- ‘ಪೆನ್ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಶೋಭೆ ತರಲ್ಲ’
- ‘ಲೋಕಸಭೆ ಚುನಾವಣೆ; ಎರಡು ಪಕ್ಷಗಳು ಒಟ್ಟಾಗಿ ಎದುರಿಸುತ್ತವೆ’
ಎಚ್ ಡಿ ಕುಮಾರಸ್ವಾಮಿ ಓರ್ವ ಹಿರಿಯ ನಾಯಕ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅಲ್ಲದೇ ಮಾಜಿ ಪ್ರಧಾನಿಗಳ ಮಗನಾಗಿದ್ದುಕೊಂಡು ಪೆನ್ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, “ದಾಖಲೆ ಇದ್ದರೆ ತೋರಿಸಲಿ. ಇಲ್ಲ ಅಂದರೆ ಕುಮಾರಸ್ವಾಮಿ ನಡೆ ಒಂದು ಅರ್ಥದಲ್ಲಿ ಬ್ಲ್ಯಾಕ್ಮೇಲ್ ತರ ಕಾಣುತ್ತದೆ” ಎಂದು ಕಿಡಿಕಾರಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾ
“ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಕಾ ಆಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಶಹಬ್ಬಾಸ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಈ ಎರಡು ಪಕ್ಷಗಳು ಒಟ್ಟಾಗಿ ಎದುರಿಸುತ್ತವೆ” ಎಂದರು.
“ಸಂವಿಧಾನದ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ವಿರೋಧ ಪಕ್ಷದ ನಾಯಕ ಇಲ್ಲದಿರುವುದು ದುರಂತ ಸಂಗತಿ. ಮೇಲ್ಮನೆಯಲ್ಲಿಯೂ ಇಲ್ಲ, ಕೆಳ ಮನೆಯಲ್ಲಿಯೂ ಇಲ್ಲ. ಬಿಜೆಪಿಯವರು ತಮಗೆ ಯೋಗ್ಯತೆ ಇಲ್ಲ ಎಂದು ವಿಪಕ್ಷ ನಾಯಕ ಸ್ಥಾನವವನ್ನು ಕುಮಾರಸ್ವಾಮಿಗೆ ವಹಿಸಿದ್ದಾರೆ” ಎಂದು ಟೀಕಿಸಿದರು.
ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಹೊರಗಿನಿಂದ ಬಂದವರಿಂದ ಪಕ್ಷ ಹಾಳಾಗಿದೆ ಎಂಬ ಹೇಳಿಕೆಯನ್ನು ಕೆ ಎಸ್ ಈಶ್ವರಪ್ಪ ಹಿಂಪಡೆದಿದ್ದಾರೆ. ಹಾಳಾದವರು ಆ 17 ಜನರು. ಸುಖ ಪಟ್ಟವರು ಇವರು. ಈಶ್ವರಪ್ಪ ಲೂಟಿ ಮಾಡಿ ಮಂತ್ರಿಗಿರಿ ಕಳೆದುಕೊಂಡರು” ಎಂದು ಕುಟುಕಿದರು.
ಸಮಸ್ಪರ್ಶಿ ಬಜೆಟ್
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ ಬಜೆಟ್ ಸರ್ವ ಜನ, ಸಮ ಸ್ಪರ್ಶಿಯಿಂದ ಕೂಡಿದೆ. ಸುಸಂಸ್ಕೃತ ಸಮಾಜಕ್ಕೆ ಉತ್ತಮ ಬಜೆಟ್ ಆಗಿದೆ. ಅಕ್ಷರ, ಅನ್ನ, ಆರೋಗ್ಯಕ್ಕೆ ಒತ್ತು ನೀಡಿದ್ದಾರೆ” ಎಂದು ಬಣ್ಣಿಸಿದರು.
“ಸಮಾಜ ಕಲ್ಯಾಣ, ಮಹಿಳೆಯರ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಅನುದಾನ ನೀಡಲಾಗಿದೆ. ಸಾಮಾನ್ಯ ಜನಕ್ಕೆ ಮೂಲಸೌಕರ್ಯ ನೀಡಿದೆ. ಬಜೆಟ್ನಲ್ಲಿ ಎಲ್ಲ ಜಾತಿ, ಜನಾಂಗ, ಭಾಷಿಕರಿಗೆ ಬೇಸಿಕ್ ಬ್ರೆಡ್ ನೀಡಿದೆ. ಕನ್ನಡ ಪುಸ್ತಕ ಖರೀದಿಗೆ ಅನುದಾನ ನೀಡಿದೆ. ಇದು ತಾಜಾ ಅಪ್ಪಟ ಕನ್ನಡ ಸರ್ಕಾರ ಆಗಿದೆ” ಎಂದರು.
“ಐದು ಗ್ಯಾರಂಟಿಗಳಿಗೆ ಜಾತಿ ಇಲ್ಲ, ಧರ್ಮ ಇಲ್ಲ, ರಾಜಕೀಯ ಇಲ್ಲ. ಉಳ್ಳವರು ಈ ಯೋಜನೆಗಳನ್ನು ನಿರಾಕರಿಸಬೇಕು. ಆದರೆ, ತಮ್ಮಲ್ಲಿ ಕೋಟ್ಯಂತರ ದುಡ್ಡು ಇದ್ದವರು ಕೂಡ ಸಾರಥಿ ಸಾಲಿನಲ್ಲಿ ನಿಂತು ಯೋಜನೆಯ ಲಾಭ ಪಡೆಯಲು ಮುಂದಾಗಿದ್ದಾರೆ. ಪಂಚಾಯಿತಿಗಳಲ್ಲಿ ಸಚಿವರು ಕುಳಿತುಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.