ರಾಜ್ಯದಲ್ಲಿ ಏಕಕಾಲಕ್ಕೆ 40 ಕಡೆಗಳಲ್ಲಿ ಗುರುವಾರ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಳು ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.
ಬೆಂಗಳೂರಿನಲ್ಲಿ 12, ತುಮಕೂರಿನಲ್ಲಿ 7, ಬೆಂಗಳೂರು ಗ್ರಾಮಾಂತರದಲ್ಲಿ 8, ಯಾದಗಿರಿಯಲ್ಲಿ 5, ಮಂಗಳೂರಿನಲ್ಲಿ 4 ಹಾಗೂ ವಿಜಯಪುರದಲ್ಲಿ 4 ಸ್ಥಳಗಳಲ್ಲಿ ಲೋಕಾ ದಾಳಿ ನಡೆಸಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲವು ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳು
1 ರಾಜಶೇಖರ್: ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ತುಮಕೂರು
2 ಮಂಜುನಾಥ್: ಸರ್ವೆ ಸೂಪರ್ವೈಸರ್, ಮಂಗಳೂರು
3 ರೇಣುಕಾ: ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ವಿಜಯಪುರ
4 ಮುರಳಿ ಟಿವಿ: ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು
5 ಹೆಚ್ಆರ್ ನಟರಾಜ್: ಇನ್ಸ್ಪೆಕ್ಟರ್, ಕಾನೂನು ಮಾಪನಶಾಸ್ತ್ರ ಬೆಂಗಳೂರು
6 ಅನಂತ್ ಕುಮಾರ್: SDA, ಹೊಸಕೋಟೆ ತಾಲೂಕು ಕಚೇರಿ ಬೆಂಗಳೂರು ಗ್ರಾಮಾಂತರ
7 ಉಮಾಕಾಂತ್: ಶಹಾಪುರ ತಾಲೂಕು ಕಚೇರಿ ಯಾದಗಿರಿ
ತುಮಕೂರು: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ತುಮಕೂರಿನ ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ತುಮಕೂರು ಅಶೋಕ ನಗರ ಎಸ್.ಐ.ಟಿಯ 4ನೇ ಕ್ರಾಸ್ನಲ್ಲಿರುವ ರಾಜಶೇಖರ ಸಹೋದರನ ಮನೆ ಮೇಲೆ ರೇಡ್ ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದು, 10ಕ್ಕೂ ಅಧಿಕ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ವಿಜಯಪುರದಲ್ಲಿ ಲೋಕಾಯುಕ್ತ ದಾಳಿ: ಅಂಬೇಡ್ಕರ್ ನಿಗಮದ ವ್ಯವಸ್ಥಾಪಕಿಯಾಗಿದ್ದ ರೇಣುಕಾ ಸಾತರ್ಲೆ ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಅವರ ನಿವಾಸಗಳ ಮೇಲೆ ದಾಳಿ. ಸೊಲ್ಲಾಪುರ ಅಪಾರ್ಟಮೆಂಟ್ ಹಾಗೂ ವಿಜಯಪುರ ನಗರದ ರಿಂಗ್ ರೋಡ್ ಬಳಿಯ ಮನೆಯ ಮೇಲೆ ರೇಡ್ ಮಾಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಸ್ಟಿಂಗ್ ಆಪರೇಷನ್ ಮಾಡಿ ಅಂಬೇಡ್ಕರ್ ನಿಗಮದಲ್ಲಿ ರೇಣುಕಾ ಸಾತರ್ಲೆ ಮಾಡಿದ್ದ ಅಕ್ರಮಗಳನ್ನ ಬಯಲು ಮಾಡಲಾಗಿತ್ತು. ಸುವರ್ಣ ನ್ಯೂಸ್ ವರದಿ ಹಿನ್ನೆಲೆ ಆಕೆಯನ್ನ ಅಮಾನತ್ತು ಮಾಡಿ, ಇಲಾಖಾ ತನಿಖೆ ಕೈಗೊಳ್ಳಲಾಗಿತ್ತು. ಜೊತೆಗೆ, ಲೋಕಾಯುಕ್ತ ಇಲಾಖೆಯಲ್ಲಿಯೂ ರೇಣುಕಾ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು. ಇದೀಗ ಅವರ ಮನೆ ಮೇಲೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿಂದೆ ರೇಣುಕಾ ಅವರು ವಾಲ್ಮೀಕಿ ನಿಗಮ, ಆದಿ ಜಾಂಬವ ಸೇರಿ ಹಲವು ನಿಗಮಗಳಿಗೆ ವ್ಯವಸ್ಥಾಪಕಿಯಾಗಿದ್ದರು.
ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿಮ ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಶಹಾಪೂರ ತಹಸಿಲ್ದಾರ ಮನೆ ಮೇಲೆ ದಾಳಿ. ಅದೇ ರೀತಿ ಶಹಾಪೂರದಲ್ಲಿರುವ ತಹಸಿಲ್ದಾರ್ ಕಛೇರಿ ಮೇಲೂ ದಾಳಿ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ. ಬೆಳಂ ಬೆಳಿಗ್ಗೆ ದಾಳಿ ನಡೆಸಿ ಬ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಂದಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇನ್ಸ್ಪೆಕ್ಟರ್ ಗಳಾದ ಸಿದ್ದರಾಯ, ಸಂಗಮೇಶ, ಅರ್ಜುನಪ್ಪ, ಅಕ್ಕಮಹಾದೇವಿ, ಬಾಬಾ ಸಾಹೇಬ ಪಾಟೀಲ್ ಅವರೂ ಇದ್ದಾರೆ.
ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಜಿಲ್ಲೆಯ ಸರ್ವೆ ಮೇಲ್ವಿಚಾರಕ ಮಂಜುನಾಥ್ ಅವರು ಆದಾಯಕ್ಕಿಂತ ಅಧಿಕ ಅಪಾರ ಆಸ್ತಿ ಗಳಿಕೆಯ ಆರೋಪ ಹಿನ್ನೆಲೆಯಲ್ಲಿ ಅವರ ಮನೆ ಹಾಗು ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಲೋಕಾಯುಕ್ತ ಎಸ್ ಪಿ ನೇತೃತ್ವದಲ್ಲಿ ಮಂಗಳೂರಿನ ಬಿಜೈ ಎಂಬಲ್ಲಿರುವ ಮಂಜುನಾಥ್ ಅವರ ಮನೆ ಮೇಲೆ ದಾಳಿ ಮಾಡಿ, ಮಹತ್ವದ ದಾಖಲೆ ಪತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.