ನಾಗರಿಕ ಸಮಾಜದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತರಾದ ಮತ್ತು ಹಿಂದುಳಿದ ಜನ ಸಮೂಹಕ್ಕೆ ಸಹಾಯವಾಗುವ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಬೃಹತ್ ಕಾರ್ಯಕ್ರಮವನ್ನು ಮೇ 20ರಂದು ಹೊಸಪೇಟೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಯೋಜಿಸಿದೆ.
ಕರ್ನಾಟಕದಲ್ಲಿ ಎಂಟು ವರ್ಷದಿಂದ ಕಂದಾಯ ಗ್ರಾಮ ಮಾನ್ಯತೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದ್ದರೂ ಇದುವರೆಗೂ ಪೂರ್ಣಗೊಂಡಿಲ್ಲ. ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ನಾಗರಿಕ ಸಮಾಜದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತರಾದ ಮತ್ತು ಹಿಂದುಳಿದ ಜನ ಸಮೂಹಕ್ಕೆ ಸಹಾಯವಾಗುವ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಬೃಹತ್ ಕಾರ್ಯಕ್ರಮವನ್ನು ಮೇ 20ರಂದು ಹೊಸಪೇಟೆಯಲ್ಲಿ (ವಿಜಯನಗರ) ರಾಜ್ಯ ಕಾಂಗ್ರೆಸ್ ಸರ್ಕಾರ ಆಯೋಜಿಸಿದೆ.
ವಿಶೇಷ ಎಂದರೆ, ಮೇ 20ಕ್ಕೆ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿದ್ದು, ಹೊಸಪೇಟೆಯಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಎರಡು ವರ್ಷದ ಹರ್ಷಾಚರಣೆಯನ್ನು ಅರ್ಥಪೂರ್ಣಗೊಳಿಸಲು ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಟ್ಟಿದೆ.
2017ರಲ್ಲೇ ಕಂದಾಯ ಗ್ರಾಮಗಳ ರಚನೆಗೆ ನಿರ್ಧಾರ
ಹಟ್ಟಿ, ತಾಂಡಾ, ಕಾಲನಿಗಳು ಸೇರಿ ರಾಜ್ಯಾದ್ಯಂತ ಸುಮಾರು 3 ಸಾವಿರ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಸಾಧ್ಯವಾಗುವಂತೆ ಕರ್ನಾಟಕ ಭೂಕಂದಾಯ ಕಾಯಿದೆಗೆ ತಿದ್ದುಪಡಿ ತರಲು 2017 ನವೆಂಬರ್ 10ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆಗ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಕಡು ಬಡವರಿಗೆ ಕಂದಾಯ ಗ್ರಾಮಗಳನ್ನು ರಚಿಸಿ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತಂದರೂ ಅದರ ಅನುಷ್ಠಾನ ಇದುವರೆಗೂ ಪೂರ್ಣಗೊಂಡಿರಲಿಲ್ಲ.
”ವಾಸಿಸುವನೇ ಆಸ್ತಿಯೊಡೆಯ ಘೋಷಣೆಯಡಿ ಮಹತ್ವದ ಭೂಕಂದಾಯ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ದೊರಕಿರುವ ಹಿನ್ನೆಲೆಯಲ್ಲಿ ಮುಂದಿನ ಪೂರಕ ಹೆಜ್ಜೆಯಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭೂಕಂದಾಯ ಕಾಯಿದೆ ನಿಯಮದಲ್ಲಿ 94 (ಡಿ) ಸೇರ್ಪಡೆ ಮಾಡಿ ಈ ಎಲ್ಲ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ” ಎಂದು ಆಗಿನ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದನ್ನು ಇಲ್ಲಿ ಗಮನಿಸಬಹುದು.

ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ರಾಜ್ಯಾದ್ಯಂತ 3,614 ಕಂದಾಯ ಗ್ರಾಮಗಳಿವೆ. ಈವರೆಗೂ 2600 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ 1400 ಗ್ರಾಮಗಳ ರಚನೆ ಆಗಿದ್ದು, ಎರಡು ವರ್ಷದ ಅವಧಿಯಲ್ಲಿ 1,200 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಇನ್ನೂ 1,014 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಬಾಕಿ ಇದೆ.
“ಜೂನ್ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲ 3,614 ಕಂದಾಯ ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಹೊರಡಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಹಕ್ಕುಪತ್ರ ನೀಡುವ ಮೂಲಕ ಬಡವರ ಕೆಲಸವನ್ನು ಈ ವರ್ಷದೊಳಗೆ ಮುಗಿಸಬೇಕು” ಎಂದು ಕಂದಾಯ ಸಚಿವ ಸಚಿವ ಕೃಷ್ಣ ಬೈರೇಗೌಡ ಅವರು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೂ ಗಡುವು ನೀಡಿದ್ದಾರೆ.
“ಈಗಾಗಲೇ ಅಂತಿಮ ಅಧಿಸೂಚನೆ ಆಗಿರುವ 2,600 ಕಂದಾಯ ಗ್ರಾಮಗಳ 1.41 ಲಕ್ಷ ಫಲಾನುಭವಿಗಳ ಪೈಕಿ 92,719 ಜನ ಹಕ್ಕುಪತ್ರ ಸಿದ್ದವಾಗಿದೆ. ಇನ್ನೂ 50 ಸಾವಿರ ಹಕ್ಕುಪತ್ರಗಳು ಬಾಕಿ ಇದ್ದು, ಬಾಕಿ ಹಕ್ಕುಪತ್ರಗಳನ್ನೂ ಶೀಘ್ರ ಸಿದ್ದಪಡಿಸಿ. ತುಮಕೂರು, ಚಿತ್ರದುರ್ಗ, ಬೆಳಗಾವಿ, ಹಾವೇರಿ, ರಾಯಚೂರು, ಬಾಗಲಕೋಟೆ, ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬಾಕಿ ಇರುವ ಅಥವಾ ಬಿಟ್ಟುಹೋಗಿರುವ ಗ್ರಾಮಗಳನ್ನು ಗುರುತಿಸಿದರೆ ಇನ್ನೂ 30 ರಿಂದ 35 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಸಿದ್ದಪಡಿಸಬೇಕಾಗಬಹುದು. ಆ ಕೆಲಸವನ್ನೂ ಸಹ ಶೀಘ್ರ ಪೂರ್ಣಗೊಳಿಸಿ” ಎಂದು ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವರು ಟಾಸ್ಕ್ ನೀಡಿದ್ದಾರೆ.
“ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಎಲ್ಲ ಕಾಲದಲ್ಲೂ ಸಮಾಜದ ಅತ್ಯಂತ ಹಿಂದುಳಿದವರು ಹಾಗೂ ಕಡು ಬಡವರ ಪರ ಕೆಲಸ ಮಾಡುವುದೇ ಸರ್ಕಾರದ ಧ್ಯೇಯ. ಈ ನಿಟ್ಟಿನಲ್ಲಿ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದ್ದು, 20ರಂದು ಹೊಸಪೇಟೆಯಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ”
– ಕೃಷ್ಣ ಬೈರೇಗೌಡ, ಕಂದಾಯ ಸಚಿವರು
ಸರ್ಕಾರ ಅಂದುಕೊಂಡ ಗಡುವಿನಲ್ಲಿ ಎಲ್ಲ ಕೆಲಸ ಮುಗಿಸಿ, ಕಂದಾಯ ಗ್ರಾಮಗಳ ಹಕ್ಕುಪತ್ರ ನೀಡಿದರೆ ಹಕ್ಕುಪತ್ರ ಪಡೆದು ತಮ್ಮ ಹೆಸರಿಗೆ ಇ-ಸ್ವತ್ತು ಪಡೆದುಕೊಂಡರೆ ಗ್ರಾಮಠಾಣವಾಗಲಿದೆ. ಬಳಿಕ ಆಯ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಸ್ವತ್ತಿನ ನಿರ್ವಹಣೆ, ಕಂದಾಯ ವಸೂಲಿ ಮಾಡಲಿವೆ. ಹಕ್ಕುಪತ್ರ ಪಡೆದರೆ ನಿವಾಸಿಗಳಿಗೆ ಅಧಿಕೃತತೆ ಸಿಗಲಿದೆ. ಮನೆ ತಮ್ಮದೇ ಜಾಗದಲ್ಲಿ ನಿರ್ಮಾಣವಾಗಿದೆ ಎಂಬ ನೆಮ್ಮದಿಯೂ ಜನರಿಗೆ ಸಿಗಲಿದೆ.
