- ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ನಡೆಗೆ ಸಭಾಧ್ಯಕ್ಷರು ಬೇಸರ
- ಸಭಾಧ್ಯಕ್ಷರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಬಸನಗೌಡ ಪಾಟೀಲ್ ಯತ್ನಾಳ್
ಪೋಸ್ಟರ್ಗಳನ್ನು ಸದನದ ಒಳಗಡೆ ತಗೆದುಕೊಂಡು ಬರುವುದು ನೂತನ ಶಾಸಕರಿಗೆ ಗೌರವ ತರುವುದಿಲ್ಲ. ಇದರಿಂದ ನಿಮಗೆ ಪ್ರಚಾರ ಸಿಕ್ಕರೂ ಒಂದು ಮತ ಕೂಡ ಜಾಸ್ತಿಯಾಗುವುದಿಲ್ಲ. ಜೊತೆಗೆ ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತದೆ ಹೊರತು ಹೆಚ್ಚಾಗುವುದಿಲ್ಲ. ಇದನ್ನು ನೂತನ ಶಾಸಕರು ಅರಿಯಬೇಕು ಎಂದು ಸಭಾಧ್ಯಕ್ಷ ಯು ಟಿ ಖಾದರ್ ಅವರು ಗುರುಮಿಠಕಲ್ನ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರನ್ನು ಉದ್ದೇಶಿಸಿ ಹೇಳಿದರು.
ಆರನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರು ಮಾಜಿ ಶಾಸಕ ಸಿ ಎಂ ನಿಂಬಣ್ಣವರ್ ನಿಧನಕ್ಕೆ ಸಂತಾಪ ನಿಲುವಳಿ ಸೂಚಿಸಿದರು. ಈ ನಡುವೆ ಎದ್ದು ನಿಂತ ಶಾಸಕ ಶರಣಗೌಡ ಕಂದಕೂರು, ತಮ್ಮ ಕ್ಷೇತ್ರದ ಸಮಸ್ಯೆ ಕುರಿತು ಭಿತ್ತಿಪತ್ರ ಪ್ರದರ್ಶಿಸಿದರು. ಕಂದಕೂರು ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷರು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಕಂದಕೂರು ಅವರಿಗೆ ಕಿವಿಮಾತು ಹೇಳಿದರು.
“ಸಂತಾಪ ಸೂಚನೆ ಇದೆ. ಸದನದ ನಿಯಮಗಳಿಗೆ ಗೌರವಕೊಡಿ. ನೂತನ ಶಾಸಕರು ಸದನದ ನಿಯಮಗಳನ್ನು ಅರ್ಥಮಾಡಿಕೊಳ್ಳಲಿ. ನಿಮ್ಮ ವಿಚಾರಗಳನ್ನು ಸದನದ ಗಮನಕ್ಕೆ ತರಲು ಸಮಯ ಇದೆ. ಅದನ್ನು ಇಟ್ಟು ಸದನದಲ್ಲಿ ಬಿಟ್ಟಿ ಪ್ರಚಾರಕ್ಕೆ ಅವಕಾಶವಿಲ್ಲ. ಓಟಿನ ಲೆಕ್ಕಾಚಾರ ಇಟ್ಟುಕೊಂಡು ಸದನಲ್ಲಿ ಪ್ರಚಾರ ತಗೆದುಕೊಳ್ಳಲು ಹೋಗಬೇಡಿ. ನಾನು ಕೂಡ ಶಾಸಕನಾಗಿ ಬಂದವನು. ಇನ್ಮುಂದೆ ಬಿಟ್ಟಿ ಪ್ರಚಾರಕ್ಕೆ ಪ್ರಯತ್ನಿಸಬೇಡಿ” ಎಂದು ಕಟುವಾಗಿಯೇ ಸಭಾಧ್ಯಕ್ಷರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ಖಾದರ್, ಕನ್ನಡ ಮತ್ತು ಬೆತ್ತಲಾದ ಬಿಜೆಪಿ
“ನಿಮ್ಮ ವಿಚಾರ ಏನೇ ಇದ್ದರೂ ರೈಟಿಂಗ್ನಲ್ಲಿ ಕೊಡಿ. ಶೂನ್ಯವೇಳೆಯಲ್ಲಿ ಚರ್ಚೆ ಮಾಡೋಣ. ಚರ್ಚೆಗೆ ಅವಕಾಶ ಕಲ್ಪಿಸಿಕೊಡುವೆ. ನಿಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಸದನದ ಮುಂದೆ ಪ್ರಸ್ತಾಪಿಸಲು ಮಾರ್ಗಗಳಿವೆ. ಆ ಬಗ್ಗೆ ಯೋಚಿಸಿ. ಕ್ಷೇತ್ರದ ಜನ ನಿಮ್ಮನ್ನು ನೋಡುತ್ತಿರುತ್ತಾರೆ. ನಿಮಗೆ ಜವಾಬ್ದಾರಿ ಇದೆ. ಆ ಪ್ರಕಾರ ನಡೆದುಕೊಳ್ಳಿ” ಎಂದು ಕಿವಿಮಾತು ಹೇಳಿದರು.
ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯ ಪ್ರವೇಶಿಸಿ, “ಸಭಾಧ್ಯಕ್ಷರೇ, ಈ ನಡೆ ಸರಿಯಲ್ಲ. ನೀವು ನಮ್ಮ ಸ್ಥಾನದಲ್ಲಿ ಕೂತಿರುವಾಗ ಭಿತ್ತಿಪತ್ರ ಪ್ರದರ್ಶಿಸಿಲ್ಲವೇ?” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ನಾನು ನನ್ನ ಕ್ಷೇತ್ರದ ಸಮಸ್ಯೆ ಬಗ್ಗೆ ಹೇಳಬೇಕು ಎಂಬುದು ಅಷ್ಟೇ ನನ್ನ ಉದ್ದೇಶ. ನೀವು ಹೀಗೆ ಪ್ರಚಾರ ಅಂತ ಕರೆದರೆ ಹೇಗೆ? ನನಗೆ ಪ್ರಚಾರದ ಹುಚ್ಚಿಲ್ಲ” ಎಂದು ಶರಣಗೌಡ ಕಂದಕೂರು ಸದನಕ್ಕೆ ತಿಳಿಸಿ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು.