- ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಸಿಎಂ ಅಭಿಮತ
- ಹೊರ ಗುತ್ತಿಗೆಯಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ
ಬೋಧಕರು ಜಾತ್ಯತೀತವಾಗಿಲ್ಲದಿದ್ದರೆ, ಶಿಕ್ಷಕರಲ್ಲೇ ವೈಚಾರಿಕ ಪ್ರಜ್ಞೆ ಇಲ್ಲದಿದ್ದರೆ ಮಕ್ಕಳಲ್ಲಿ ಜ್ಞಾನದ ವಿಕಾಸ ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಶಿಕ್ಷಣ ತಜ್ಞ ಡಾ. ವಿ ಪಿ ನಿರಂಜನಾರಾಧ್ಯ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿದರು.
“ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಜಾಗತಿಕ ಮಟ್ಟದ ಬಂಡವಾಳವನ್ನು ಆಕರ್ಷಿಸಬೇಕು ಎಂದು ಶಾಂತಿ, ಸುವ್ಯವಸ್ಥೆ ಮತ್ತು ಉದ್ಯಮ ಸ್ನೇಹಿ ವಾತಾವರಣ ಇರಬೇಕು. ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಹೆಚ್ಚುತ್ತದೆ. ಹೀಗಾಗಿ ಜಾತಿ-ಧರ್ಮದ ಸಂಘರ್ಷ ಇಲ್ಲದ ಶಾಂತಿಯುತ ಸಮಾಜ ಇರಬೇಕು” ಎಂದರು.
“ನಮ್ಮ ಯುವ ಸಮೂಹದ ಶಕ್ತಿ ಮತ್ತು ಚೈತನ್ಯ ದುರುಪಯೋಗ ಆಗಬಾರದು, ಜಾತಿ-ಧರ್ಮದ ಹೆಸರಲ್ಲಿ ಗಲಭೆಗಳಿಗೆ ಯುವ ಸಮೂಹ ದುರ್ಬಳಕೆ ಆಗುವುದನ್ನು ತಪ್ಪಿಸುವ ರೀತಿಯಲ್ಲಿ ನಮ್ಮ ಸರ್ಕಾರ ನೀತಿ ರೂಪಿಸಿದೆ. ಇದಕ್ಕಾಗಿ ಕೌಶಲ್ಯ ತರಬೇತಿ ಜತೆಗೆ ನಿರುದ್ಯೋಗಿ ಯುವ ಸಮೂಹಕ್ಕೆ 24 ತಿಂಗಳ ಕಾಲ ಯುವನಿಧಿ ನೀಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
ಖಾಲಿ ಇರುವ ಹುದ್ದೆಗಳ ಭರ್ತಿ
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದರಂತೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ಹೊರ ಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ. ಕೈಗಾರಿಕೋದ್ಯಮಿಗಳ ಜತೆ ಸಭೆ ಮಾಡಿದ್ದೇನೆ. ಅವರಿಗೆ ಯಾವ ರೀತಿಯ ಕೌಶಲ್ಯದ ವಿದ್ಯಾರ್ಥಿಗಳ ಅಗತ್ಯವಿದೆ ಎನ್ನುವ ಬಗ್ಗೆ ಚರ್ಚಿಸಿದ್ದೇನೆ. ಅದಕ್ಕೆ ತಕ್ಕಂತೆ ಶಿಕ್ಷಣವನ್ನು ರೂಪಿಸುವ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅರ್ಹರನ್ನು ಸೃಷ್ಟಿಸಬೇಕಾಗುತ್ತದೆ” ಎಂದು ಹೇಳಿದರು.
