ದೇವಾಲಯ ಪ್ರವೇಶಸಿದ್ದಕ್ಕೆ ಪರಿಶಿಷ್ಟ ಜಾತಿಯ ಯುವಕನೊಬ್ಬನನ್ನು ದೇವಾಲಯದಿಂದ ಹೊರ ಹಾಕಿರುವ ಘಟನೆ ತುಮಕೂರಿನ ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ನಡೆದಿದೆ.
ಶನಿವಾರ ಸಂಜೆ ಯುವಕ ಸ್ವಾಮಿನಾಥ್ ಪೂಜೆ ಮಾಡಿಸಲೆಂದು ಗ್ರಾಮದಲ್ಲಿರುವ ರಾಮಾಂಜನೇಯ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಒಕ್ಕಲಿಗ ಸಮುದಾಯದವರು ಯುವಕನನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಅನಾದಿ ಕಾಲದಿಂದ ನಿಮ್ಮ ಜಾತಿಯವರು (ಪರಿಶಿಷ್ಟ ಜಾತಿಯವರು) ದೇಗುಲದ ಒಳಗೆ ಬಂದಿಲ್ಲ. ಈಗಲೂ ಬರುವುದು ಬೇಡ. ನೀನ್ಯಾಕೆ ಬಂದೆ? ಎಂದು ಹೊರ ನಡೆಯಲು ತಾಕೀತು ಮಾಡಿದ್ದಾರೆ.
ಈ ಕುರಿತು ಯುವಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಊರಿನ ಜನರೆಲ್ಲ ಒಳಗಡೆ ಕುಳಿತಿರುವಾಗ ನಾನೇಕೆ ಹೊರಗಡೆ ನಿಲ್ಲಬೇಕು. ಒಳಗಡೆ ಹೋಗಿದ್ದು ತಪ್ಪು ಹೇಗಾಗುತ್ತದೆ? ನೀವು ಒಳಗೆ ಹೋಗುವುದಾದರೇ ನಾನೇಕೆ ಹೋಗಬಾರದು? ಸಂವಿಧಾನಕ್ಕೆ ಗೌರವ ಇಲ್ಲವೆ?” ಎಂದು ಯುವಕ ಪ್ರಶ್ನಿಸಿರುವುದು ವಿಡಿಯೋದಲ್ಲಿ ಸೇರೆಯಾಗಿದೆ.
ಆಗ ಸ್ಥಳೀಯರು ನಿಮ್ಮವರು (ಪರಿಶಿಷ್ಟ ಜಾತಿ) ಯಾರು ಒಳಗೆ ಬಂದಿಲ್ಲ. ಒಬ್ಬರಿಗೆ ಹೇಳಿದರೆ ಉಳಿದವರು ಅರ್ಥ ಮಾಡಿಕೊಳ್ಳಬೇಕು. ನೀನು ಒಳಗಡೆ ಹೋಗಬೇಡ ಎಂದು ಆಗ್ರಹಿಸಿದ್ದಾರೆ. ಇದರಿಂದ ಕೆಲ ವೇಳೆ ದೇವಾಲಯದ ಬಳಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: ರಾಸಲೀಲೆ ಪ್ರಕರಣ | ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪಗೆ 14 ನ್ಯಾಯಾಂಗ ಬಂಧನ
ಘಟನೆ ಸಂಬಂಧ ಯುವಕ ಭಾನುವಾರ ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ ದೂರು ವಾಪಸ್ ಪಡೆದಿದ್ದಾರೆ. ಈ ಬೆಳೆವಣಿಗೆ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಲ್ ಡಿವೖಎಸ್ಪಿ ಮಂಜುನಾಥ್, ತಹಶೀಲ್ದಾರ್ ಶಿರೀನ್ ತಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಅವರು ಸ್ಥಳಕ್ಕೆ ಭೇಟಿನೀಡಿ ಶಾಂತಿಸಭೆ ನಡೆಸಿದರು. ಶಾಂತಿಸಭೆಯಲ್ಲಿ ಸಂತ್ರಸ್ತ ಯುವಕ, ಒಕ್ಕಲಿಗ ಸಮುದಾಯದವರು ಹಾಗೂ ಗ್ರಾಮಸ್ಥರು ಇದ್ದರು.
ಮುಂದಿನ ದಿನಗಳಲ್ಲಿ ದೇವಸ್ಥಾನ ಪ್ರಶೇಶಿಸಲು ಯಾರಿಗೂ ಅಡ್ಡಿಪಡಿಸಬಾರದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.