ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ನಡೆಸಿದ ಬಳಿಕ ದೇಶದ ಹಲವು ಭಾಗಗಳಲ್ಲಿ ನವಜಾತ ಹೆಣ್ಣು ಶಿಶುಗಳಿಗೆ ‘ಸಿಂಧೂರ್’ ಎಂದು ಹೆಸರಿಡಲಾಗುತ್ತಿದೆ. ಅದರಲ್ಲೂ ಉತ್ತರ ಪ್ರದೇಶ ಒಂದು ರಾಜ್ಯದಲ್ಲೇ ಒಟ್ಟು 17 ನವಜಾತ ಹೆಣ್ಣು ಶಿಶುಗಳಿಗೆ ‘ಸಿಂಧೂರ್’ ಎಂದು ನಾಮಕರಣ ಮಾಡಲಾಗಿದೆ. ಅದು ಕೂಡಾ ಬರೀ ಎರಡು ದಿನದ್ಲಲೇ ಈ ನಾಮಕರಣ ನಡೆದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ವೈದ್ಯ ಆರ್ ಕೆ ಶಾಹಿ, “ಮೇ 10 ಮತ್ತು ಮೇ 11ರ ನಡುವೆ ಖುಷಿನಗರ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 17 ನವಜಾತ ಹೆಣ್ಣು ಶಿಶುಗಳಿಗೆ ಕುಟುಂಬಸ್ಥರು ಸಿಂಧೂರ್ ಎಂದು ಹೆಸರಿಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಮಹಿಳಾ ಅಧಿಕಾರಿಗಳಾದ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಯಾರು?
ಪಾಕಿಸ್ತಾನದ ಭಯೋತ್ಪಾದಕ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆಸಿದ ಭಯೋತ್ಪಾಕ ದಾಳಿಯಲ್ಲಿ ಒಟ್ಟು 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ತಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇದಾದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಸದ್ಯ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಭಯೋತ್ಪಾದನೆ ವಿರುದ್ಧದ ಆಪರೇಷನ್ ಸಿಂಧೂರ ಮುಂದುವರಿದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪಹಲ್ಗಾಮ್ ದಾಳಿಯಲ್ಲಿ ಮಹಿಳೆಯರನ್ನು ಬಿಟ್ಟು ಪುರುಷರನ್ನು ಮಾತ್ರ ಹತ್ಯೆ ಮಾಡಲಾಗಿದೆ. ಹಲವು ಮಂದಿ ತನ್ನ ಪತಿ, ಪ್ರೇಮಿಯನ್ನು ಕಳೆದುಕೊಂಡಿದ್ದಾರೆ. ಈ ದಾಳಿಗೆ ಪ್ರತಿರೋಧವಾಗಿ ಮಹಿಳೆಯರ ಸಿಂಧೂರ ಎಂಬ ಅರ್ಥದಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಲಾಗಿದೆ. ಇದೀಗ ಸಿಂಧೂರ ಅಥವಾ ಸಿಂಧೂರ್ ಎಂಬ ಹೆಸರನ್ನು ಪೋಷಕರು ತಮ್ಮ ಮಕ್ಕಳಿಗೆ ಇಡಲು ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿಗೆ ಮುಗಿಬಿದ್ದ ಬಾಲಿವುಡ್ ನಿರ್ಮಾಪಕರು
ಭಾರತೀಯ ಸೇನೆಗೆ ಗೌರವಾರ್ಥವಾಗಿ ನನ್ನ ಮಗುವಿಗೆ ಸಿಂಧೂರ್ ಎಂದು ಹೆಸರಿಡುತ್ತೇನೆ ಎಂದು ಖುಷಿನಗರ ನಿವಾಸಿ ಅರ್ಚನ ಶಾಹಿ ಮಾಧ್ಯಮಕ್ಕೆ ತಿಳಿಸಿದ್ದಾರೆ. “ಪಹಲ್ಗಾಮ್ ದಾಳಿಯಲ್ಲಿ ಹಲವು ಮಹಿಳೆಯರು ತನ್ನ ಪತಿಯನ್ನು ಕಳೆದುಕೊಂಡರು. ಅದಕ್ಕೆ ಪ್ರತೀಕಾರವಾಗಿ ಭಾರತೀಯರ ಸೇನೆ ಆಪರೇಷನ್ ಸಿಂಧೂರ ನಡೆಸಿದೆ. ಈಗ ಸಿಂಧೂರ ಬರೀ ಪದವಲ್ಲ, ಅದೊಂದು ಭಾವನೆ. ಆದ್ದರಿಂದ ನಮ್ಮ ಮಗಳಿಗೆ ಅದೇ ಹೆಸರು ಇಡಲು ನಿರ್ಧರಿಸಿದೆವು” ಎಂದು ಅರ್ಚನ ಹೇಳಿದ್ದಾರೆ.
ಹೀಗೆ ಉತ್ತರ ಪ್ರದೇಶದಲ್ಲೇ ಒಟ್ಟು 17 ನವಜಾತ ಹೆಣ್ಣು ಶಿಶುಗಳಿಗೆ ‘ಸಿಂಧೂರ್’ ಎಂದು ನಾಮಕರಣ ಮಾಡುವ ನಿರ್ಧಾರವನ್ನು ಪೋಷಕರು ಘೋಷಿಸಿದ್ದಾರೆ. ಬಿಹಾರದ ಪಟನಾದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿದೆ. ತಮ್ಮ ಹೆಣ್ಣು ಶಿಶುವಿಗೆ ಪೋಷಕರು ಸಿಂಧೂರ, ಸಿಂಧೂರಿ, ಸಿಂಧು ಎಂದು ಹೆಸರಿಡುತ್ತಿದ್ದಾರೆ ಎಂದು ವರದಿಯಾಗಿದೆ.
