ದಲಿತ ಸಮುದಾಯ ಮತ್ತು ಪ್ರಬಲ ಜಾತಿಯ ಸದಸ್ಯರ ನಡುವೆ ಘರ್ಷಣೆ ನಡೆದಿರುವ ಘಟನೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ವಡಕಾಡು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಘರ್ಷಣೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಸುಮಾರು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸೋಮವಾರ ರಾತ್ರಿ, ವಾಹನಗಳಿಗೆ ಇಂಧನ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಪಂಪ್ನಲ್ಲಿ ಆರಂಭವಾದ ಸಣ್ಣ ಗಲಾಟೆಯು ಎರಡು ಸಮುದಾಯಗಳ ನಡುವೆ ಘರ್ಷಣೆಯಾಗಿ ಮಾರ್ಪಟ್ಟಿದೆ. ಗ್ರಾಮದಲ್ಲಿ, ಕೆಲ ಸಮಯದಿಂದ ದೇವಾಲಯ ಪ್ರವೇಶ ಮತ್ತು ಎರಡು ಗುಂಪುಗಳ ನಡುವಿನ ಭೂ ವಿವಾದವಿತ್ತು. ಇದು ದಲಿತರ ಮೇಲೆ ಪ್ರಬಲ ಜಾತಿಯವರಿಗೆ ದ್ವೇಷ ಬೆಳೆಸಿತ್ತು. ಪೆಟ್ರೋಲ್ ಪಂಪ್ನಲ್ಲಿ ನಡೆದ ಜಗಳದಿಂದ ಪ್ರಬಲ ಜಾತಿಗರ ಜಾತಿ ದ್ವೇಷ ಘರ್ಷಣೆಯನ್ನು ಹುಟ್ಟುಹಾಕಿದೆ ಎಂದು ಹೇಳಲಾಗಿದೆ.
ಘರ್ಷಣೆಯಲ್ಲಿ ಹಲವಾರು ಮನೆಗಳು, ಖಾಸಗಿ ವಾಹನಗಳು ಮತ್ತು ಸರ್ಕಾರಿ ಬಸ್ಗೆ ಹಾನಿಯಾಗಿದೆ. ಘರ್ಷಣೆಯಲ್ಲಿ ಕೆಲವು ದಲಿತ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಘರ್ಷಣೆ ಪ್ರಕರಣದಲ್ಲಿ ಈವರೆಗೆ ಎರಡೂ ಸಮುದಾಯಗಳ ಕನಿಷ್ಠ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪೊಲೀಸರ ಪ್ರಕಾರ, ಎರಡೂ ಸಮುದಾಯಗಳ ಕೆಲ ಯುವಕರು ಕುಡಿದ ಅಮಲಿನಲ್ಲಿ ಘರ್ಷಣೆ ನಡೆಸಿದ್ದಾರೆ. ಇದು ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ಹಲ್ಲೆಗಳಿಗೆ ಕಾರಣವಾಗಿದೆ. ಪ್ರಬಲ ಜಾತಿ ಸಮುದಾಯದ ಕನಿಷ್ಠ 13 ಜನರನ್ನು ಬಂಧಿಸಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಮತ್ತು ಬಿಎನ್ಎಸ್ನ ಕೊಲೆಯತ್ನ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ಒಬ್ಬನಾದ 17 ವರ್ಷದ ದಲಿತ ಯುವಕ ದೂರು ನೀಡಿದ್ದು, ಆತನ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದೇವೆ. ದೇವಾಲಯದ ಉತ್ಸವದ ಸಮಯದಲ್ಲಿ ಜಾತಿ ನಿಂದನೆ ಮಾಡಿದ ಐದು ಜನರ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಯುವಕ ದೂರಿನಲ್ಲಿ ಆರೋಪಿಸಿದ್ದಾರೆ.
