ಬಾಹ್ಯ ದಾಳಿ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಜಿಲ್ಲೆಯ ರಕ್ಷಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮಕ್ಕೆ, ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಪ್ರಮುಖ ಸ್ಥಳಗಳನ್ನು ಭದ್ರತೆ ದೃಷ್ಠಿಯಿಂದ ಗುರುತಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಹೆಚ್.ಪಿ.ಸಿ.ಎಲ್., ಎಲ್.ಪಿ.ಜಿ ಕಂಪನಿ ಸಹಯೋಗದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ “ಆಪರೇಶನ್ ಅಭ್ಯಾಸ್” ಅಣುಕ ಪ್ರದರ್ಶನ ಕಾರ್ಯಕ್ರಮ ನಡೆಸಿದರು.
ಒಂದೆಡೆ ಅನಿಲ ಸೋರಿಕೆ, ಇನ್ನೊಂದೆಡೆ ಬೆಂಕಿ ಅನಾಹುತದ ಸಂದರ್ಭವನ್ನು ಸೃಷ್ಟಿಸಿ, ಆಫರೇಶನ್ ಅಭ್ಯಾಸ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ, ಎಲ್ಲ ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು. ನಗರದ ಹಿಂದೂಸ್ಥಾನ ಪೆಟ್ರೋಲಿಯಮ್ ಕಾರ್ಪೊರೇಶನ್ ಲಿಮಿಟೆಡ್ನಲ್ಲಿ ಅನಿಲ ಸೋರಿಕೆ ಸನ್ನಿವೇಶ ಸೃಷ್ಟಿ ಮಾಡಿದ್ದರು. ಸೋರಿಕೆ ಆದ ತಕ್ಷಣ ಸೈರನ್ ಕೂಗಲು ಪ್ರಾರಂಭವಾಯಿತು. ತಕ್ಷಣ ಎಲ್ಲ ಕೆಲಸಗಾರರು ಓಡೋಡಿ ಬಂದು ಸುರಕ್ಷಿತವಾದ ಸ್ಥಳಕ್ಕೆ ಆಗಮಿಸಿದರು. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಳಿಕ ಆಂಬುಲೇನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.

ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸಿಬ್ಬಂದಿ ಅವರು ಸ್ಟ್ರೆಚರ್ ಮೂಲಕ ಆಂಬ್ಯುಲನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದರು. ಇದೇ ವೇಳೆ ಅಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಆರೋಗ್ಯ, ಪಶುವಿದ್ಯಕೀಯ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯವರು ಭಾಗವಹಿಸಿದ್ದರು.
ಈ ವೇಳೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮುಖ್ಯ ಸ್ಥಳಗಳಾದ ರೈಲು ನಿಲ್ದಾಣ, ಬಸ್ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪೆಟ್ರೊಲಿಯಂ ದಾಸ್ತಾನು ಸಂಗ್ರಹಾರ (ಡಿಪೊ) ಗಳಿವೆ. ಯಾವುದೇ ಅವಘಡ ಸಂಭವಿಸಿದಾಗ ತುರ್ತು ಚಿಕಿತ್ಸೆಗೆ 7 ಸರಕಾರಿ, 31 ಖಾಸಗಿ ಆಸ್ಪತ್ರೆಗಳಿದ್ದು, ಒಟ್ಟು 2841 ಬೆಡ್ಗಳ ಸೌಲಭ್ಯವಿದೆ. 1740 ಆಕ್ಸಿಜನ್ ಬೆಡ್, 399 ಐಸಿಯು ಬೆಡ್ ಹಾಗೂ 207 ವೆಂಟಿಲೆಟರ್ ಸೌಲಭ್ಯದ ಬೆಡ್ಗಳಿವೆ. ತುರ್ತು ಸಂದರ್ಭದಲ್ಲಿ ಭದ್ರತೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು 725 ಹೋಮಗಾರ್ಡ, 164 ಸಿವಿಲ್ ಡಿಡೆನ್ಸ್ ಹಾಗೂ 466 ಜನ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಗಳಿದ್ದಾರೆ ಎಂದರು.
