ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷವು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 14 ಮೇ 2025ರ ಬೆಳಗ್ಗೆ 10.30ಕ್ಕೆ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದ್ದು ಅದರ ಅಂಗವಾಗಿ ದಾವಣಗೆರೆ ಜಿಲ್ಲಾ ಸಮಿತಿಯಿಂದ ದಾವಣಗೆರೆ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಸಭೆಯನ್ನು ಆಯೋಜಿಸಲಾಗಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಎಸ್ಯುಸಿಐ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಅಪರ್ಣಾ ಮಾತನಾಡಿ, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪರ್ಧೆಗೆ ಬಿದ್ದಂತೆ ಬೆಲೆ ಏರಿಕೆಯ ಮೂಲಕ ಜನರನ್ನು ದೋಚುತ್ತಾ, ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಿದ್ದಾರೆ. ಅಡುಗೆ ಅನಿಲ, ಔಷಧಿಗಳು, ವಿದ್ಯುತ್, ಹಾಲು, ಡೀಸೆಲ್, ಮೆಟ್ರೋ, ನೀರು, ಆಸ್ತಿ ತೆರಿಗೆ ಎಲ್ಲವೂ ದುಬಾರಿಯಾಗಿವೆ. ಎಲ್ಲಾ ತೆರಿಗೆಗಳ ಹೊರೆ ಹೊರುವ ನಾವು, ನಮ್ಮ ಮಕ್ಕಳ ಶಿಕ್ಷಣಕ್ಕೆ ನಾವೇ ಖರ್ಚು ಮಾಡಬೇಕಾದ ನಮ್ಮ ಆರೋಗ್ಯದ ವೆಚ್ಚವನ್ನು ನಾವೇ ಭರಿಸಬೇಕಾದ ದುರ್ಗತಿಯನ್ನು ಅನುಭವಿಸುತ್ತಿದ್ದೇವೆ. ಏಕೆಂದರೆ ಈ ತೆರಿಗೆಯನ್ನು ಬಳಸಿ ಅವಶ್ಯಕ ಅನುದಾನ ನೀಡದ ಕಾರಣ, ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆಗಳು ದಯನೀಯ ಸ್ಥಿತಿಗೆ ತಳ್ಳಲ್ಪಟ್ಟಿವೆ. ಬದಲಿಗೆ, ಈ ತೆರಿಗೆಯ ಹಣ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ, ದೊಡ್ಡ ಗುತ್ತಿಗೆದಾರರ, ಕೆಂಪು ಗೂಟದ ರಾಜಕಾರಣಿಗಳ ಮತ್ತು ಹಿರಿಯ ಅಧಿಕಾರಿಗಳ ಜೇಬು ಸೇರುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇದಕ್ಕೆ ಈ ಶೋಷಕ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣವಾಗಿದ್ದು, ಅದರ ವಿರುದ್ಧ, ಜನತೆ, ವಿಶೇಷವಾಗಿ ಯುವ ಜನತೆ ಸಿಡಿದೇಳದಂತೆ ಇರಲು, ಅವರನ್ನು ಸಮೂಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಅಶ್ಲೀಲತೆ, ಎಲ್ಲಡೆ ಸಿಗುವ ಮದ್ಯ, ಡ್ರಗ್ಸ್, ಮುಂತಾದ ವ್ಯಸನಗಳಲ್ಲಿ ಮುಳುಗಿಸಲಾಗಿದೆ. ಇದರಿಂದಾಗುವ ಸಾಂಸ್ಕೃತಿಕ ಅಧ:ಪತನದಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮೇರೆ ಮೀರುತ್ತಿವೆ. ಜೊತೆಗೆ, ನಿರುದ್ಯೋಗದ ಜ್ವಾಲೆಯಲ್ಲಿ ನಮ್ಮ ಯುವಜನತೆ ತತ್ತರಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಅಚ್ಛೇ ದಿನದ ಭರವಸೆಯಾಗಲಿ, ಗ್ಯಾರಂಟಿಗಳಾಗಲಿ ರೈತ-ಕಾರ್ಮಿಕರ ಬದುಕನ್ನು ಹಸನು ಮಾಡಿಲ್ಲ. ಬದಲಿಗೆ, ಜನರನ್ನು ಜಾತಿ, ಮತ ಧರ್ಮಗಳ ಅಮಲಿನಲ್ಲಿ ಮುಳುಗಿಸಿ, ಇಂತಹ ಸಮಸ್ಯೆಗಳನ್ನು ಮರೆಮಾಚುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ರಾಜಕಾರಣದಲ್ಲಿ ಹೋರಾಟದ ಜನಪರ ದನಿಗಳೇ ಉಡುಗಿ ಹೋಗಿರುವ ಇಂದಿನ ಪರಿಸ್ಥಿತಿಯಲ್ಲಿ ಜನರ ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದಕ್ಕಾಗಿ ಎಸ್ ಯುಸಿಐ ಮೇ 14 ರಂದು ರಾಜ್ಯ ಮಟ್ಟದ ಬೃಹತ್ ಜನ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ದಾವಣಗೆರೆ ಜಿಲ್ಲೆಯಿಂದ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
“ಬೃಹತ್ ಜನ ಹೋರಾಟದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಅವುಗಳ ಈಡೇರಿಕೆಗೆ ಆಗ್ರಹಿಸಿ ಲಾಗುವುದು. ಸರ್ಕಾರಗಳು ಹೆಚ್ಚಿಸಿರುವ ಎಲ್ಲಾ ಬೆಲೆಗಳನ್ನು ಈ ಕೂಡಲೇ ಹಿಂಪಡೆಯಬೇಕು.
ಸರಕಾರಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಕ್ರಮ ಮತ್ತು ಸಿಬ್ಬಂದಿಯನ್ನು ನೇಮಿಸಬೇಕು. ಉದ್ಯೋಗ ಖಾತ್ರಿ ಕೃಷಿ ಕಾರ್ಮಿಕರಿಗೆ ಕೆಲಸದ ದಿನಗಳನ್ನು 200 ಕ್ಕೆ, ಕೂಲಿಯನ್ನು ರೂ. 600ಕ್ಕೆ ಹೆಚ್ಚಿಸಬೇಕು. ರೈತ ಸಮುದಾಯಕ್ಕೆ ನೆರವು, ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ. ವಿದ್ಯುತ್ ಮಸೂದೆ-2022 (ತಿದ್ದುಪಡಿ)ನ್ನು ಹಿಂತೆಗೆದುಕೊಂಡು, ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕೈಬಿಟ್ಟು, ಮೂಲಭೂತ ಸೌಲಭ್ಯ, ಶಿಕ್ಷಕ ಸಿಬ್ಬಂದಿಯನ್ನು ಒದಗಿಸಬೇಕು.
ನಿರುದ್ಯೋಗದಿಂದ ತತ್ತರಿಸಿರುವ ಯುವಜನರಿಗೆ ಸರಕಾರಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಕೆ.ಪಿ.ಎಸ್.ಸಿ ಸೇರಿದಂತೆ ನೇಮಕಾತಿಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣ. ಅಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಘೋಷಿಸಿ. ಅಲ್ಲಿಯವರೆಗೆ ಕನಿಷ್ಠ ವೇತನ ಪಾವತಿಸಿ. ಎಲ್ಲಾ ಇಲಾಖೆಗಳಲ್ಲಿರುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ. ಮೆಟ್ರೋ ದರ ಹೆಚ್ಚಳ ಹಿಂತೆಗೆದುಕೊಳ್ಳಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರವೇ ಪಟ್ಟಾ ಒದಗಿಸಬೇಕು. ಮಕ್ಕಳ ಮಾನಸಿಕ ಆರೋಗ್ಯ ಮತ್ತು ವ್ಯಕ್ತಿತ್ವದ ಬೆಳವಣಿಗೆಯನ್ನು ಕಾಪಾಡಲು ಎಲ್ಲಾ ಆನ್ಲೈನ್ ಅಶ್ಲೀಲ ಕಾರ್ಯಕ್ರಮಗಳನ್ನು ಈ ಕೂಡಲೇ ನಿಲ್ಲಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರತ ಪಾಕಿಸ್ತಾನ ಮಧ್ಯೆ ಪ್ರಕ್ಷುಬ್ಧ ವಾತಾವರಣ, ವಾಣಿ ವಿಲಾಸ ಜಲಾಶಯಕ್ಕೆ ಪ್ರವೇಶ ನಿರ್ಬಂಧ.
“ಪ್ರತಿಭಟನಾ ಸಭೆಯಲ್ಲಿ ಎಸ್ಯುಸಿಐ(ಸಿ), ಕೇಂದ್ರ ಸಮಿತಿ ಪಾಲಿಟ್ಬ್ಯೂರೊ ಸದಸ್ಯ ಕೆ. ರಾಧಾಕೃಷ್ಣ, ರಾಜ್ಯ ಸೆಕ್ರೆಟೇರಿಯಟ್ ಸದಸ್ಯರು ರಾಮಾಂಜನಪ್ಪ ಅಲ್ಲಳ್ಳಿ, ರಾಜ್ಯ ಕಾರ್ಯದರ್ಶಿ ಕೆ ಉಮಾ, ತಿಪ್ಪೇಸ್ವಾಮಿ ಅಣಬೇರು ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.