ಬೆಳಗಾವಿಯಿಂದ 15 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣ. ಕಳೆದ ವರ್ಷದಿಂದ ಟೈಗರ್ ಸಫಾರಿ ಪ್ರಾರಂಭವಾಗಿದ್ದು, ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.
ಗ್ರಾಮ ಪಂಚಾಯತಿಯಿಂದ 2020-2021 ಹಾಗೂ 2021-2022ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿಯಲ್ಲಿ ಈ ಮೃಗಾಲಯವನ್ನು ಅಭಿವೃದ್ದಿ ಪಡಿಸಲಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮೃಗಾಲಯ ದಿನದಿಂದ ದಿನಕ್ಕೆ ಕಳೆಕಟ್ಟುತ್ತಿದೆ.
125 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಮೃಗಾಲಯವು, ಹಿಂದೆ ಚುಕ್ಕೆ ಜಿಂಕೆಗಳ ವಾಸಸ್ಥಾನವಾಗಿತ್ತು. ಹಾಗಾಗಿ, ಅದಕ್ಕೆ ಸ್ಥಳೀಯರು ‘ಚಿಗರಿ ಮಾಳ’ ಎಂದು ಕರೆಯುತ್ತಿದ್ದರು. ಆ ಬಳಿಕ ಇಲ್ಲಿ 1989ರಲ್ಲಿ ನಿಸರ್ಗಧಾಮ ನಿರ್ಮಿಸಲಾಯಿತು. 2018ರಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಆರಂಭಿಸಲಾಗಿದೆ.

ಗ್ರಾಮ ಪಂಚಾಯತ್ ಸಹಕಾರದೊಂದಿಗೆ 27 ಲಕ್ಷ ರೂ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 3 ಹೊಸ ಕೆರೆಗಳ ನಿರ್ಮಾಣ ಮಾಡಲಾಗಿದೆ. 27 ಲಕ್ಷ ರೂ ಗಳಲ್ಲಿ ನಿರಾವರಿ ಕಾಲುವೆ, ಸಿಂಹದ ಪಂಜರಜದ ಬಳಿ 19 ಲಕ್ಷ ರೂಗಳಲ್ಲಿ ಕೆರೆ ನಿರ್ಮಾಣ, 67 ಲಕ್ಷ ರೂ ಗಳಲ್ಲಿ ಚರಂಡಿ ನಿರ್ಮಾಣ, 114 ಲಕ್ಷ ರೂ ವೆಚ್ಚದಲ್ಲಿ ರಸ್ತಗಳಿಗೆ ಫೇವರ್ಸ್ ಅಳವಡಿಕೆ, ಹುಲಿ ಸಫಾರಿ ರಸ್ತೆ ನಿರ್ಮಾಣ, ಮೃಗಾಯದಲ್ಲಿ ಸಿಸಿ ರಸ್ತಗಳ ನಿರ್ಮಾಣ ಹೀಗೆ ಸುಮಾರು 760 ಲಕ್ಷ ವೆಚ್ಚದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಲಾಭವನ್ನು ಸದುಪಯೋಗಪಡಿಸಿಕೊಂಡಿರುವುದು ಈ ಮೃಗಾಲಯದ ವಿಶೇಷತೆ.
ಮೃಗಾಲಯದಲ್ಲಿ 2 ಸಿಂಹ, 3 ಹುಲಿ, 3 ಚಿರತೆ, 2 ಕರಡಿಗಳು ಇವೆ. 13 ನರಿ, 16 ಜಿಂಕೆ, 26 ಕೃಷ್ಣಮೃಗ, ಬ್ಲ್ಯಾಕ್ ಬಕ್, 4 ಕತ್ತೆಕಿರುಬ, 6 ನವಿಲು, ಮೊಸಳೆ, ಕಡವೆ, ಎಮು, ಗುಲಾಬಿ ಕೊರಳಿನ ಗಿಳಿ, ಕೆಂದಲೆ ಗಿಳಿ ಸೇರಿದಂತೆ 25 ಪ್ರಭೇದಗಳ ಒಟ್ಟು 215 ಪ್ರಾಣಿ–ಪಕ್ಷಿಗಳನ್ನು ಇಲ್ಲಿ ನೋಡಬಹುದು.