“ಹಿಂದಿನ ಸರ್ಕಾರದಲ್ಲಿ ಅನೈತಿಕ ಪೊಲೀಸ್ ಗಿರಿ ಅತ್ಯಂತ ನಿರ್ಲಜ್ಜತನದಿಂದ ಆಚರಿಸಲ್ಪಡುತ್ತಿತ್ತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅನೈತಿಕ ಪೊಲೀಸ್ ಗಿರಿಗೆ ಬರೆ ಎಳೆದಿದ್ದೇವೆ. ಸಮ ಸಮಾಜ ನಿರ್ಮಾಣ ಆಗದ ಹೊರತು ದಲಿತರ, ಅಲ್ಪ ಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯ ಹೋಗುವುದಿಲ್ಲ. ಹೀಗಾಗಿ ಕುವೆಂಪು ಅವರ ಮಾತಿನಂತೆ ರಾಜ್ಯವನ್ನು ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ” ಎಂದರು.
ಸಿಎಂ ಜೊತೆ ಜನಮನ ಸಂವಾದ
ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಲು ಸರ್ಕಾರದ ಕಾರ್ಯಯೋಜನೆ ಏನು? ನಿರಂಜನಾರಾಧ್ಯ ಅವರ ಪ್ರಶ್ನೆ
ಸಿಎಂ ಉತ್ತರ: ಹಿಂದಿನ ಸರ್ಕಾರ ಶಾಲಾ ಪಠ್ಯ ವಿಷಯಗಳನ್ನೆ ತಿರುಚಿಬಿಟ್ಟರು, ಹಾಗಾಗಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ, ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗಿ, ಮೌಢ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ಯಾವುದೇ ಕಾಯ್ದೆ ಕಾನೂನು ತಂದರೂ ಜಾರಿಗೆ ತೊಡಕಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಜಾರಿಗೆ ನಿಯಮಾವಳಿಗಳನ್ನು ರೂಪಿಸಲು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇನೆ.
ಸಾರ್ವಜನಿಕ ಬಂಡವಾಳ ಹೂಡಿಕೆ ಕಡಿಮೆಯಾಗಿದೆ ಯಾಕೆ? ನಿಮ್ಮ ಸರ್ಕಾರದ ತೀರ್ಮಾನವೇನು? ಪ್ರೊ. ಟಿ ಆರ್ ಚಂದ್ರಶೇಖರ್ ಪ್ರಶ್ನೆ
ಸಿಎಂ ಉತ್ತರ: ಸಿಂಗಲ್ ವಿಂಡೋ ಎಜೆನ್ಸಿಗೆ ನಾನೇ ಅಧ್ಯಕ್ಷನಾಗಿದ್ದೇನೆ. ಅದರಲ್ಲಿ ಕೆಲವು ದೋಷಗಳವೆ. ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಕೌಶಲ್ಯ ಇರುವ ಶಿಕ್ಷಣ-ತರಬೇತಿ ಕೊಡಬೇಕು. ಎಲ್ಲ ಪದವೀಧರರಿಗೆ, ಡಿಪ್ಲೋಮಾ ಓದಿರುವವರಿಗೆ ಎರಡು ವರ್ಷ ನಿರುದ್ಯೋಗ ಭತ್ಯೆ ಕೊಡುತ್ತಿದ್ದೇವೆ. ಆ ಸಮಯದಲ್ಲಿ ಉದ್ಯೋಗಕ್ಕಾಗಿ ಕೌಶಲ್ಯಾಭಿವೃದ್ದಿಗೆ ಯತ್ನ, ಕೆಲಸ ಪಡೆಯುವ ಪ್ರಯತ್ನ ಮಾಡಬೇಕು.
ರೈತರು ಬೆಳೆಯುವ ಫಸಲು ಖರೀದಿಸಿ ಅನ್ನಭಾಗ್ಯಕ್ಕೆ ಬಳಸಬಹುದಲ್ಲವಾ? ಸಭಿಕರ ಪ್ರಶ್ನೆ
ಸಿಎಂ ಉತ್ತರ: ಅಸ್ಸಾಂ, ಛತ್ತೀಸಗಢ ಸಿಎಂಗಳ ಜೊತೆ ಮಾತಾಡಿದ್ದೇನೆ. ಆಂಧ್ರ-ತೆಲಂಗಾಣದವರು ಭತ್ತ ಕೊಡುತ್ತೇವೆ ಅಕ್ಕಿ ಕೊಡಲ್ಲ ಎಂದರು. ಕೇಂದ್ರ ಸರ್ಕಾರದ ಏಜೆನ್ಸಿಗಳನ್ನೆ ಕೊಟೇಷನ್ಗೆ ಕರೆದಿದ್ದೆ ಹೆಚ್ಚು ಹಣ ಕೇಳಿದರು. 32.24 ರೂಗೆ ಕೇಳಿದೆ. ಎಫ್ಸಿಎಯನ್ನು ಕೇಂದ್ರ ತಡೆದಿದೆ. ನಮ್ಮಲ್ಲೇ ಖರೀದಿ ಮಾಡಲು ಅಗತ್ಯದಷ್ಟು ಲಭ್ಯ ಇಲ್ಲ. ರಾಜ್ಯದ ರೈತರ ರಾಗಿ ಮತ್ತು ಜೋಳ ಆರು ತಿಂಗಳಿಗೆ ಆಗುವಷ್ಟು ಮಾತ್ರ ಇದೆ. ಹಾಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗಾಗಿ ಪ್ರಯತ್ನ ಮಾಡುತ್ತಿದ್ದೇವೆ.
ರಾಜ್ಯದಲ್ಲಿ ಮುಟ್ಟಿನ ರಜೆ ಘೋಷಣೆ ಯಾವಾಗ? ಸಭಿಕರ ಪ್ರಶ್ನೆ
ಸಿಎಂ ಉತ್ತರ: ಈ ಬಗ್ಗೆ ಪರಿಶೀಲಿಸಿ ಯೋಗ್ಯ ನಿರ್ಧಾರ ತೆಗೆದುಕೊಳ್ಳಲಾಗುವುದು.
ಶಿಕ್ಷಣದಲ್ಲಿ ಖಾಸಗೀಕರಣ ತಡೆಯಲು ಹಾಗೂ ಕನ್ನಡ ಮಾಧ್ಯಮ ಶಿಕ್ಷಣ ಉಳಿಸಲು ಏನು ಕ್ರಮವಹಿಸುವಿರಿ? ಸಭಿಕರ ಪ್ರಶ್ನೆ
ಸಿಎಂ ಉತ್ತರ: ಖಾಸಗಿ ಶಾಲೆಗಳನ್ನಂತೂ ಮುಚ್ಚಲು ಸಾಧ್ಯವಿಲ್ಲ. ಸಾಮಾಜಿಕ ಬದ್ಧತೆ, ಕಳಕಳಿ ಇರದಿದ್ದರೆ ಯಾವ ಕಾನೂನು ಮಾಡಿದರೂ ವ್ಯರ್ಥ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿದರೆ ಸಾಧ್ಯವಾಗಲಿದೆ.
ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಬಗ್ಗೆ ಹೇಳಿ?: ಸಭಿಕರ ಪ್ರಶ್ನೆ
ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಇರುವ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ.
ಅಕಾಡೆಮಿಗಳ ನೇಮಕಾತಿಗೆ ಸಮಿತಿ ರಚನೆ
“ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ ಮಾಡಲು ಒಂದು ಆಯ್ಕೆ ಸಮಿತಿ ಮಾಡುತ್ತೇವೆ. ಈ ಆಯ್ಕೆ ಸಮಿತಿ ಮತಾಂಧ ಮತ್ತು ಸಮಾಜ ವಿಭಜಿಸುವ ಮನಸ್ಥಿತಿಯವರು ಒಳಗೆ ಪ್ರವೇಶಿಸದಂತೆ ಸ್ಕ್ರೀನಿಂಗ್ ನಡೆಸುತ್ತಾರೆ” ಎಂದು ಇದೇ ವೇಳೆ ಸಿಎಂ ತಿಳಿಸಿದರು.