ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಸಿ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ತಾಪಮಾನದ ಹಸಿರುಮನೆ ಅನಿಲವನ್ನು ಉತ್ಪಾದಿಸುವ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಜಗತ್ತಿನಲ್ಲಿ ಹವಾಮಾನ ಬದಲಾವಣೆ ತ್ವರಿತಗತಿಯಲ್ಲಿ ಸಾಗುತ್ತಿವೆ. ತಾಪಮಾನ ವೇಗವಾಗಿ ಏರುತ್ತಿದೆ. ಮಳೆ, ಚಳಿ, ಬೇಸಿಗೆ ಕಾಲಗಳೇ ಬದಲಾಗುತ್ತಿವೆ. ಚಳಿಗಾಲದಲ್ಲೂ ಶೆಕೆಯು ಕಾಡುತ್ತಿದೆ. ಭಾರತದ ಹಲವಾರು ಪ್ರದೇಶಗಳಲ್ಲಿ ತಾಪಮಾನವು 50° ಸೆಲ್ಸಿಯಸ್ಅನ್ನೂ ಮೀರುತ್ತಿರುವುದು ವರದಿಯಾಗುತ್ತಿದೆ. ಇದೇ ಸಮಯದಲ್ಲಿ ಹವಾನಿಯಂತ್ರಕ (ಎಸಿ) ಖರೀದಿಯೂ ಭಾರತದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ.
ಕಳೆದ ವರ್ಷ (2024) ಭಾರತದಲ್ಲಿ ಬರೋಬ್ಬರಿ 1.4 ಕೋಟಿ ಎಸಿಗಳು ಮಾರಾಟವಾಗಿವೆ. ಬೇಡಿಕೆ ಇನ್ನೂ ಹೆಚ್ಚುತ್ತಿದೆ. 2025ರಲ್ಲಿ ಎಸಿ ಮಾರಾಟದ ಸಂಖ್ಯೆ ಮತ್ತಷ್ಟು ಹೆಚ್ಚಬಹುದು. ಅಲ್ಲದೆ, ಕೆಲವೇ ವರ್ಷಗಳಲ್ಲಿ ಈ ಸಂಖ್ಯೆಯು 9 ಪಟ್ಟು ಹೆಚ್ಚಳವಾಗಬಹುದು ಎಂದು ವರದಿಯಾಗಿದೆ.
ಭಾರತೀಯರು ತಮ್ಮ ಕೆಲಸದ ಸ್ಥಳಗಳು ಮತ್ತು ಮನೆಯಲ್ಲಿ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ವಾತಾವರಣಕ್ಕಾಗಿ ಎಸಿಗಳ ಮೊರೆಹೋಗುತ್ತಿದ್ದಾರೆ. ಆದರೆ, ತಂಪಾದ ವಾತಾವರಣಕ್ಕಾಗಿ ಬಳಸಲಾಗುವ ಎಸಿಗಳು ಹೆಚ್ಚು ತಾಪಮಾನ ಹೊರಸೂಸುವ ಕಲ್ಲಿದ್ದಲನ್ನು ಸುಡುವ ಮೂಲಕ ಉತ್ಪಾದಿಸುವ ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುತ್ತವೆ. ಜೊತೆಗೆ, ಎಸಿಗಳು ಹೊರಸೂಸುವ ಉಷ್ಣಾಂಶ ಮನೆಗಳ ಹೊರಗಿನ ಪರಿಸರ ಮತ್ತು ರಸ್ತೆಗಳಲ್ಲಿ ಗಾಳಿಯನ್ನು ಮತ್ತಷ್ಟು ಬಿಸಿ ಮಾಡುತ್ತದೆ. ತಾಪಮಾನವು ಮತ್ತಷ್ಟು ಬಿಸಿಯಾಗುವಂತೆ ಮಾಡುತ್ತದೆ ಎಂಬುದನ್ನು ಗಮನಿಸದೆ, ಕಡೆಗಣಿಸಲಾಗಿದೆ.
ಗಮನಾರ್ಹವೆಂದರೆ, ಎಸಿಗಳನ್ನು ಮಾರಾಟ ಮಾಡುವವರು ಕೂಡ ತಮ್ಮ ಮನೆಯಿಂದ ಅಂಗಡಿಗಳಿಗೆ ಹೋಗಲು ಉರಿಯುವ ಶಾಖ, ಬಿಸಿಲನ್ನು ಎದುರಿಸಿಯೇ ಸಾಗಬೇಕು. ಈ ಬಿಸಿ ಝಳದ ಏರಿಕೆಗೆ ಎಸಿಗಳ ಕೊಡುಗೆಯೂ ಪರಿಗಣಿಸುವ ಮಟ್ಟಕ್ಕಿದೆ.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಸಿ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರಸ್ತುತ ಕೇವಲ 7% ಮನೆಗಳು ಮಾತ್ರವೇ ಎಸಿಗಳನ್ನು ಹೊಂದಿವೆ. ಆದರೆ, ಮುಂದಿನ 25 ವರ್ಷಗಳಲ್ಲಿ ಇದು 9 ಪಟ್ಟು ಹೆಚ್ಚಾಗಬಹುದು. ಎಸಿಗಳ ಖರೀದಿಯಲ್ಲಿ ಹೆಚ್ಚಳದ ಜೊತೆಗೆ, ವಿದ್ಯುತ್ ಉತ್ಪಾದನೆಯನ್ನೂ ಮೂರು ಪಟ್ಟು ಹೆಚ್ಚಿಸಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.
140 ಕೋಟಿ ಜನರಿರುವ ಭಾರತವು ಈಗಾಗಲೇ ತಾಪಮಾನದ ಹಸಿರುಮನೆ ಅನಿಲವನ್ನು ಉತ್ಪಾದಿಸುವ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಭಾರತದಲ್ಲಿ ವಿದ್ಯುತ್ಗಾಗಿ 2024-25ರಲ್ಲಿ 100 ಕೋಟಿ ಟನ್ ಕಲ್ಲಿದ್ದಲನ್ನು ಸುಡಲಾಗಿದೆ ಎಂದು ಸರ್ಕಾರಿ ವರದಿಗಳೇ ಹೇಳುತ್ತಿವೆ.
ಈ ಹಿಂದೆ, ಬೇಸಿಗೆ ಸಮಯದಲ್ಲಿ ಬಹುತೇಕ ಜನರು ತಮ್ಮ ಮನೆಗಳ ಟೆರೇಸ್ನಲ್ಲಿ, ಜಗುಲಿಗಳಲ್ಲಿ, ಹೊರಾಂಡದಲ್ಲಿ ಮಲಗುತ್ತಿದ್ದರು. ಆದರೆ ಈಗ, ರಾತ್ರಿ ವೇಳೆಯೂ, ಹೊರಾಂಡದಲ್ಲಿಯೂ ಬಿಸಿ ಗಾಳಿಯೇ ಬಿಸುತ್ತಿದೆ. ಅದರಲ್ಲೂ ದೆಹಲಿಯಂತಹ ನಗರ ಪ್ರದೇಶಗಳಲ್ಲಿ ತಣ್ಣನೆಯ ಗಾಳಿ ಮರೀಚಿಕೆಯಾಗುತ್ತಿದೆ. ಜನರು ಫ್ಯಾನ್ಗಳನ್ನು ತೊರೆದು, ಎಸಿಗಳ ಮೊರೆಹೋಗುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಕನ್ನಡಮ್ಮನ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆಯಾಯಿತೇ?; ಎಸ್ಸೆಸ್ಸೆಲ್ಸಿಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ಫೇಲ್!
”ಭಾರತದಾದ್ಯಂತ ಎಸಿ ಖರೀದಿಯು ಹೆಚ್ಚುತ್ತಿದೆ. ಈ ಹಿಂದೆ, ಎಸಿಗಳನ್ನು ಐಷಾರಾಮಿ ಭೋಗದ ವಸ್ತುವೆಂದು ಪರಿಗಣಿಸಲಾಗಿತ್ತು. ಆದರೆ, ಇನ್ನುಮುಂದೆ, ಈ ರೀತಿ ಪರಿಗಣಿಸಲು ಆಗುವುದಿಲ್ಲ. ಎಲ್ಲರ ಮನೆಗಳಲ್ಲೂ ಎಸಿಗಳು ಸಾಮಾನ್ಯವಾಗಿಬಿಡುತ್ತವೆ” ಎಂದು ಜಪಾನ್ ಮೂಲದ ಎಸಿ ತಯಾರಕ ಸಂಸ್ಥೆ ‘ಡೈಕಿನ್’ನ ಭಾರತದ ಮುಖ್ಯಸ್ಥ ಕೆಜೆ ಜಾವಾ ಹೇಳಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ, 1901ರಲ್ಲಿ ಹವಾಮಾನ ಸಂಬಂಧಿತ ಪರಿಪೂರ್ಣ ದಾಖಲೆಗಳನ್ನು ಇರಿಸಲು ಪ್ರಾರಂಭವಾದ ಬಳಿಕ, 2024ರ ವರ್ಷವು ಅತ್ಯಂತ ಬಿಸಿಲು ಎದುರಿಸಿದ ವರ್ಷವಾಗಿವೆ. 2024ರ ಮೇ ತಿಂಗಳಿನಲ್ಲಿ ದೆಹಲಿಯು ಅತ್ಯಂತ ಗರಿಷ್ಠ ಉಷ್ಣಾಂಶವನ್ನು ಎದುರಿಸಿತು. ಆ ವರ್ಷ, 50°ಗೂ ಅಧಿಕ ತಾಪಮಾನ ವರದಿಯಾಗಿತ್ತು.
