ಬುದ್ಧ ಪೂರ್ಣಿಮಾ ಅಂಗವಾಗಿ ದಾವಣಗೆರೆಯ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಚೇರಿಯಲ್ಲಿ ಗೌತಮ ಬುದ್ಧನ ತತ್ವ ಚಿಂತನೆಗಳ ಸ್ಮರಣೆಯೊಂದಿಗೆ ಅಳವಡಿಸಿಕೊಳ್ಳುವ ಚಿಂತನೆಯೊಂದಿಗೆ ಬುದ್ಧ ಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ “ಗೌತಮ ಬುದ್ಧರ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳು ಕಾಲಾತೀತ ಮತ್ತು ಸೀಮಾತೀತವಾಗಿದ್ದು, ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ” ಎಂದು ಅಭಿಪ್ರಾಯಪಟ್ಟರು.
“ಮಾನವನ ಉನ್ನತಿ ಹಾಗೂ ಅವನತಿಗೆ ಆತನು ಮಾಡುವ ಒಳ್ಳೆಯ ಅಥವಾ ಕೆಡುಕಿನ ಕೆಲಸವೇ ಕಾರಣವೆಂದು ಗೌತಮ ಬುದ್ಧರು ಪ್ರತಿಪಾದಿಸಿದರು. ಮನಸ್ಸನ್ನು ಸದಾ ಸ್ವಚ್ಛವಾಗಿಟ್ಟುಕೊಂಡರೆ ವ್ಯಕ್ತಿಯ ಜೊತೆಗೆ ವ್ಯಕ್ತಿತ್ವವು ಬೆಳಗುತ್ತದೆ ಎಂದು ಮನದ ಸೌಂದರ್ಯಕ್ಕಾಗಿ ಬುದ್ಧನು ಧ್ಯಾನವನ್ನು ಆಚರಣೆಗೆ ತಂದರು. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಪ್ರೀತಿಯಿಂದ ದ್ವೇಷವನ್ನು ಗೆಲ್ಲಬಹುದು. ಕೆಡುಕುಗಳನ್ನು ನಿರಾಕರಿಸಿ ಜೀವನವನ್ನು ಪ್ರೀತಿಸಬೇಕೆಂದು ಬೌದ್ಧ ಧರ್ಮದ ಮೂಲ ತತ್ವಗಳಾದ ಶಾಂತಿ, ಕರುಣೆ ಮತ್ತು ಜ್ಞಾನೋದಯದ ಶಾಂತಿ ತತ್ವಗಳನ್ನು ಪ್ರತಿಪಾದಿಸಿದರು” ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ವಕೀಲರು ಮತ್ತು ಚಿಂತಕರಾದ ಬಿ.ಎಂ.ಹನುಮಂತಪ್ಪ ಮಾತನಾಡಿ, “ಮನುಕುಲದ ನೆಮ್ಮದಿಗೆ ಬುದ್ದನ ತತ್ವಸಿದ್ಧಾಂತಗಳನ್ನು ಪಾಲಿಸುವುದು ಅವಶ್ಯಕವಾಗಿದೆ, ಅಶಾಂತಿಯ ಕಾರ್ಮೋಡದ ವಾತಾವರಣದಲ್ಲಿ ಬುದ್ಧನ ಆದರ್ಶಗಳನ್ನು ಪಾಲಿಸುವುದು ಮುಖ್ಯವಾಗಿದೆ. ಬುದ್ದರು ನಡೆದ ದಾರಿ ನಮ್ಮ ಪಥವಾಗಬೇಕಾಗಿದೆ” ಎಂದು ಪ್ರತಿಪಾದಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಸುಶಿಕ್ಷಿತರಾಗಿಸಿ; ಪೊಲೀಸ್ ಉಪಾಧೀಕ್ಷಕ ದಿನಕರ್.
ಕಾರ್ಯಕ್ರಮದಲ್ಲಿ ಮಾತನಾಡಿದ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯರಾದ ಡಾ॥ ಕೆ. ರುದ್ರಪ್ಪ “ಬುದ್ಧನ ಉಪದೇಶಗಳು ಸಾರ್ವಕಾಲಿಕವಾಗಿ ಅವರ ಸಿದ್ಧಾಂತಗಳನ್ನು ಆಚರಣೆಯಲ್ಲಿ ತರುವ ಮೂಲಕ ಮನುಷ್ಯರಲ್ಲಿ ಅರಿವು ಮೂಡಿಸಬೇಕಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ವನಜಾ ಮಹಾಲಿಂಗಯ್ಯ “ಗೌತಮ ಬುದ್ಧರು ಸಮಾಜದಲ್ಲಿನ ಕಂದಾಚಾರ, ಮೌಡ್ಯ ಅಜ್ಞಾನಗಳ ನಿವಾರಣೆಗೆ ಪ್ರಾಯೋಗಿಕವಾದ ಅರ್ಥಪೂರ್ಣ ಸಿದ್ಧಾಂತಗಳನ್ನು ತಿಳಿಸುವ ಮೂಲಕ ಜಗತ್ತಿನ ಬೆಳಕಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು,ರಂಗಭೂಮಿ ನಟ ವಿನಾಯಕ ನಾಕೋಡ್, ರಂಗಕರ್ಮಿಗಳಾದ ಬಸವನಗೌಡ್ರು, ಬಿ. ಮಂಜುನಾಥ್, ಎಂ.ಪಿ.ನಾಗೇಂದ್ರಯ್ಯ, ಪಕ್ಕೀರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.