ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಗೆ ಸಂಬಂಧಿಸಿದಂತೆ ಮಾದಿಗ ಸಮುದಾಯದ 3 ದಶಕಗಳ ಹೋರಾಟ ಅಂತದಲ್ಲಿದ್ದು, ಮೇ.05 ರಿಂದ ಆರಂಭವಾಗಿರುವ ವಾಸ್ತಾವಿಕ ದತ್ತಾಂಶ ಸಂಗ್ರಹ ಸಮೀಕ್ಷೆಯ ವೇಳೆ ಮಾದಿಗ ಹಾಗೂ ಮಾದಿಗ ಸಂಬಂಧಿತ ಉಪ ಜಾತಿಗಳ ಜನರು ತಮ್ಮ ಜಾತಿಕಲಂನಲ್ಲಿ ಮಾದಿಗ ಎಂದು ನಮೂದಿಸುವ ಮೂಲಕ ಇಷ್ಟು ವರ್ಷಗಳ ಗೊಂದಲಕ್ಕೆ ತೆರೆ ಎಳೆಯುವಂತೆ ಒಳಮೀಸಲಾತಿ ಸಮಿತಿಯ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದಅವರು,ಆಂಧ್ರದಿಂದ ಆರಂಭವಾದ ಒಳಮೀಸಲಾತಿ ಹೋರಾಟ ಕರ್ನಾಟಕಕ್ಕೂ ವಿಸ್ತರಣೆಗೊಂಡು,ವಿವಿಧ ಹಂತದ ಹೋರಾಟದ ಫಲವಾಗಿ 2024ರ ಆಗಸ್ಟ್ 01 ರ ಸುಪ್ರಿಂಕೋರ್ಟಿನ ಏಳು ನ್ಯಾಯಾಧೀಶರ ತೀರ್ಪು ಮಹತ್ವದ್ದಾಗಿದೆ.ಅದರ ಅನ್ವಯ ನೆರೆಯ ಆಂಧ್ರ, ತೆಲಂಗಾಣ,ಹರಿಯಾಣ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾದರೂ ಕರ್ನಾಟಕದಲ್ಲಿ ಮಾತ್ರ ವಾಸ್ತವಿಕ ದತ್ತಾಂಶದ ಹೆಸರಿನಲ್ಲಿ ವಿಳಂಬವಾಗಿ ಇಂದು ಕೊನೆಯ ಹಂತಕ್ಕೆ ತಲುಪಿದೆ. ಸ್ವತಃ ಮುಖ್ಯಮಂತ್ರಿಗಳೇ ವಾಸ್ತವಿಕ ದತ್ತಾಂಶ ಸಮೀಕ್ಷೆಗೆ ಚಾಲನೆ ನೀಡಿರುವುದು ಸಂತೋಷದ ವಿಚಾರವಾಗಿದೆ. ಆದರೂ ದತ್ತಾಂಶ ಸಂಗ್ರಹಣೆ ನಂತರವೂ ವಿಳಂಭ ಮಾಡದೆ ಒಳಮೀಸಲಾತಿ ಜಾರಿ ಮಾಡಬೇಕೆಂಬುದು ನಮ್ಮಆಗ್ರಹವಾಗಿದೆ ಎಂದರು

ಒಳಮೀಸಲಾತಿ ವಾಸ್ತವಿಕ ದತ್ತಾಂಶ ಸಮೀಕ್ಷೆಯಲ್ಲಿ ಧರ್ಮದ ಕಲಂ ಇಲ್ಲ. ಹಾಗಾಗಿ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲರೂ ತಮ್ಮಜಾತಿ, ಉಪ ಜಾತಿಗಳನ್ನು ನಮೂದಿಸಲು ಅವಕಾಶವಿದೆ. ಹಾಗಾಗಿ ಮಾದಿಗ ಸಂಬಂಧಿಸಿದ ಉಪಜಾತಿಗಳ ತಮ್ಮಕುಟುಂಬದ ದತ್ತಾಂಶ ನೀಡುವ ಸಂದರ್ಭದಲ್ಲಿ ಜಾತಿ ಮತ್ತು ಉಪ ಜಾತಿ ಕಲಂಗಳಲ್ಲಿ ಜಾತಿ ಸೂಚಿತವಲ್ಲದ ಎ.ಕೆ, ಎಡಿ, ಎಎ ಎಂದು ನಮೂದಿಸದೆ, ಮಾದಿಗಎಂ ದೇ ನಮೂದಿಸಿ,ಜಾತಿಯ ಐಕ್ಯತೆ ಕಾಪಾಡಬೇಕೆಂದು ಡಾ.ವೈ.ಕೆ.ಬಾಲಕೃಷ್ಣಪ್ಪ ಮನವಿ ಮಾಡಿದರು.
