ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಡಿ.ಕಾವಲ್ ಸದಸ್ಯೆ ಗಂಗಮ್ಮ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ತಾಪಂ ಇಓ ಶಿವಪ್ರಕಾಶ್ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಯೋಗಿತಾ ಅವರು ನೀಡಿದ ರಾಜೀನಾಮೆ ಹಿನ್ನಲೆ ತೆರವಾದ ಸಾಮಾನ್ಯ ಮಹಿಳಾ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ಗಂಗಮ್ಮ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷೆ ಗಂಗಮ್ಮ ಮಾತನಾಡಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಅಭಿವೃದ್ದಿ ವಿಚಾರದಲ್ಲಿ ಒಕ್ಕೊರಲಿನ ಅಭಿಪ್ರಾಯ ಪಡೆದು ಮಾದರಿ ಗ್ರಾಮ ಪಂಚಾಯಿತಿ ಹೆಗ್ಗಳಿಕೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಚ್ಎಎಲ್ ಘಟಕ ಸ್ಥಾಪನೆ ನಂತರ ವಿಶ್ವ ವ್ಯಾಪ್ತಿ ಗುರುತಿಸಿಕೊಂಡ ನಮ್ಮ ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೆ ಅವಶ್ಯ ರಸ್ತೆ, ನೀರು, ಬೀದಿ ದೀಪ ಒದಗಿಸಿ ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷೆ ಅನುಸೂಯದೇವಿ, ಸದಸ್ಯರಾದ ಸಿದ್ದರಾಮೇಗೌಡ, ಶಿವಸ್ವಾಮಿ, ವಿಜಯ ಗಂಗಾಧರ್, ರಾಧಾ, ಚಂದ್ರಯ್ಯ, ತಿಮ್ಮರಾಜು, ನಯನ, ಯೋಗೀಶ್, ಮುನೇಶ್, ಗಂಗಮ್ಮ, ಮಮತಾ, ತಿಮ್ಮಯ್ಯ, ಕಲಾವತಿ, ಪ್ರಸಾದ್, ಜಯಮ್ಮ, ಮೋಹನ್ ಕುಮಾರ್, ನಾಗರಾಜು, ಮಂಗಳಗೌರಮ್ಮ, ವನಿತಾ, ಬಸವರಾಜು, ಮುಖಂಡರಾದ ಸಾಕಸಂದ್ರ ದೇವರಾಜ್, ಪುಟ್ಟರಾಜು, ತಿಮ್ಲಿಪಾಳ್ಯ ಶಶಿಧರ್, ಪಿಡಿಓ ತನುಜಾ ಬನಕಟ್ಟೆ ಇತರರು ಇದ್ದರು.