ಬೇಸಿಗೆಯ ಭೀಕರ ಶಾಖವು ರಸ್ತೆಗಳಲ್ಲಿನ ಡಾಂಬರುಗಳನ್ನು ಕರಗಿಸಬಹುದು, ಲಕ್ಷಾಂತರ ಜನರನ್ನು ಪ್ರಾಣಾಪಾಯಕ್ಕೆ ಸಿಲುಕಿಸಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, 2012 ಮತ್ತು 2021ರ ನಡುವೆ ಭಾರತದಲ್ಲಿ ಸುಮಾರು 11,000 ಜನರು ಬಿಸಿಲು ತಾಳಲಾರದೆ, ಶಾಖದ ಹೊಡೆತಕ್ಕೆ ಬಲಿಯಾಗಿದ್ದಾರೆ.
ಈ ಸಾವುಗಳ ಸಂಖ್ಯೆ ಇನ್ನೂ ಅಧಿಕವಾಗಿರಬಹುದು. ಆದರೆ, ಮರಣ ಪ್ರಮಾಣಪತ್ರಗಳಲ್ಲಿ ಬಿಸಿಲಿನ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂಬುದನ್ನು ಹೆಚ್ಚಾಗಿ ಉಲ್ಲೇಖಿಸದ ಕಾರಣ, ಈ ಸಾವುಗಳ ಸಂಖ್ಯೆಯನ್ನು ನಿಖರವಾಗಿ ಹೇಳುವ ಅಧಿಕೃತ ಅಂಕಿಅಂಶಗಳು ಸ್ಪಷ್ಟವಾಗಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ.
ವಿಪರ್ಯಾಸವೆಂದರೆ, ಎಸಿಗಳಿಗೆ ಬಳಸಲಾಗುವ ರೆಫ್ರಿಜರೆಂಟ್ಗಳು ಮತ್ತು ಅವುಗಳಿಗೆ ವಿದ್ಯುತ್ ಪೂರೈಸುವ ಕಲ್ಲಿದ್ದಲುಗಳು ಜಾಗತಿಕ ತಾಪಮಾನವನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ. ವ್ಯಾಪಕವಾಗಿ AC ಬಳಸುವುದು ಕಟ್ಟಡಗಳ ಒಳಗಿನ ಶಾಖವನ್ನು ಹೊರಹಾಕುತ್ತದೆ. ಹೀಗಾಗಿ, ಹೊರಾಂಗಣದ ಉಷ್ಣಾಂಶ (ತಾಪಮಾನ) ಹೆಚ್ಚಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ಎಸಿಗಳಲ್ಲಿ ಬಳಸಲಾಗುವ ಮೋಟಾರ್ಗಳು ಉತ್ಪಾದಿಸುವ ಶಾಖವು ನಗರ ಪ್ರದೇಶಗಳಲ್ಲಿ ತಾಪಮಾನವನ್ನು 1° ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಹೆಚ್ಚು ತಾಪಮಾನವನ್ನು ಬಿಸಿಯಾಗಿಸುತ್ತದೆ ಎಂದು ಹೇಳಿದೆ.
ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ ‘ಕೂಲ್ ಒಕ್ಕೂಟ’ದ ಪ್ರಕಾರ, 2050ರ ವೇಳೆಗೆ ಭಾರತದಾದ್ಯಂತ ಬಳಕೆಯಾಗುವ ವಿದ್ಯುತ್ನಲ್ಲಿ ಗರಿಷ್ಠ 50%ರಷ್ಟು ವಿದ್ಯುತ್ ಎಸಿಗಳಿಗಾಗಿಯೇ ಬಳಕೆಯಾಗುತ್ತದೆ. ವಿದ್ಯುತ್ ಬೇಡಿಕೆಯೂ ಹೆಚ್ಚಾಗುತ್ತದೆ. ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಸುಡುವಿಕೆಯೂ ಹೆಚ್ಚಾಗಿದ್ದು, ತಾಪಮಾನವು ಗಣನೀಯವಾಗಿ ಏರಿಕೆಯಾಗಲಿದೆ.
ತಾಪಮಾನದ ಏರಿಕೆಯನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸಲು ವಿವಿಧ ರಾಷ್ಟ್ರಗಳು ಕೂಲ್ ಒಕ್ಕೂಟದ ಭಾಗವಾಗುತ್ತಿವೆ. ಆದರೆ, ಭಾರತವು ಒಕ್ಕೂಟದ ಜೊತೆಗೂಡಲು ಸಹಿ ಹಾಕುವುದಕ್ಕೆ ನಿರಾಕರಿಸುತ್ತಿದೆ.