- ಮುಂದಿನ ವರ್ಷ ಪಿಯುಸಿ ಪರೀಕ್ಷಾ ಮಾದರಿ ಬದಲಾವಣೆ
- ಶುಲ್ಕ ನಿಯಂತ್ರಣ ಕಾಯ್ದೆ ಬಗ್ಗೆ ಚರ್ಚೆ ಮಾಡಲಾಗುವುದು
ಶಾಲೆಗಳಲ್ಲಿ ವಾರಕ್ಕೆ ಎರಡು ಮೊಟ್ಟೆ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿ ವಾರಕ್ಕೆ ಎರಡು ಮೊಟ್ಟೆ ನೀಡಲು ಅನುಮೋದಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊಟ್ಟೆ ಮತ್ತು ಶೂ ನೀಡುವ ವಿಚಾರದಲ್ಲಿ ಎಸ್ಡಿಎಮ್ಸಿ ಅವರಿಗೆ ಎಲ್ಲ ಅಧಿಕಾರ ನೀಡಲಾಗಿದೆ. 280 ಕೋಟಿ ರೂ. ಈ ಮೊಟ್ಟೆ ನೀಡಲು ಸದ್ಯ ಯೋಜನೆ ರೂಪಿಸಲಾಗಿದೆ. ವಾರ್ಷಿಕವಾಗಿ 84 ದಿನ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತದೆ. ಮೊಟ್ಟೆ ತಿನ್ನದೆ ಇರುವವರಿಗೆ ಚಿಕ್ಕಿ ಮತ್ತು ಬಾಳೆ ಹಣ್ಣು ಕೊಡುವ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟ ಚೆನ್ನಾಗಿಲ್ಲ ಎಂದರೆ ಎಸ್ಡಿಎಮ್ಸಿ ಅವರೇ ಜವಾಬ್ದಾರಿ ಎಂದು ತಿಳಿಸಿದರು.
ಹಿಂದಿನ ಸರ್ಕಾರ ವಾರದಲ್ಲಿ ಒಂದು ಮೊಟ್ಟೆ ನೀಡುತ್ತಿತ್ತು. ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ಕೊಡುವುದರಿಂದ ಮಾರ್ಜಿನಲ್ ಹೆಲ್ಪ್ ಆಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ ಮುಖ್ಯಮಂತ್ರಿಗೂ ಗೊತ್ತು. ಹೀಗಾಗಿ ನಾನು ಅವರ ಬಳಿ ಮನವಿ ಮಾಡಿದೆ ಎಂದರು.
ನಾನು ಅಧಿಕಾರಕ್ಕೆ ಬಂದಾಗ ನನ್ನ ಕ್ಷೇತ್ರದಲ್ಲಿ 52 ಶಾಲೆಯಲ್ಲಿ ಶಿಕ್ಷಕರೇ ಇರಲಿಲ್ಲ. ಎಷ್ಟೋ ಪೋಷಕರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ನಾವು ಮುಂದಿನ ಎಂಟು ತಿಂಗಳ ಒಳಗೆ ಕೆಲವೊಂದಿಷ್ಟು ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಈ ವ್ಯವಸ್ಥೆ ಯಾವ ರೀತಿ ನಡೆಯುತ್ತದೆ ಎಂಬುದನ್ನು ನಾನು ಈಗ ತಿಳಿದು ಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಈ ಸುದ್ದಿಓದಿದ್ದೀರಾ? ತಾಯಿ ಮರಣ ಪ್ರಮಾಣ ತಡೆಗಟ್ಟಲು ಅಗತ್ಯ ಕ್ರಮ: ಸಚಿವ ದಿನೇಶ್ ಗುಂಡೂರಾವ್
ಪಠ್ಯ ಪುಸ್ತಕದಲ್ಲಿ ಧಾರ್ಮಿಕತೆ ಮತ್ತು ರಾಜಕೀಯ ಇರಬಾರದು. ಪಠ್ಯದಲ್ಲಿನ ಐಡಿಯಾಲಜಿ ಎಲ್ಲವನ್ನೂ ನಾವು ತೆಗೆದು ಹಾಕಿದ್ದೇವೆ. ಮುಂದಿನ ವರ್ಷವೂ ನಾವು ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ. ಪಠ್ಯದಲ್ಲಿ ಅನೇಕ ಬದಲಾವಣೆ ಮಾಡುತ್ತೇವೆ. ಶುಲ್ಕ ನಿಯಂತ್ರಣ ಕಾಯ್ದೆ ಬಗ್ಗೆ ಚರ್ಚೆ ಮಾಡಲಾಗುವುದು. ಕೇಸ್ ಕೋರ್ಟ್ನಲ್ಲಿದೆ, ಇನ್ನೂ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದರು.
ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕಿದೆ. ಪಠ್ಯ ಪುಸ್ತಕ ಪರಿಷ್ಕೃರಣೆ ತುಂಬಾ ಮಾಡಬೇಕಿದೆ. ಸದ್ಯ ನಾವು ಕೆಲವು ಮಾತ್ರ ಪರಿಷ್ಕರಣೆ ಮಾಡಬೇಕಿದೆ. ಮುಂದಿನ ವರ್ಷದಿಂದ ಪಿಯುಸಿ ಪರೀಕ್ಷಾ ಮಾದರಿಯಲ್ಲಿಯೂ ಬದಲಾವಣೆ ಮಾಡುತ್ತೇವೆ. 20 ಆಂತರಿಕ ಅಂಕ ನೀಡಲು ಆದೇಶ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.