“ಅವರು (ಪ್ರಬಲ ಜಾತಿಯ ಆರೋಪಿಗಳು) ಮೊದಲು ನನ್ನ ಜಾತಿಯ ಕಾರಣಕ್ಕೆ ನನ್ನನ್ನು ಮೇಲೆ ಜಾತಿ ನಿಂದನೆ ಮಾಡಿದರು. ಬಳಿಕ, ದೇವಸ್ಥಾನದ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಜಗಳ ಪ್ರಾರಂಭವಾಯಿತು. ನಂತರ ನನ್ನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದರು” ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾರೆ.
ದಲಿತ ಸಂತ್ರಸ್ತೆ ಎಂ ಜಯಂತಿ (47) ಮಾತನಾಡಿ, ತನ್ನ ತಲೆಯ ಹಿಂಭಾಗಕ್ಕೆ ಕೋಲುಗಳಿಂದ ಹೊಡೆದಿದ್ದಾರೆ ಎಂದು ಹೇಳಿದರು. ಮತ್ತೊಬ್ಬ ಸಂತ್ರಸ್ತೆ ಪಿ ಪ್ರಿಯಾಂಕಾ, “ಮನೆಯ ಬಳಿ ನನ್ನ ಮಗುವನ್ನು ಹಿಡಿದುಕೊಂಡು ನಿಂತಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಬೈಕನ್ನು ಒಡೆದು ನಾಶ ಮಾಡಿದ್ದಾರೆ” ಎಂದು ದೂರಿದ್ದಾರೆ.
ಈ ವರದಿ ಓದಿದ್ದೀರಾ?: ವೇಡನ್ ಎಂಬ ದಲಿತಪ್ರಜ್ಞೆಯ ಪ್ರಖರ ಕಾವ್ಯ ಜ್ವಾಲೆ
ಸುಮಾರು 200 ದಲಿತ ಕುಟುಂಬಗಳು ವಾಸಿಸುವ ಗ್ರಾಮದ ತಿರುವಳ್ಳುವರ್ ಬೀದಿಯಲ್ಲಿ ಹಿಂಸಾಚಾರ ನಡೆದಿದೆ. ತಿರುವಳ್ಳುವರ್ ಬೀದಿಯಲ್ಲಿರುವ ಎಸ್. ಮಲ್ಲಿಕಾ ಅವರ ಮನೆಯೂ ಬೆಂಕಿಗೆ ಆಹುತಿಯಾಗಿದೆ. “ಅದೃಷ್ಟವಶಾತ್, ನಾನು ನನ್ನ ಮೊಮ್ಮಗನೊಂದಿಗೆ ಆಸ್ಪತ್ರೆಯಲ್ಲಿದ್ದೆ. ಇಲ್ಲದಿದ್ದರೆ, ನಮ್ಮ ಮನೆ ಸುಟ್ಟವರು, ನಮ್ಮನ್ನೂ ಜೀವಂತವಾಗಿ ಸುಟ್ಟುಬಿಡುತ್ತಿದ್ದರು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನು ಸಚಿವ ಎಸ್. ರೆಗುಪತಿ ಮತ್ತು ತಿರುಚ್ಚಿ ವಲಯದ ಡಿಐಜಿ ವರುಣ್ಕುಮಾರ್ ಸೋಮವಾರ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಲವನ್ ಅವರು ವಡಕಾಡು ಹಿಂಸಾಚಾರವನ್ನು ವೈಯಕ್ತಿಕ ವಿವಾದ ಎಂದು ಅಕಾಲಿಕವಾಗಿ ಘೋಷಿಸಿದ್ದಕ್ಕಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನ್ಯಾಯಯುತ ತನಿಖೆ ನಡೆಸಬೇಕೆಂದು ಅಗ್ರಹಿಸಿದ್ದಾರೆ. ವಡಕಾಡುವಿನಲ್ಲಿರುವ ಅಯ್ಯನಾರ್ ದೇವಾಲಯವನ್ನು ದಲಿತರಿಗೆ ಮತ್ತೆ ತೆರೆಯಬೇಕು, ಹತ್ತಿರದ ಖಾಲಿ ಭೂಮಿಯಲ್ಲಿ ಅವರಿಗೆ ಅಧಿಕೃತವಾಗಿ ಪ್ರವೇಶ ನೀಡಬೇಕು ಎಂದು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.