ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಿಲ್ಲದ ಐವತ್ತು ಅರವತ್ತು ವರ್ಷಗಳ ಹಿಂದಿನಿಂದಲೂ ಹಳ್ಳಿಗಳಲ್ಲಿ ಗರ್ಭಿಣಿ ಸ್ತ್ರೀಯರ ಹೆರಿಗೆ ಮಾಡಿಸುತ್ತಿದ್ದ ಕಾಲುವೆಹಳ್ಳಿಯ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಮತ್ತು ನೂರಾರು ದನಗಳನ್ನು ಸಾಕುವ ಗೋಪಾಲಕಿ ಪಾರ್ವತಮ್ಮನವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶ್ರೀಶಾರದಾಶ್ರಮದ ಸದಸ್ಯರು ಗೌರವಿಸಿ ಸನ್ಮಾನಿಸಿದರು.
ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿರುವ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಮತ್ತು ನೂರಾರು ದೇಸಿ ಗೋವುಗಳನ್ನು ನಿಸ್ವಾರ್ಥವಾಗಿ ಪಾಲನೆ-ಪೋಷಣೆ ಮಾಡುತ್ತಿರುವ ಪಾರ್ವತಮ್ಮನವರಿಗೆ ಚಳ್ಳಕೆರೆಯ ಶ್ರೀಶಾರದಾಶ್ರಮದವರು ಆಹಾರ ಸಾಮಗ್ರಿ, ಗೃಹ ಬಳಕೆಯ ವಸ್ತುಗಳನ್ನು ನೀಡಿ ಗೌರವಧನ ವಿತರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ, ರೈತ ಮುಖಂಡ ಕೆ.ಪಿ.ಭೂತಯ್ಯ “ಕಾಲುವೆಹಳ್ಳಿಯ ಮಹಿಳೆಯರ ನಿಸ್ವಾರ್ಥ ಸೇವೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಸೇವೆ” ಎಂದು ತಿಳಿಸಿದರು.
ಜಿಲ್ಲಾ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಜೆ.ಹೆಚ್ ರಾಘವೇಂದ್ರ ಮಾತನಾಡಿ “ಕಾಲುವೆಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಐವತ್ತು ವರ್ಷಗಳ ಕಾಲ ನಿಸ್ವಾರ್ಥವಾಗಿ ಸಾವಿರಾರು ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿರುವ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಅವರು ಗೃಹಲಕ್ಷೀ ಮತ್ತು ವೃದ್ಧಾಪ್ಯ ವೇತನದಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದು ಅವರಿಗೆ ಸರಿಯಾದ ಮನೆ, ಸೂರಿನ ವ್ಯವಸ್ಥೆಯಿಲ್ಲ. ಅವರಿಗೆ ತುರ್ತಾಗಿ ಮನೆ ನಿರ್ಮಿಸುವ ಅಗತ್ಯವಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಆಡಳಿತ ಗಮನ ಹರಿಸಿ ಮನೆ ನಿರ್ಮಿಸಿಕೊಡಬೇಕು” ಎಂದು ಮನವಿ ಮಾಡಿದರು.
ಗ್ರಾಮದ ಹಿರಿಯ ಮುಖಂಡ ನೀಲಕಂಠ ಶೆಟ್ಟಿ ಮಾತನಾಡಿ “ಗೋಪಾಲಕಿ ಪಾರ್ವತಮ್ಮನವರ ಗೋಸೇವೆಯನ್ನು ಕೊಂಡಾಡಿ ಆಕೆಯ ಸೇವೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ಗುರುತಿಸಿದ್ದಾರೆ. ಅವರನ್ನು , ತಿಮ್ಮಕ್ಕನವರನ್ನು ಗೌರವಿಸುತ್ತಿರುವುದು ನಮ್ಮ ಊರಿಗೆ ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಅವ್ಯವಹಾರ, ತನಿಖೆಗೆ ಸಂಘದ ನಿರ್ದೇಶಕರ ಆಗ್ರಹ.
ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರು ಸೂಲಗಿತ್ತಿ ತಳುಕಿನ ತಿಮ್ಮಕ್ಕ, ಗೋಪಾಲಕಿ ಪಾರ್ವತಮ್ಮ ಹಾಗೂ ತಿಮ್ಮಕ್ಕ ಅವರನ್ನು ನೋಡಿಕೊಳ್ಳುತ್ತಿರುವ ಪಾಲಕ್ಕರನ್ನು ಸನ್ಮಾಸಿ ಗೌರವಧನ ಮತ್ತು ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಗೋಪಾಲಕಿ ಪಾರ್ವತಮ್ಮನವರ ಗೋವುಗಳಿಗೆ ಗೋಪೂಜೆ ನೆಡೆಸಿದ ಇಂಡಿ ಹಾಗೂ ಬಾಳೆ ಹಣ್ಣು ವಿತರಿಸುವ ಮೂಲಕ ಗೋಸೇವೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘಟಕ-ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಶಿಲ್ಪಾ ರಮೇಶ್, ಆಶಾ ಅನುಪ್, ಶುಭ ಸೋಮಶೇಖರ್, ಮೋಹಿನಿ ಸತ್ಯನಾರಾಯಣ, ರುಕ್ಮಿಣಿ, ರಂಗಸ್ವಾಮಿ, ಡಿ.ಆರ್ ತಿಮ್ಮಣ್ಣ, ಲಿಂಗದಹಳ್ಳಿ ಪಾಲಣ್ಣ, ಕೆ.ಜಿ.ರಾಮಣ್ಣ, ಜಿ.ಕಾಂತಣ್ಣ, ಲೋಕೇಶ್ , ಕೆ.ಓ.ಪಾಲಣ್ಣ, ಲೋಕೇಶ್ ಪೂಜಾರಿ, ರಾಜಣ್ಣ ಉಪಸ್ಥಿತರಿದ್ದರು.