸ್ಕೃತದ ಜ್ಞಾನವಿಲ್ಲದಿದ್ದರೆ ಸ್ವರ್ಗಕ್ಕೆ ವೀಸಾ ಸಿಗುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಒಂದಿಷ್ಟು ಸಾಹಿತಿಗಳು ಸಂಸ್ಕೃತ ಜ್ಞಾನವಿಲ್ಲದಿದ್ದರೆ ಉತ್ತಮ ಸಾಹಿತ್ಯ ರಚನೆ ಅಸಾಧ್ಯ ಎಂದು ಭಾಷಣ ಮಾಡಿದ್ದಾರೆ. ಕೆಲವು ರಾಜಕಾರಣಿಗಳು ಸಂಸ್ಕೃತದಲ್ಲಿಯೇ ವಿಧಾನಸಭೆ ಹಾಗೂ ಸಂಸತ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸಂಸ್ಕೃತದ ರಾಯಭಾರಿಗಳಾಗಿದ್ದಾರೆ. ಆದರೆ ವಾಸ್ತವದಲ್ಲಿ ಸಂಸ್ಕೃತ ಭಾಷೆ ಅಧೋಗತಿಯಲ್ಲಿರುವ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ.
ಭಾರತೀಯ ಜನತಾ ಪಕ್ಷದ ನಾಯಕರು ಎಲ್ಲ ಕಡೆ ಹೇಳುವ ಹಾಗೆ ಸಂಸ್ಕೃತ ಪ್ರಾಚೀನ ಅಥವಾ ಮೊದಲ ಭಾಷೆಯಲ್ಲ. ಸಂಸ್ಕೃತಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದ್ದರೂ ಇದಕ್ಕಿಂತ ಪ್ರಾಚೀನ ಇತಿಹಾಸ ಹೊಂದಿರುವ ಭಾಷೆಗಳಿವೆ. ಸುಮೇರಿಯನ್(ಈಗಿನ ಇರಾಕ್), ಅಕ್ಕಾಡಿಯನ್, ಈಜಿಪ್ಟಿನ ಹೈರೋಗ್ಲಿಫಿಕ್ ಚೀನಾದ ಕೆಲವು ಪುರಾತನ ಭಾಷೆಗಳಿಗೆ ಐದರಿಂದ ಐದೂವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಗ್ರೀಕ್ ಭಾಷೆ ಕೂಡ ಅತ್ಯಂತ ಪುರಾತನ ಭಾಷೆ. ವಿಶ್ವದ ಅತ್ಯಂತ ಪುರಾತನ ಭಾಷೆಯನ್ನು ಗುರುತಿಸುವುದು ಸಂಕೀರ್ಣವಾದ ವಿಷಯ. ಏಕೆಂದರೆ ಇದು ಭಾಷೆಯ ಬರವಣಿಗೆಯ ದಾಖಲೆಗಳು, ಮೌಖಿಕ ಸಂಪ್ರದಾಯಗಳು ಮತ್ತು ಭಾಷಾಶಾಸ್ತ್ರೀಯ ಸಂಶೋಧನೆಯ ಆಧಾರವನ್ನು ಅವಲಂಬಿಸಿರುತ್ತದೆ. ಆದರೆ, ಲಭ್ಯವಿರುವ ಐತಿಹಾಸಿಕ ಮತ್ತು ಭಾಷಾಶಾಸ್ತ್ರೀಯ ಆಧಾರಗಳನ್ನು ಪರಿಗಣಿಸಿದಾಗ ಸುಮೇರಿಯನ್, ಹೈರೋಗ್ಲಿಫಿಕ್ ಭಾಷೆಗಳು ಅತ್ಯಂತ ಪುರಾತನ ಭಾಷೆಯಾಗಿವೆ ಎಂದು ವರದಿಗಳು ಹೇಳುತ್ತವೆ.
ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದು ಹೇಳುವ ಬಿಜೆಪಿ ನಾಯಕರಿಗೆ ಸತ್ಯ ಏನೆಂಬುದು ತಿಳಿದಿಲ್ಲ ಅಥವಾ ತಿಳಿದಿದ್ದರೂ ಮುಚ್ಚಿಡುತ್ತಿದ್ದಾರೆ ಎಂಬ ಅನುಮಾನವಿದೆ. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಂಸ್ಕೃತದಿಂದ ಉಗಮವಾಗಿಲ್ಲ. ಈ ಭಾಷೆಗಳಿಗೆ ಪ್ರತ್ಯೇಕ ಮೂಲವಿದೆ. ಆದರೆ ಸಂಸ್ಕೃತದಿಂದ ಕೆಲವು ಪದಗಳನ್ನು ಅಳವಡಿಸಿಕೊಳ್ಳಲಾಗಿದೆ. ಕನ್ನಡ, ತಮಿಳು, ಚೀನಾದ ಮ್ಯಾಂಡರಿನ್, ಗ್ರೀಕ್ ಮತ್ತು ಹೀಬ್ರೂ ಇಂದಿಗೂ ಜೀವಂತವಾಗಿರುವ ಪ್ರಾಚೀನ ಭಾಷೆಗಳಾಗಿವೆ. ಕನ್ನಡ, ತಮಿಳು ತನ್ನ ಶಾಸನಗಳು ಮತ್ತು ಸಾಹಿತ್ಯದ ಆಧಾರದ ಮೇಲೆ ವಿಶ್ವದ ಅತ್ಯಂತ ಹಳೆಯ ಜೀವಂತವಿರುವ ಭಾಷೆಗಳಾಗಿವೆ.
ಈ ಸುದ್ದಿ ಓದಿದ್ದೀರಾ? 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ಗೆ ಸ್ಥಾನ; ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಒಪ್ಪಿಗೆ
ಕೇಂದ್ರ ಸರ್ಕಾರದ ವರದಿ ಹೇಳಿರುವಂತೆ ಭಾರತದ 150 ಕೋಟಿ ಜನಸಂಖ್ಯೆಯಲ್ಲಿ ಸಂಸ್ಕೃತವನ್ನು ಮಾತೃಭಾಷೆಯಾಗಿ ಮಾತನಾಡುವವರ ಸಂಖ್ಯೆ 28,821 ಮಂದಿ ಮಾತ್ರ. ಈ ಸಂಖ್ಯೆಯು ಸಂಪೂರ್ಣ ಜನಸಂಖ್ಯೆಯಲ್ಲಿ ಕೇವಲ ಶೇ. 0.001 ಮಾತ್ರ. ದೇಶದ 5 ಗ್ರಾಮಗಳು ಅಂದರೆ ಕರ್ನಾಟಕದ ಮತ್ತೂರು, ಹೊಸಹಳ್ಳಿ, ಮಧ್ಯಪ್ರದೇಶದ ಜಿರಿ, ಒಡಿಶಾದ ಸಾಸನ, ರಾಜಸ್ಥಾನದ ಗನೋಡದ ಗ್ರಾಮಗಳಲ್ಲಿ ಮಾತ್ರ ಜನರು ಸಂಸ್ಕೃತವನ್ನು ದೈನಂದಿನ ಜೀವನದಲ್ಲಿ ಬಳಸುತ್ತಾರೆ. ಈ ಗ್ರಾಮಗಳಲ್ಲಿ ಸಂಸ್ಕೃತವನ್ನು ಬ್ರಾಹ್ಮಣ ಸಮುದಾಯದವರು ಮಾತ್ರವಲ್ಲದೆ ಎಲ್ಲ ವರ್ಗದ ಜನರು ಮಾತನಾಡುತ್ತಾರೆ. ಹಿಂದಿನ ಕಾಲದ ರಾಜರುಗಳು ಸಂಸ್ಕೃತವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದರೂ ಪ್ರಾಕೃತದಂತಹ ಭಾಷೆಗಳು ಜನರು ಮಾತನಾಡುವ ಸ್ಥಳೀಯ ಭಾಷೆಗಳಾಗಿತ್ತು.
ಸಂಸ್ಕೃತದ ಯಜಮಾನಿಕೆಗೆ ಕರ್ನಾಟಕದಲ್ಲೂ ಹತ್ತನೆ ಶತಮಾನದಿಂದಲೂ ವಿರೋಧ ಬಂದಿದೆ. 10ನೇ ಶತಮಾನದಲ್ಲಿ ಮಹಾಕವಿ ಪಂಪ ‘ಮಾರ್ಗ’ದ (ಸಂಸ್ಕೃತ) ಜೊತೆಗೆ ‘ದೇಸಿ’ಯನ್ನು ಬಳಸುವುದರೊಂದಿಗೆ ಸಂಸ್ಕೃತದಿಂದ ಬಿಡಿಸಿಕೊಳ್ಳುವ ದೇಸಿ ಸಂಸ್ಕೃತಿ ಚಿಂತನೆ ಆರಂಭವಾಗಿತ್ತು. 11ನೇ ಶತಮಾನದಲ್ಲಿ ಕವಿ ನಯಸೇನ, ಸಂಸ್ಕೃತ ಮತ್ತು ಕನ್ನಡಗಳನ್ನು ಬೆರೆಸುವ ಪ್ರವೃತ್ತಿಯನ್ನು ಕಟುವಾಗಿ ವಿರೋಧಿಸಿ ‘ತೈಲ ಮತ್ತು ತುಪ್ಪವನ್ನು ಬೆರೆಸುವುದು ತಕ್ಕುದೆ?’ ಎಂದು ಪ್ರಶ್ನಿಸಿದ್ದರು. 13ನೇ ಶತಮಾನದ ಕವಿ ಅಂಡಯ್ಯ, ಸಂಸ್ಕೃತ ಪದ ಬಳಕೆಯನ್ನೇ ವಿರೋಧಿಸಿ, ಕನ್ನಡ ತದ್ಭವ ಪದಗಳನ್ನು ಬಳಸಿ, ಪ್ರಬಲ ಪ್ರತಿರೋಧ ಒಡ್ಡಿದ್ದರು. ಅವರಲ್ಲಿ ಕಾವ್ಯವು ‘ಕಬ್ಬ’ ಆಯಿತು. ಮುಖ ‘ಮೊಗ’ವಾಯಿತು. ಸುಖ ‘ಸೊಗ’ವಾಯಿತು. ಆಧುನಿಕ ಕಾಲದಲ್ಲೂ ಕುವೆಂಪು ಸೇರಿದಂತೆ ಹಲವು ಕವಿಗಳು ಸಂಸ್ಕೃತಕ್ಕೆ ಪರ್ಯಾಯವಾಗಿ ತಮ್ಮ ಕೃತಿಗಳಲ್ಲಿ ಹೊಸ ಕನ್ನಡ ಪದಗಳನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಒಳಗೊಂಡು ಹಲವು ನಾಯಕರು ಸಂಸ್ಕೃತವನ್ನು “ಜೀವಂತ ಭಾಷೆ” ಎಂದು ಹಲವು ವೇದಿಕೆಗಳಲ್ಲಿ ಘೋಷಿಸಿದ್ದಾರೆ. ಇಡೀ ದೇಶದಲ್ಲಿ 28,821 ಮಂದಿ ಮಾತನಾಡುವ ಭಾಷೆ ಮೃತ ಭಾಷೆ ಎಂದು ಪರಿಗಣಿಸಲಾಗಿದೆ. ಸಂಸ್ಕೃತದ ಪದಗಳನ್ನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೋಡ್ಗಳನ್ನು ಬರೆಯಲು ಪರಿಗಣಿಸಲಾಗಿದೆ ಎಂದು ಕೇಸರಿ ಪಕ್ಷದ ನಾಯಕರು ಹೇಳುತ್ತಾರೆ. ಆದರೆ ಇದು ಅಪ್ಪಟ ಸುಳ್ಳು. ಸಂಸ್ಕೃತದ ಪದಗಳನ್ನು ಕಂಪ್ಯೂಟರ್ನಲ್ಲಿ ಕೋಡಿಂಗ್ ಬರೆಯಲು ವ್ಯಾಪಕವಾಗಲ್ಲ, ಕೆಲವೇ ಪದಗಳು ಇದಕ್ಕೆ ಹೊಂದಾಣಿಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ, ಅಷ್ಟೇ.
ವಿಶ್ವದಾದ್ಯಂತ ಮಾತ್ರವಲ್ಲದೆ ಭಾರತದಲ್ಲೂ ಕೂಡ Python, C++, Java ದಂತಹ ಆಧುನಿಕ ಪ್ರೋಗ್ರಾಮಿಂಗ್ ಭಾಷೆಗಳೇ ಉಪಯೋಗದಲ್ಲಿವೆ. ಆದರೆ ಸಂಸ್ಕೃತದ ಲಿಪಿ ಮತ್ತು ವಿಶಾಲ ಶಬ್ದಕೋಶ ಒಳಗೊಂಡ ಪದಗಳು ಪ್ರಾಯೋಗಿಕ ಕೋಡಿಂಗ್ ಅನ್ವಯಗಳಿಗೆ ಗಂಭೀರ ಅಡಚಣೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ಸಾಫ್ಟ್ವೇರ್ ತಜ್ಞರು ಹೇಳುತ್ತಾರೆ. ಇಷ್ಟೆಲ್ಲ ವಾಸ್ತವಾಂಶಗಳನ್ನು ಬದಿಗೆ ಸರಿಸಿ ಸಂಸ್ಕೃತ ವಿಶ್ವ ಭಾಷೆ ಎಂಬ ಸುಳ್ಳನ್ನು ಪುಂಖಾನುಪುಂಖವಾಗಿ ಹರಿಬಿಡಲಾಗುತ್ತಿರುವುದು, ಅಕ್ಷಮ್ಯ ಅಪರಾಧ.