ದೇಶದಲ್ಲಿ ತುರ್ತು ಪರಿಸ್ಥಿತಿಯ ಬಂದಾಗ ಸಾರ್ವಜನಿಕರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಅಣುಕು ಪ್ರದರ್ಶನವನ್ನು ಕೈಗೊಂಡಿದ್ದು, ಅನಿಲ ಸ್ಪೋಟಕವಾದಾಗ ಸಿಬ್ಬಂದಿಯವರು ಕಾರ್ಯಾಚರಣೆ ಮಾಡುವುದನ್ನು ಮತ್ತು ಅಗ್ನಿಶಾಮಕದಳದವರು ಅನಿಲ ಸೋರಿಕೆಯಾದಾಗ ತಮ್ಮ ಕೆಲಸವನ್ನು ಕಾರ್ಯರೂಪಕ್ಕೆ ತರುವುದನ್ನು ಅಣುಕ ಪ್ರದರ್ಶನದಲ್ಲಿ ತೋರಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಹೋಂಗಾರ್ಡ್, ನಾಗರಿಕ ರಕ್ಷಣಾ ಘಟಕ ಮತ್ತು ಅಗ್ನಿಶಾಮಕದಳ ಹೇಗೆ ಸಾರ್ವಜನಿಕರನ್ನು ಮತ್ತು ಪ್ರಾಣಿ, ಪಕ್ಷಿಗಳನ್ನು ರಕ್ಷಿಸುತ್ತಾರೆ ಎಂಬುದನ್ನು ಅಣುಕ ಪ್ರದರ್ಶನ ಎರ್ಪಡಿಸಲಾಗಿದೆ. ಅವಘಡದ ಸಂದರ್ಭದಲ್ಲಿ ತೊಂದರೆಯಾದಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಜನರಿಗೆ ಮತ್ತು ಜಾನುವಾರಗಳಿಗೆ ಯಾವುದೇ ಪ್ರಾಣ ಹಾನಿಯಾಗದಂತೆ ತಡೆಗಟ್ಟಲು ಈ ಅಣಕು ಪ್ರದರ್ಶನ ಮಾಡಲಾಗಿದೆ ಎಂದರು.

ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಕಂಪನಿಗಳಿದ್ದು, ಆ ಪ್ರದೇಶದಲ್ಲಿ ಅನಾಹುತಗಳು ಸಂಭವಿಸಿದ್ದಲ್ಲಿ ಜನರನ್ನು ರಕ್ಷಿಸಲು ಆ ಪ್ರದೇಶದಿಂದ ಸಂತ್ರಸ್ಥರನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಆ ಸ್ಥಳದಲ್ಲಿ 60ಕ್ಕೂ ಹೆಚ್ಚು ಬೆಡ್ಗಳಿದ್ದು, ಪರಿಹಾರ (ರೆಸ್ಕ್ಯೂ) ಕೇಂದ್ರಗಳನ್ನು ಮಾಡಿ, ಜನರನ್ನು ರಕ್ಷಿಸಲು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯಲ್ಲಿ ಯಾವುದೇ ಅನಾಹುತವಾದಲ್ಲಿ ಭಯಭೀತಿಯಾಗದ ಹಾಗೆ ನೋಡಿಕೊಳ್ಳುವ ಪ್ರಯತ್ನವನ್ನು ಅಣಕು ಪ್ರದರ್ಶನದ ಮೂಲಕ ತಿಳಿಸಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮಾತನಾಡಿ, ಅವಳಿ ನಗರದಲ್ಲಿ 1947 ರಿಂದ ಹಿಡಿದು ಇಲ್ಲಿಯವರೆಗೆ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ. ಆದರೆ ಮುಂದೆ ಸಂಭವಿಸಿದರೆ ನಾವು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈ ಅಣುಕ ಪ್ರದರ್ಶನ ಮಾಡುತ್ತಿದ್ದೇವೆ. ಒಂದು ಸ್ಥಳದಲ್ಲಿ ಘಟನೆ ನಡೆದರೆ ಬೇರೆ ಸ್ಥಳಗಳಿಗೂ ಬೇಗನೆ ಹರಡುವ ಸಂಭವ ಇರುತ್ತದೆ. ಪ್ರಾಣ ಹಾನಿ ಅತಿ ಹೆಚ್ಚಾಗಿ ಆಗುತ್ತದೆ. ಈ ದೃಷ್ಟಿಯಿಂದ ಜನರು ಮುಂಜಾಗ್ರತಾ ಕ್ರಮವನ್ನು ಹೇಗೆ ವಹಿಸಬೇಕು ಎಂಬುದು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ತುರ್ತಾಗಿ ಆಸ್ಪತ್ರೆಯನ್ನು ಕೂಡ ಸ್ಥಾಪನೆ ಮಾಡಲಾಗಿದೆ. ಪ್ರಾಣಿಗಳಿಗೆ ಹಾನಿಯಾದರೆ ಅವುಗಳಿಗೂ ಹಾರೈಕೆ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ ಮಾತನಾಡಿ, ಬೇಲೂರು ಕೈಗಾರಿಕಾ ಪ್ರದೇಶದ ಹಿಂದೂಸ್ಥಾನ ಪೆಟ್ರೋಲಿಯಮ್ ಕಾರ್ಪೋರೇಷನ್ ಲಿಮಿಟೆಡ್ ಆವರಣದಲ್ಲಿ ಅಣಕು ಪ್ರದರ್ಶನವನ್ನು ಮಾಡಿದ್ದೇವೆ. ರಾಜ್ಯ ಸರ್ಕಾರದ ಸೂಚನೆಯಂತೆ ಪೊಲೀಸ್ ಇಲಾಖೆ, ಬೇಲೂರು ಕೈಗಾರಿಕಾ ಸಂಸ್ಥೆ ಮತ್ತು ಬೇರೆ ಬೇರೆ ಕಾರ್ಖಾನೆಯವರು ನಮ್ಮ ಜೊತೆ ಕೈಜೋಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಇಲಾಖೆಯವರು ತುರ್ತು ವಾಹನಗಳಿಗೆ ಬರುವುದಕ್ಕೆ ಅನುಕೂಲ ಮಾಡಿಕೊಡುವುದು, ಸಾರ್ವಜನಿಕರು ಆ ಸ್ಥಳಗಳಿಗೆ ಹೋಗದ ಹಾಗೆ ನೋಡಿಕೊಳ್ಳುವುದು, ಬೇರೆ ರಸ್ತೆ ಮಾರ್ಗ ಕಲ್ಪಿಸಿ ಕೊಡುವುದು ಈ ತರಹದ ಎಲ್ಲ ಅನುಕೂಲವನ್ನು ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಎಎಸ್ಪಿ ನಾರಾಯಣ ಬರಮಣಿ, ಖಾರ್ಕಾನೆ ಮತ್ತು ಬೈಲರ್ ಇಲಾಖೆ ಜಂಟಿ ನಿರ್ದೇಶಕ ರವಿಂದ್ರ ರಾಠೋಡ, ಉಪನಿರ್ದೇಶಕ ವೆಂಕಟೇಶ ರಾಠೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ರವಿ ಸಾಲಿಗೌಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಮ್.ಹೊನಕೇರಿ. ಧಾರವಾಡ ತಹಶೀಲ್ದಾರ ಡಾ.ಡಿ.ಎಚ್.ಹೂಗಾರ, ಎಚ್.ಪಿ.ಸಿ.ಎಲ್ ಪ್ಲಾಂಟ್ ಹೆಡ್ ರಾಜಕುಮಾರ, ಕೃಷಿ, ಆರೋಗ್ಯ, ಸಾರಿಗೆ ಇಲಾಖೆ ಅಧಿಕಾರಿಗಳು, ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಧಾರವಾಡ | ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಿರ್ಲಾಪೂರ ಗ್ರಾಮ; ಕ್ರಮಕ್ಕೆ ಒತ್ತಾಯ
ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ: 0836-2445308, 2441077 ಹಾಗೂ ಪೊಲೀಸ್ ಆಯುಕ್ತ ಕಚೇರಿ ಸಹಾಯವಾಣಿ ಸಂಖ್ಯೆ:0836-2233555 ಹಾಗೂ ಧಾರವಾಡ ಪೊಲೀಸ್ ಅಧೀಕ್ಷಕರ ಕಚೇರಿ ಸಹಾಯವಾಣಿ ಸಂಖ್ಯೆ: 0836-2233201 ಗೆ ಕರೆ ಮಾಡಬಹುದು.