ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿದೆ. ಸರ್ಕಾರದ ಖಾಸಗೀಕರಣ ಧೋರಣೆಯನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ತೀವ್ರವಾಗಿ ವಿರೋಧಿಸುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಗಳಿಸುವ ಲಾಭದ ಹಣವು ಈ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕೇ ಹೊರತು, ಖಾಸಗಿ ಬಂಡವಾಳಷಾಹಿಗಳ ಸಾಲವನ್ನು ಮನ್ನಾ ಮಾಡಲು ಬಳಕೆಯಾಗಬಾರದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಹೆಚ್ ವೆಂಕಟಾಚಲಂ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ 10ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿದರೆ, ದೇಶದ ಠೇವಣಿದಾರರ ಹಿತಕ್ಕೆ ಧಕ್ಕೆ ಉಂಟಾಗಲಿದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲಿ ಮಾತ್ರ ಸಾರ್ವಜನಿಕರ ಠೇವಣಿ ಹಣ ಸುರಕ್ಷಿತವಾಗಿ ಇರಲು ಸಾಧ್ಯ. ಚರಿತ್ರೆಯನ್ನು ಅವಲೋಕಿಸಿದರೆ ನಮ್ಮ ದೇಶದಲ್ಲಿ ನೂರಾರು ಖಾಸಗಿ ಬ್ಯಾಂಕುಗಳು ಮುಳುಗಡೆಯಾಗಿವೆ. ಆದರೆ 1969ರಲ್ಲಿ ನಡೆದ ಬ್ಯಾಂಕ್ ರಾಷ್ಟ್ರೀಕರಣದ ಬಳಿಕ ಯಾವುದೇ ಸರ್ಕಾರಿ ಬ್ಯಾಂಕುಗಳು ಕಳೆದ 55 ವರ್ಷಗಳಲ್ಲಿ ಸಾರ್ವಜನಿಕರ ಠೇವಣಿ ಹಣಕ್ಕೆ ಅಭದ್ರತೆಯನ್ನು ಉಂಟು ಮಾಡಿಲ್ಲ. ಸರ್ಕಾರದ ಖಾಸಗೀಕರಣ ನೀತಿಯು ದೇಶ ವಿರೋಧಿಯಲ್ಲದೇ ಬೇರೇನೂ ಅಲ್ಲ” ಎಂದು ಸಿ.ಹೆಚ್.ವೆಂಕಟಾಚಲಂ ಆರೋಪಿಸಿದ್ದಾರೆ.
“ಸರ್ಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಸಾವಿರಾರು ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗುತ್ತಿದೆ. ಇದು ರಾಷ್ಟ್ರೀಕರಣ ನೀತಿಯನ್ನು ಬುಡಮೇಲಾಗಿಸುವ ತಂತ್ರಗಾರಿಕೆಯಾಗಿದೆ. ಕಳೆದ ಮಾರ್ಚ್ ಅಂತ್ಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ನಿವ್ವಳ ಲಾಭವನ್ನು ಗಳಿಸಿದರೂ ಸರಕಾರ ಖಾಸಗೀಕರಣದ ಮಂತ್ರವನ್ನು ಜಪಿಸುತ್ತಿರುವುದು ಆಘಾತಕಾರಿಯಾಗಿದೆ. ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು. ಖಾಲಿ ಇರುವ ಎರಡು ಲಕ್ಷಕ್ಕೂ ಹೆಚ್ಚಿನ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿ ಸಾರ್ವಜನಿಕರಿಗೆ ಉತ್ಕೃಷ್ಟವಾದ ಸೇವೆ ಸಿಗುವಂತೆ ಮಾಡಬೇಕು” ಎಂದು ಸಿ.ಹೆಚ್ ವೆಂಕಟಾಚಲಂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮುಕ್ತ ಕಾಲುದಾರಿ ಅಭಿಯಾನ ಆರಂಭಿಸಿದ ಸಂಚಾರ ಪೊಲೀಸ್
ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಶ್ರೀಕೃಷ್ಣ, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಕೆನರಾ ಬ್ಯಾಂಕಿನ ಬೆಂಗಳೂರು ವೃತ್ತ ಕಛೇರಿಯ ಉಪ ಮಹಾ ಪ್ರಬಂಧಕ ಗಣೇಶ್, ಕೆಪಿಬಿಇಎಫ್ ನ ಉಪ ಪ್ರಧಾನ ಕಾರ್ಯದರ್ಶಿ ಕೆ.ಜಿ.ಫಣೀಂದ್ರ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಅನಿರುಧ್ ಕುಮಾರ್, ಅಧಿಕಾರಿಗಳ ಸಂಘಟನೆಯ ಪ್ರಶಾಂತ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.