ರಾಜ್ಯ ಬಜೆಟ್ನಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಕಟ್ಟಡ ದುರಸ್ತಿ ಸೇರಿದಂತೆ ಇತರ ಸೌಲಭ್ಯಗಳ ಅಭಿವೃದ್ಧಿಗಾಗಿ ಅನುದಾನ ಘೋಷಿಸಲಾಗಿದೆ. ತಜ್ಞರ ಸಮಿತಿ ನೇಮಕ ಮಾಡಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಹಾಗೂ ಹೊಸ ಶಿಕ್ಷಣ ನೀತಿ-2020 (ಎನ್ಇಪಿ) ಕೈಬಿಟ್ಟು ರಾಜ್ಯಕ್ಕೆ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅನುದಾನವನ್ನು ಹೆಚ್ಚಿಸಲಾಗಿದೆ. ಸರ್ಕಾರದ ಈ ನಿರ್ಧಾರಗಳು ಸ್ವಾಗತಾರ್ಹವಾಗಿವೆ ಎಂದು ಎಐಡಿಎಸ್ಒ ಹೇಳಿದೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದರುವ ಧಾರವಾಡ ಎಐಡಿಎಸ್ಒ ಜಿಲ್ಲಾಧ್ಯಕ್ಷ ಮಹಾಂತೇಶ್ ಬಿಳೂರ್, “ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ ಎನ್ಇಪಿ ವಿರೋಧಿಸಿ ರಾಜ್ಯದಲ್ಲಿ ಬೆಳೆದ ವಿದ್ಯಾರ್ಥಿ ಹಾಗೂ ಜನ ಚಳುವಳಿಗೆ ಸಂದ ಜಯವಾಗಿದೆ. ರಾಜ್ಯದಲ್ಲಿ ರೂಪಿಸಲಾಗುವ ಹೊಸ ಶಿಕ್ಷಣ ನೀತಿಯು ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ಕೋಮುವಾದೀಕರಣಕ್ಕೆ ಅವಕಾಶಕೊಡದೆ, ಪ್ರಜತಾಂತ್ರಿಕವಾಗಿಯೂ, ಧರ್ಮನಿರಪೇಕ್ಷವಾಗಿಯೂ ಇರಬೇಕು. ನೀತಿಯನ್ನು ರೂಪಿಸುವಾಗ ಸರ್ಕಾರವು ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳದೆ, ರಾಜ್ಯದ ಶಿಕ್ಷಣ ತಜ್ಞರು, ಪಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡ ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ನಡೆಸಬೇಕು” ಎಂದಿದ್ದಾರೆ.
“ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದ ಲ್ಯಾಪ್ಟಾಪ್, ಸೈಕಲ್ ವಿತರಣೆಯಂತಹ ಕಲ್ಯಾಣ ಯೋಜನೆಗಳಿಗೆ ಅನುದಾನ ಘೋಷಣೆ ಆಗಿಲ್ಲ. ಹಿಂದಿನ ಸರ್ಕಾರದ ಬಜೆಟ್ಗಿಂತ ಈ ಬಜೆಟ್ನಲ್ಲಿ ಶಿಕ್ಷಣಕ್ಕೆ ಶೇಕಡಾ ಒಂದರಷ್ಟು ಅನುದಾನ ಕಡಿತಗೊಳಿಸಿರುವುದರ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬುದು ವಿದ್ಯಾರ್ಥಿ ಸಮುದಾಯದ ಬಹುದಿನಗಳ ಅಪೇಕ್ಷಿಯಾಗಿತ್ತು. ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಿದ್ಯಾರ್ಥಿಗಳ ಸೌಲಭ್ಯಗಳಿಗೂ ಅನುದಾನದ ಕೊರತೆಯಿದೆ. ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಲು ಬಜೆಟ್ಟಿನ ಹೊರತಾಗಿಯೂ ಸರ್ಕಾರವು ಅನುದಾನ ನೀಡಬೇಕು” ಎಂದು ಆಗ್ರಹಿಸಿದ್ದಾರೆ.