ಈ ಕುರಿತು ವಲಯ ಅರಣ್ಯಾಧಿಕಾರಿ ಪವನ್ ಈ ದಿನ ಡಾಟ್ ಕಾಮ್ನೊಂದಿಗೆ ಮಾತನಾಡಿ, ಈ ಮೃಗಾಲಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಿಸಿ ರಸ್ತೆ, ಕೆರೆ, ಚರಂಡಿಗಳು ಸೇರಿದಂತೆ ಅನೇಕ ಅಭಿವೃದ್ಧಿಗಳಾಗಿದ್ದು, ಮೃಗಾಲಯದಲ್ಲಿ 27 ವಿಧದ 215 ಪ್ರಾಣಿ ಪಕ್ಷಿಗಳಿವೆ. ದಿನ ನಿತ್ಯ 800 ರಿಂದ ಒಂದು ಸಾವಿರ ಜನ ಬರುತ್ತಾರೆ. ಶನಿವಾರ ಮತ್ತು ರವಿವಾರ 3000 ವರೆಗೆ ಪ್ರವಾಸಿಗರು ಬರುತ್ತಾರೆ. ಪಶು ವೈದ್ಯಾಧಿಕಾರಿಗಳು ಹಾಗೂ 30 ಜನ ಇಲ್ಲಿ ಕೆಲಸ ಮಾಡುತ್ತಾರೆ” ಎಂದು ತಿಳಿಸಿದರು.

ಧಾರವಾಡದಿಂದ ಮೃಗಾಲಯಕ್ಕೆ ಆಗಮಿಸಿದ ಪ್ರವಾಸಿಗರು ಮಾತನಾಡಿ, “ಇಲ್ಲಿ ಸಿಂಹ, ಕರಡಿ, ಜಿಂಕೆ, ಚಿರತೆ ವಿವಿಧ ಪ್ರಾಣಿ-ಪಕ್ಷಿಗಳು ಇವೆ. ಸರ್ಕಾರವು ಇನ್ನು ಹೆಚ್ಚು ಪ್ರಾಣಿ ಪಕ್ಷಿಗಳನ್ನು ಮೃಗಾಲಯಕ್ಕೆ ತಂದರೆ ಚೆನ್ನ. ಮಕ್ಕಳಿಗೆ ಹಾಗೂ ದೊಡ್ಡವರಿಗೂ ಕೆಲಸದ ನಡುವೆ ವಾರಕ್ಕೊಮ್ಮೆ ಬಂದು ಕಾಲ ಕಳೆಯಲು ಮೃಗಾಲಯ ಅನುಕೂಲಕರವಾಗಿದೆ” ಎಂದು ತಿಳಿಸಿದರು.

ಈ ಕಿರು ಮೃಗಾಲಯವು ಇಂದು ಸ್ಥಳೀಯರಿಗಷ್ಟೇ ಅಲ್ಲದೇ ಪಾರಂಪರಿಕ ಪ್ರವಾಸಿಗರಿಗೂ ಆಕರ್ಷಣೆಯ ಕೇಂದ್ರವಾಗಿ ರೂಪುಗೊಂಡಿದೆ. ಮನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೂ ಸಹಾಯವಾಗಿವೆ. ಟೈಗರ್ ಸಫಾರಿ ಜೋಡಣೆಯಾದ ನಂತರ ಈ ಮೃಗಾಲಯವು ಹೊಸ ಮಗ್ಗುಲಿಗೆ ಹೊರಳಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಪ್ರವಾಸೋದ್ಯಮದಲ್ಲಿ ಹೊಸ ಪುಟ ತೆರೆಯುತ್ತಿದೆ. ನೈಸರ್ಗಿಕ ವೈವಿಧ್ಯ, ಪ್ರಾಣಿ ಪ್ರಪಂಚ ಹಾಗೂ ಪ್ರಾದೇಶಿಕ ಪರಿಕಲ್ಪನೆಗಳನ್ನು ಜೀವಂತವಾಗಿ ತೋರಿಸುವ ಈ ಕೇಂದ್ರವು ಗ್ರಾಮೀಣ ಅಭಿವೃದ್ಧಿಯ ಮೌಲ್ಯಮಾಪನ ಮಾದರಿಯಾಗಿ ಸ್ಥಿರವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಕರ್ಯಗಳೊಂದಿಗೆ ಈ ಮೃಗಾಲಯ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗುವುದು ಅನುಮಾನವಿಲ್ಲ.
ಇದನ್ನೂ ಓದಿ: ಬೆಳಗಾವಿ | ಮಾಜಿ ಶಾಸಕರ ಪುತ್ರನ ಕಾರು ಡಿಕ್ಕಿ ಮೂವರು ಸಾವು

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು