ವರ್ಷಕೊಮ್ಮೆ ರಜೆ ಪಡೆದು ತಮ್ಮ ಮಕ್ಕಳ ಶಾಲಾಕಾಲೇಜು ದಾಖಲಾತಿ ಕೆಲಸ ಮಾಡುತ್ತಿದ್ದ ಬಿಎಸ್ಎಫ್ ಯೋಧ ವೇಣುಗೋಪಾಲ್ ಕರ್ತವ್ಯ ಕರೆಯನ್ನು ಆಲಿಸಿ ರಜೆಯನ್ನು ಮೊಟಕು ಗೊಳಿಸಿ ತಮ್ಮ ದೇಶ ಕಾಯುವ ಜವಾಬ್ದಾರಿಗೆ ಮರಳಿ ಗಡಿ ಭಾಗಕ್ಕೆ ಮರಳುವ ಸಮಯದಲ್ಲಿ ಗುಬ್ಬಿ ನಾಗರೀಕರು ಆತ್ಮೀಯ ಬೀಳ್ಕೊಡುಗೆ ನೀಡಿ ಯುದ್ಧ ಗೆದ್ದು ಬನ್ನಿ ಎಂದು ಆಶಿಸಿದರು.
ಗುಬ್ಬಿ ಪಟ್ಟಣದ 19 ನೇ ವಾರ್ಡ್ ಬಿಲ್ಲೇಪಾಳ್ಯ ಬಡಾವಣೆಯ ನಿವಾಸಿ ಯೋಧ ವೇಣುಗೋಪಾಲ್ ಪತ್ನಿ ಇಬ್ಬರು ಹೆಣ್ಣು ಮಕ್ಕಳ ಸುಂದರ ಸಂಸಾರ ಹೊಂದಿದ್ದಾರೆ. ದೇಶದ ಗಡಿ ಕಾಯುವ ಕಾಯಕ ನಿಷ್ಠೆಯಿಂದ ನಿರ್ವಹಿಸಿ ವರ್ಷಕೊಮ್ಮೆ ರಜೆ ಹಾಕಿ ತನ್ನ ಕುಟುಂಬದೊಂದಿಗೆ ಕಾಲ ಕಳೆಯುವ ಜೊತೆಗೆ ಮಕ್ಕಳ ಶಿಕ್ಷಣ ಪ್ರಗತಿಯ ಆಲೋಚನೆ ನಡೆಸಿ ಶಾಲಕಾಲೇಜು ದಾಖಲಾತಿ ನಡೆಸಿ ಕೆಲ ಕಾಲ ವಿಶ್ರಮಿಸುವ ಸಮಯದಲ್ಲೇ ಕರ್ತವ್ಯದ ಕರೆ ಬಂದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ವೇಣುಗೋಪಾಲ್ ಅವರು ಪಾಕಿಸ್ತಾನ ವಿರುದ್ಧ ಯುದ್ದಕ್ಕೆ ನಾವೆಲ್ಲಾ ಭಾಗವಹಿಸಿ ದೇಶ ಹಾಗೂ ನಾಗರೀಕರನ್ನು ಕಾಪಾಡುವ ಕರ್ತವ್ಯ ನಿಷ್ಠೆಯಿಂದ ಮಾಡಬೇಕಿದೆ ಎಂದು ಹೇಳಿ ಬೆಂಗಳೂರಿನ ವಿಮಾನ ನಿಲ್ದಾಣದತ್ತ ಸಾಗಿದರು.
ವಿಷಯ ತಿಳಿದ ತಕ್ಷಣ ಯೋಧರ ಮನೆಗೆ ಧಾವಿಸಿದ ಗುಬ್ಬಿ ನಾಗರೀಕರ ತಂಡವೊಂದು ವೇಣು ಗೋಪಾಲ್ ಅವರಿಗೆ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು. ಶತ್ರು ಪಾಕಿಸ್ತಾನದ ವಿರುದ್ಧ ಸೆಣಸಾಡಿ ವೀರ ಗೆಲುವು ನಮ್ಮದಾಗಿಸಿ ಕ್ಷೇಮವಾಗಿ ಮರಳಿ ಬರುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಿ.ಆರ್.ಶಂಕರ್ ಕುಮಾರ್, ಕುಮಾರ್, ರಮೇಶಗೌಡ, ಲೋಕೇಶ್, ಚಿಕ್ಕೇಗೌಡ, ಬ್ಯಾಟರಾಯಪ್ಪ, ವಿನಯ್, ಮಧು, ಶ್ರೀರಾಮು, ಸತೀಶ್, ಧೀರಜ್ ಇತರರು ಇದ್ದರು.