ಜನಗಣತಿ ಆರಂಭವಾಗುವುದರೊಳಗೆ ಮುಗಿಸಲು ಚಿಂತನೆ
ಕೇಂದ್ರ ಸರ್ಕಾರ ದೇಶದಾದ್ಯಂತ ಜನಗಣತಿ ಆರಂಭಿಸುವುದಾಗಿ ಈಗ ಘೋಷಿಸಿದೆ. ಜನಗಣತಿ ಆರಂಭವಾದರೆ ಜುಲೈ ತಿಂಗಳಿನಿಂದ ಕೇಂದ್ರ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಲು ಅವಕಾಶ ನೀಡುವುದಿಲ್ಲ. ಪರಿಣಾಮ ಕಂದಾಯ ಗ್ರಾಮಗಳ ರಚನೆ ಕೆಲಸಕ್ಕೆ ತೊಡಕುಂಟಾಗುವ ಸಾಧ್ಯತೆ ಇದೆ. ಹೀಗಾಗಿ ಬಾಕಿ ಇರುವ 1,014 ಗ್ರಾಮಗಳಿಗೂ ಜೂನ್ ಅಂತ್ಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸಿ ಜುಲೈ ನಂತರ ಹಕ್ಕುಪತ್ರ ವಿತರಿಸಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಸಲಹೆಯಂತೆ ಕಂದಾಯ ಗ್ರಾಮಗಳ ರಚನೆ ಕುರಿತಂತೆ ಜೂನ್ 30ರ ಗಡುವನ್ನು ನಿಗದಿಪಡಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಜನಗಣತಿ ಕಾರ್ಯದ ಪ್ರಕ್ರಿಯೆ ಆರಂಭವಾದರೆ, ಹೊಸ ಕಂದಾಯ ಘಟಕಗಳ ರಚನೆಗೆ ನಿಷೇಧ ಅನ್ವಯ ಆಗಲಿದೆ. ಈ ನಿಷೇಧ ತೆರವಾಗಲು ಕನಿಷ್ಠ ಎರಡು ವರ್ಷ ಆಗಬಹುದು. ಹೀಗಾಗಿ ಬಾಕಿ ಇರುವ ಎಲ್ಲ ಕಂದಾಯ ಗ್ರಾಮಗಳ ರಚನೆ ಕಾರ್ಯ ಜೂ. 30 ರ ಒಳಗಾಗಿ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತಾಕೀತು ಸಹ ಮಾಡಿದ್ದಾರೆ.
