ಯಾದಗಿರಿ ನಗರದ ಡಾ. ಎಸ್ ಎಂ ಬಿರಾದಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಮ್ಮ ಕರ್ನಾಟಕ ಸೇನೆ ಯಾದಗಿರಿ ಜಿಲ್ಲಾ ಘಟಕ ಆರೋಪಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಎನ್ ಕಟ್ಟಿಮನಿ ಮಾತನಾಡಿ, “‘ಆಸ್ಪತ್ರೆಯಿಂದ ಈಗಾಗಲೇ ಇಂತಹ ಪ್ರಕರಣಗಳು ವರದಿಯಾಗಿದ್ದು, 45 ದಿನಗಳ ಶಿಶುವಿಗೆ ಅವಧಿ ಮುಗಿದ ವ್ಯಾಕ್ಸಿನ್ ಹಾಕಿದ ಪ್ರಕರಣ ಸೇರಿದಂತೆ ರಾಮಸಮುದ್ರ ಗ್ರಾಮದ ಚೇಳು ಕಡಿದ ಮಗುವಿನ ಸಾವಿನ ಪ್ರಕರಣಗಳು ನಡೆದಿವೆ. ಈ ಎಲ್ಲ ಘಟನೆಗಳಿಗೆ ಆಸ್ಪತ್ರೆ ವೈದ್ಯರು ಹಾಗೂ ಹೆಚ್ಚುವರಿ ಔಷಧ ನಿಯಂತ್ರಕರು ಸೇರಿದಂತೆ 5 ಜನರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಕಳೆದ ಮಾರ್ಚ್ನಲ್ಲಿಯೇ ಪ್ರಕರಣ ದಾಖಲಾಗಿದೆ. ನಗರದ ದೇವಮ್ಮ ಎನ್ನುವವರ 45 ದಿನದ ಮಗುವಿಗೆ 2022 ರಲ್ಲಿಯೇ ಅವಧಿ ಮುಗಿದ ವ್ಯಾಕ್ಸಿನ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಹಾಕಿದ್ದಾರೆ. ಇದನ್ನು ತಿಳಿದ ಮಗುವಿನ ತಂದೆ ದೂರು ದಾಖಲಿಸಿದ್ದಾರೆ. ಇದಲ್ಲದೇ ಚೇಳು ಕಡಿತಕ್ಕೊಳಗಾದ ಮಗುವಿಗೂ ಸರಿಯಾಗಿ ಚಿಕಿತ್ಸೆ ನೀಡದೇ ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ವಾಸ್ತವದಲ್ಲಿ ಹೃದಯ ತಜ್ಞರಾಗಿರುವ ಇವರು ತಮಗೆ ಸಂಬಂಧವಿಲ್ಲದ ಚಿಕಿತ್ಸೆ ನೀಡಿ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯಾದಗಿರಿ | ನೀರು ಕುಡಿಯಲು ಹೋದ ಮೂವರು ಬಾಲಕರು ದುರ್ಮರಣ
“ಪ್ರಕರಣ ಸಂಬಂಧ 10 ದಿನಗಳ ಒಳಗಾಗಿ ಆಸ್ಪತ್ರೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಆಸ್ಪತ್ರೆಗೆ ಮುಳ್ಳುಬೇಲಿ ಹಚ್ಚಿ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆನೀಡಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.