ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣವು ಪ್ರಮುಖ ಸಾಧನವಾಗಿದ್ದು, ಅಲ್ಪ ಸಂಖ್ಯಾತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದರು.
ಜಿಲ್ಲೆಯ ಎಲ್ಲ ಅಲ್ಪ ಸಂಖ್ಯಾತ ಸಮುದಾಯಗಳ ಪ್ರಮುಖರೊಂದಿಗೆ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಸಮುದಾಯದಲ್ಲಿ ಶೇ.43ರಷ್ಟು ಮಾತ್ರ ವಿದ್ಯಾವಂತರಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಅವರು ಉತ್ತಮ ಶಿಕ್ಷಣ ಪಡೆದುಕೊಂಡರೆ ಮಾತ್ರ ಸಮಾಜದಲ್ಲಿ ಮುನ್ನಡೆಯಬಹುದು. ಶಿಕ್ಷಣದೊಂದಿಗೆ ತಂತ್ರಜ್ಞಾನ, ವೃತ್ತಿಪರ ಕೌಶಲ್ಯಗಳಿಗೂ ಮಹತ್ವ ನೀಡಬೇಕಿದೆ ಎಂದು ತಿಳಿಸಿದರು.

ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಅಲ್ಪ ಸಂಖ್ಯಾತ ಕುಟುಂಬಗಳಿದ್ದು, ಈ ಮಕ್ಕಳನ್ನು ಕಡ್ಡಾಯ ಶಿಕ್ಷಣಕ್ಕೆ ಒಳಪಡಿಸಬೇಕು. ಅಲ್ಪಸಂಖ್ಯಾತ ಸಮುದಾಯದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿಸಿ ಸಮಾಜದಲ್ಲಿ ಉನ್ನತ ಸ್ಥಾನ ತಲುಪಿಸುವತ್ತ ಗಮನ ನೀಡಬೇಕು ಎಂದು ತಿಳಿಸಿದರು.
ನಾವೆಲ್ಲ ಒಂದೇ ಎಂಬ ಭಾವನೆಯಿಂದ ಕೋಮು ಸೌಹಾರ್ದತೆಯಿಂದ ಬದುಕುವ ಮೂಲಕ ಇತರರಿಗೆ ಮಾದರಿಯಾಗಿರಬೇಕು. ಸಮಾಜದಲ್ಲಿ ಎಲ್ಲಾ ಸಮುದಾಯದವರು ಒಂದಾಗಿ ಬಾಳಬೇಕು. ಸಂಬಂಧಗಳು ಸ್ನೇಹ-ಸೌಹಾರ್ದತೆಯಿಂದ ಕೂಡಿರಬೇಕು. ಕಷ್ಟ ಬಂದಾಗ ಪರಸ್ಪರ ನೆರವಾಗಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಆಗಮಿಸುವ ಮುನ್ನ ಜೈನ ದೇವಾಲಯ, ಚರ್ಚ್ ಗೆ ಭೇಟಿ ನೀಡಿ ಬಂದಿದ್ದೇನೆ. ಚರ್ಚ್ ಮುಖ್ಯಸ್ಥರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಇದರಿಂದ ನನ್ನ ಮನಸ್ಸಿಗೆ ಸಂತೋಷವಾಗಿದೆ ಎಂದು ತಮ್ಮ ಭಾವನೆಯನ್ನು ಹಂಚಿಕೊಂಡರು.

ಎಲ್ಲಾ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾವೈಕ್ಯತೆ ಮನೋಭಾವ ಮೂಡಬೇಕು. ಬಹುಸಂಖ್ಯಾತರಾಗಲಿ, ಅಲ್ಪಸಂಖ್ಯಾತರಾಗಲಿ ಪರಸ್ಪರ ಹಬ್ಬ-ಹರಿದಿನಗಳಲ್ಲಿ ಭಾಗಿಯಾಗಿ ವಿಶ್ವಾಸ ಭಾವದಿಂದಿರಬೇಕು. ಇದರಿಂದ ರಾಷ್ಟçದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರಲ್ಲದೆ, ಹಬ್ಬ-ಹರಿ ದಿನಗಳಲ್ಲಿ ಒಬ್ಬರಿಗೊಬ್ಬರು ಆಹ್ವಾನ ನೀಡಿ ಒಟ್ಟಿಗೆ ಕುಳಿತು ಊಟ ಮಾಡುವ ಸಂಸ್ಕೃತಿ ಬೆಳೆಸಿಕೊಂಡು ಮುಂದುವರೆಸಿಕೊಂಡು ಬರಬೇಕು ಎಂದು ತಿಳಿಸಿದರು.
ದೇಶದ ವಾತಾವರಣ ಶಾಂತಿಯಿಂದ ಕೂಡಿರಬೇಕು. ಕೋಮು ಗಲಭೆ ನಡೆಯದಂತೆ ನಾವೆಲ್ಲಾ ಒಂದಾಗಿ ಬಾಳಬೇಕು. ಸಾಕ್ಷರತೆ ಪ್ರಮಾಣ ಹೆಚ್ಚಿಸಿದಲ್ಲಿ ಕೋಮು ಗಲಭೆಗಳು ಘಟಿಸುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಅಲ್ಪಸಂಖ್ಯಾತರ ಮುಖಂಡ ಶಫೀ ಅಹಮದ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಆಪ್ತ ಸಹಾಯಕ ಮುಜೀಬುಲ್ಲಾ ಜಫಾರಿ, ಪ್ರಧಾನಮಂತ್ರಿಗಳ 15 ಅಂಶಗಳ ಅನುಷ್ಟಾನ ಸಮಿತಿಯ ಜಿಲ್ಲಾ ಸದಸ್ಯರಾದ ಮಹಮದ್ ಖಲೀಮ್, ಜೆಫಿನ್ ಜಾಯ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಬ್ಬೀರ್ ಅಹಮದ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್ ಅಲೀಉಲ್ಲಾ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.