ಹಾಡಿ, ಹಟ್ಟಿ, ತಾಂಡಾಗಳಲ್ಲಿ ವಾಸಿಸುತ್ತಿರುವವರು ಸಾಮಾಜಿಕವಾಗಿ ಮತ್ತು ಆರ್ಥಿವಾಗಿ ಸಾಕಷ್ಟು ಹಿಂದುಳಿದವರು. ಇವರೆಲ್ಲ ಊರಿಗೆ ಹೊಂದಿಕೊಂಡು ಅಲ್ಲಲ್ಲಿ ಮನೆಗಳನ್ನು ಕಟ್ಟಿಕೊಂಡು ದಶಕಗಳಿಂದ ವಾಸಿಸುತ್ತಿದ್ದಾರೆ. ಗ್ರಾಮದ 1 ಕಿ.ಮೀ ವ್ಯಾಪ್ತಿಯೊಳಗೆ 10 ಮನೆಗಳಿಗಿಂತಲೂ ಹೆಚ್ಚು ಇದ್ದರೆ ಉಪ ಗ್ರಾಮ ಎಂದು ರಚನೆ ಮಾಡಲು ಅವಕಾಶ ಇದೆ. ಕಂದಾಯ ಗ್ರಾಮಗಳ ರಚನೆಗೆ ಈಗ ಸರ್ಕಾರ ವೇಗ ನೀಡಿದ್ದು, ಇದರಿಂದ ದಶಕಗಳಿಂದಲೂ ಮರೆಯಾದ ಮೂಲ ಸೌಲಭ್ಯಗಳು ಮನೆಬಾಗಿಲಿಗೆ ಬರಲಿವೆ. ಜನರ ಬುದುಕು ಸಹ ಸ್ಥಿರವಾಗಲಿದೆ.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದ್ದು, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ 1 ಲಕ್ಷ ಪಟ್ಟಾ ಖಾತೆ ಹಂಚಿಕೆ ಮಾಡಲಾಗುತ್ತಿದೆ. ಇದು ಕೇವಲ ಸರ್ಕಾರದ ಸಂಭ್ರಮಾಚರಣೆ ಮಾತ್ರವಲ್ಲ. ಇಡೀ ರಾಜ್ಯದ ಜನ ಸಂಭ್ರಮಿಸುವ ಕ್ಷಣ”
– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿಗಳು
ಮೇ 20ಕ್ಕೆ ಸಾಧನೆಗಳ ಅನಾವರಣ
ವಿಜಯನಗರದಲ್ಲಿ ನಡೆಯಲಿರುವ ಸಾಧನಾ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿಪಕ್ಷಗಳ ಆರೋಪಗಳಿಗೆ ಉತ್ತರ ಕೊಡುವ ಜೊತೆಗೆ ಎರಡು ವರ್ಷಗಳ ಸಾಧನೆಗಳನ್ನು ಅನಾವರಣ ಮಾಡಲು ಈ ಸಮಾವೇಶವನ್ನು ಬಳಕೆ ಮಾಡಲಿದೆ. ವಿಜಯನಗರ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ದಂಡು ಬರಲಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈ ಸಮಾವೇಶಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಮೂಲಕ ರಾಜ್ಯದ ಗಮನ ಸೆಳೆಯವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ನಡೆಸಲು ಸರ್ಕಾರ ಸಿದ್ಧತೆಯಲ್ಲಿದೆ.
ವಿಜಯನಗರ ಸಾಧನಾ ಸಮಾವೇಶವನ್ನು ಯಶಸ್ವಿ ಮಾಡುವ ನಿಟ್ಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ಆ ಭಾಗದ ಜಿಲ್ಲೆಗಳ ಶಾಸಕರು, ಸಚಿವರಿಗೆ ಸೂಚನೆಯನ್ನು ನೀಡಲಾಗಿದೆ. ಸ್ಥಳೀಯವಾಗಿ ಸಭೆಗಳನ್ನು ನಡೆಸಿ ಜನರನ್ನು ಕಾರ್ಯಕ್ರಮಕ್ಕೆ ಕರೆತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಎರಡು ವರ್ಷದ ಈ ‘ಸಾಧನಾ ಸಂಭ್ರಮ’ ಮುಂಬರುವ ಜಿ.ಪಂ, ತಾ.ಪಂ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಅಣಿಗೊಳಿಸಲು ಮತ್ತು ಕಾರ್ಯಕರ್ತರ ಪಡೆಯಲ್ಲೂ ಉತ್ಸಾಹ ತುಂಬಲು ವೇದಿಕೆಯಾಗಲಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.