ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಭಾರತ ರಾಜತಾಂತ್ರಿಕ ಅಭಿಯಾನ ನಡೆಸಲು ನಿರ್ಧರಿಸಿದೆ. ವಿಶ್ವ ವೇದಿಕೆಯಲ್ಲಿ ಉಗ್ರವಾದದ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸರ್ವಪಕ್ಷ ನಿಯೋಗವನ್ನು ಶನಿವಾರ ರಚಿಸಿದೆ. ಈ ನಿಯೋಗದ ನೇತೃತ್ವವನ್ನು ಕೇಂದ್ರವು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ನೀಡಿದೆ.
ಆಪರೇಷನ್ ಸಿಂಧೂರ ಬಳಿಕ ಕೇಂದ್ರ ಸರ್ಕಾರವನ್ನು ಹೊಗಳಿದ್ದಕ್ಕೆ ಸ್ವಪಕ್ಷದಿಂದಲೇ ಶಶಿ ತರೂರ್ ಟೀಕೆಗೆ ಒಳಗಾಗಿದ್ದರು. ಇದೀಗ ಕೇಂದ್ರವು ಈ ನಿಯೋಗಕ್ಕೆ ಕಾಂಗ್ರೆಸ್ ನೀಡಿದ್ದ ನಾಲ್ಕು ಹೆಸರುಗಳನ್ನು ಬದಿಗಿಟ್ಟು ತರೂರ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು: ಶಶಿ ತರೂರ್
ಒಟ್ಟು ಏಳು ಮಂದಿಯನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ರಚಿಸಲಾಗಿದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಎದುರಿಸಲು ಭಾರತ ಒಮ್ಮತ ಮತ್ತು ದೃಢನಿಶ್ಚಯದ ವಿಧಾನವನ್ನು ಪ್ರದರ್ಶಿಸುವುದೇ ಈ ಕಾರ್ಯಾಚರಣೆಯ ಗುರಿಯಾಗಿದೆ ಎಂದ ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.
ನಿಯೋಗದಲ್ಲಿರುವ ನಾಯಕರು ಯಾರು?
1- ಶಶಿ ತರೂರ್, ಕಾಂಗ್ರೆಸ್
2- ರವಿಶಂಕರ್ ಪ್ರಸಾದ್, ಬಿಜೆಪಿ
3- ಸಂಜಯ್ ಕುಮಾರ್ ಝಾ, ಜೆಡಿಯು
4- ಬೈಜಯಂತ್ ಪಾಂಡಾ, ಬಿಜೆಪಿ
5- ಕನಿಮೋಳಿ ಕರುಣಾನಿಧಿ, ಡಿಎಂಕೆ
6- ಸುಪ್ರಿಯಾ ಸುಳೆ, ಎನ್ಸಿಪಿ
7- ಶ್ರೀಕಾಂತ್ ಏಕನಾಥ್ ಶಿಂದೆ, ಶಿವಸೇನೆ
ಸುಮಾರು 40 ಬಹು-ಪಕ್ಷ ಸಂಸದರು ಏಳು ಗುಂಪುಗಳನ್ನು ರಚಿಸುತ್ತಾರೆ. ವಿಶ್ವದ ವಿವಿಧ ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. ಈ ಏಳು ನಿಯೋಗಗಳ ಸದಸ್ಯರ ಹೆಸರುಗಳನ್ನು ಇನ್ನೂ ಘೋಷಿಸಲಾಗಿಲ್ಲ. ಪ್ರತಿ ನಿಯೋಗವು ಏಳರಿಂದ ಎಂಟು ಸದಸ್ಯರನ್ನು ಹೊಂದಿರುವ ಸಾಧ್ಯತೆಯಿದೆ. ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡಬಹುದು ಎಂದು ವರದಿಯಾಗಿದೆ.
ಮೇ 23ರಿಂದ ಸರ್ವಪಕ್ಷ ನಿಯೋಗ ಪ್ರವಾಸ ಆರಂಭಿಸಲಿದ್ದು ಹತ್ತು ದಿನಗಳವರೆಗೆ ಈ ಅಭಿಯಾನ ನಡೆಸುವ ನಿರೀಕ್ಷೆಯಿದೆ. ಅಮೆರಿಕ, ಯುನೈಟೆಡ್ ಕಿಂಗ್ಡಮ್(ಯುಕೆ), ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ದಕ್ಷಿಣ ಆಫ್ರಿಕಾ ಮತ್ತು ಜಪಾನ್ ಸೇರಿದಂತೆ ಹಲವು ಪ್ರಮುಖ ದೇಶಗಳ ರಾಜಧಾನಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಕಾರ್ಯಾಚರಣೆ ಮಾಹಿತಿ ವಿವರಿಸಿದ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ
ಏಪ್ರಿಲ್ 22ರಂದು ಪಾಕಿಸ್ತಾನದ ಉಗ್ರ ಸಂಘಟನೆಯು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದನಾ ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದಿದೆ. ಈ ದಾಳಿ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್ಇಟಿ)ದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹೊತ್ತುಕೊಂಡಿದೆ.
"In moments that matter most, Bharat stands united. Seven All-Party Delegations will soon visit key partner nations, carrying our shared message of zero-tolerance to terrorism. A powerful reflection of national unity above politics, beyond differences," posts Union Minister… pic.twitter.com/ET1RP7KxZ9
— Press Trust of India (@PTI_News) May 17, 2025
ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಹೆಸರಲ್ಲಿ ದಾಳಿ ನಡೆಸಿವೆ. ನೂರಕ್ಕೂ ಅಧಿಕ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ಅದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅಧಿಕೃತವಾಗಿ ಯುದ್ಧ ಆರಂಭಿಸುವುದಕ್ಕೂ ಮುನ್ನವೇ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ.