ಜಿ.ಪಂ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಎಕೆ, ಎಡಿ, ಎಎ ಎಂಬುದು ಕರ್ನಾಟಕದಲ್ಲಿ ಇರುವ ಗೊಂದಲ ಬೇರೆ ರಾಜ್ಯಗಳಲ್ಲಿ ಅಸ್ಪೃಷ್ಯ ಜಾತಿಗಳು ಮಾತ್ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿವೆ. ಹಾಗಾಗಿ ಇದುವರೆಗೂ ಆಗಿರುವ ಗೊಂದಲ ಮತ್ತು ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಇದು ಸುವರ್ಣ ಅವಕಾಶ. ಪ್ರತಿಯೊಬ್ಬರು ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮಜಾತಿ, ಉಪಜಾತಿಗಳನ್ನು ನಮೂದಿಸಬೇಕು ಎಂದರು.
ಕೋಡಿಹಳ್ಳಿ ಆದಿಜಾಂಭವ ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಔದ್ಯೋಗಿಕ ಬೆಳೆವಣಿಗೆಗೆ ಮೇ.5 ರಿಂದ ರಾಜ್ಯದಲ್ಲಿ ಆರಂಭವಾಗಿ ಒಳಮೀಸಲಾತಿ ವಾಸ್ತವಿಕ ದತ್ತಾಂಶ ಸಂಗ್ರಹ ಸಮೀಕ್ಷೆ ಮಹತ್ವದ್ದಾಗಿದೆ.ಮಾದಿಗ ಸಮುದಾಯದ ಜನರು ತಮ್ಮ ಜಾತಿ ಮತ್ತುಉಪಜಾತಿ ಕಲಂನಲ್ಲಿ ಎಕೆ,ಎಡಿ, ಎಎ ಎಂಬುದನ್ನು ಬಿಟ್ಟು ಮಾದಿಗಎಂದೇ ನಮೂದಿಸಿ, ಅಲ್ಲದೆ ಈ ಬಗ್ಗೆ ವಿದ್ಯಾವಂತರು,ಪ್ರಗತಿಪರರ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಪಾಲನಹಳ್ಳಿ ಮಠದ ಶ್ರೀಸಿದ್ದರಾಜ ಸ್ವಾಮೀಜಿ ಮಾತನಾಡಿ, ಮಾದಿಗ ಸಮುದಾಯದ 35 ವರ್ಷಗಳ ಹೋರಾಟ ಕೊನೆಯ ಹಂತದಲ್ಲಿದೆ. ಪ್ರತಿಯೊಬ್ಬರು ಮೈಯೆಲ್ಲಾಕಣ್ಣಾಗಿ, ಜಾತಿ, ಉಪ ಜಾತಿಕಲಂ ನಲ್ಲಿ ಮಾದಿಗ ಎಂದು ನಮೂದಿಸಿ, ಮಾದಿಗರ ಪಾಲು ಪಡೆಯಲು ಮುಂದಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹೆತ್ತೇನಹಳ್ಳಿ ಮಂಜುನಾಥ್, ನರಸೀಯಪ್ಪ, ನರಸಿಂಹಯ್ಯ, ಬೆಳಗುಂಬ ವೆಂಕಟೇಶ್, ಕೋಡಿಯಾಲ ಮಹದೇವ್,ನಾಗರಾಜು ಗೂಳರಿವೆ,ಡಿ.ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.