ಸಾಮಾನ್ಯವಾಗಿ ಶಿಕ್ಷಣವಿಲ್ಲದವರಲ್ಲಿ ಪ್ರಬುದ್ಧತೆ, ಶಕ್ತಿ, ಆತ್ಮವಿಶ್ವಾಸ ಇರಲಾರದೆಂದು ನಾವು ಊಹಿಸುತ್ತೇವೆ. ಆದರೆ ಈ ನಂಬಿಕೆಗೆ ವಿರುದ್ಧ ವ್ಯಾಖ್ಯಾನ ನೀಡುವ ಅಪೂರ್ವ ಉದಾಹರಣೆ ಅಂಗನವಾಡಿ ಸಹಾಯಕಿ ಚಂದಮ್ಮ ಗೋಳಾ ಅವರದ್ದು. ಕೇವಲ ಎರಡನೇ ತರಗತಿ ಓದಿದ ಇವರು ತಮ್ಮ ತಾಳ್ಮೆ, ದುಡಿಮೆ, ಸಮಾಜಸೇವೆಯ ಮೂಲಕವೇ ಸಾವಿರಾರು ಮಹಿಳೆಯರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಅವರು ಮಾಡಿದ ಸಾಧನೆಗಳು ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಶ್ರೀಶೈಲ ನಾಗರಾಳರ “ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಕೆರೆಯ ಚಂದಮ್ಮ” ಕೃತಿಯ ಮೂಲಕ ಹಾಗೂ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರದ ಬಿಎಸ್ಸಿ/ಬಿಎಚ್ಎಸ್ಸಿ ಪಠ್ಯಪುಸ್ತಕದಲ್ಲೂ ಪ್ರಸ್ತುತಗೊಂಡಿವೆ. ಡಾ. ಪ್ರಭು ಖಾನಾಪುರೆ ಅವರ ಲೇಖನದ ಮೂಲಕ ಈ ಸಾಧಕಿ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾರೆ.
ಚಂದಮ್ಮ ಗೋಳಾ ಹಿನ್ನಲೆ ಹಾಗೂ ಸಂಘಟನಾ ಜೀವನ:
ಚಂದಮ್ಮ ಕಲಬುರಗಿ ಜಿಲ್ಲೆಯ ರಾಮ್ಜಿ ನಗರದವರು. ತವರು ಆಳಂದ ತಾಲೂಕಿನ ಗೋಳಾ (ಬಿ). ಪ್ರಸ್ತುತ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, 1996ರಿಂದಲೇ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯೊಂದಿಗೆ ಶ್ರಮಿಸುವ ಮೂಲಕ ಮಹಿಳಾ ಹಕ್ಕು, ನ್ಯಾಯ ಹಾಗೂ ಸಬಲೀಕರಣಕ್ಕಾಗಿ ಹೋರಾಟ ಮಾಡಿದ್ದಾರೆ.

ರಾಜ್ಯ ಸಮಿತಿಯ ಸದಸ್ಯೆಯಿಂದ ಹಿಡಿದು ನಗರ ಘಟಕದ ಅಧ್ಯಕ್ಷೆಯವರೆಗೆ ಹಲವು ಹುದ್ದೆಗಳಲ್ಲಿ ನೇತೃತ್ವ ವಹಿಸಿರುವ ಚಂದಮ್ಮ ಅವರು, ರಮಾಬಾಯಿ ಮಹಿಳಾ ಮಂಡಳ, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಸೌಹಾರ್ದ ಚಿಂತನ ವೇದಿಕೆ, ಅಂಗನವಾಡಿ ನೌಕರರ ಸಂಘಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಲವಾರು ಪ್ರಭಾವಶಾಲಿ ಕಾರ್ಯಕ್ರಮಗಳನ್ನು ಮುನ್ನಡೆಸಿದ್ದಾರೆ.
ಚಂದಮ್ಮರನ್ನು ಅರಸಿ ಬಂದ ಪ್ರಶಸ್ತಿಗಳು:
ಚಂದಮ್ಮ ಅವರ ಸೇವೆಯನ್ನು ಗುರುತಿಸಿ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿವೆ. ಸ್ವಚ್ಛ ಭಾರತ ಮಿಷನ್ ಪ್ರಶಂಸಾ ಪ್ರಮಾಣಪತ್ರ (2015), ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ (2016), ಡಾ. ಅಂಬೇಡ್ಕರ್ ಪ್ರಶಸ್ತಿ (2016), ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ (2017), ಅಮ್ಮ ಗೌರವ ಪ್ರಶಸ್ತಿ (2018), ನವರಾತ್ರಿ ರಂಗೋತ್ಸವ ಪ್ರಶಸ್ತಿ (2018), ಶಾಂತವೇರಿ ಗೋಪಾಲಗೌಡ ಪ್ರಶಸ್ತಿ (2022), ಡಾ. ಬಾಬು ಜಗಜೀವನ ರಾಂ ಪ್ರಶಸ್ತಿ (2024) ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಚಂದಮ್ಮ ಭಾಜನರಾಗಿದ್ದಾರೆ.

ದೇವದಾಸಿ ಮಹಿಳೆಯರಿಗೆ ಪಿಂಚಣಿ, ವಸತಿ, ಭೂಮಿ ಸೇರಿದಂತೆ ಹಲವು ಹಕ್ಕುಗಳಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ 800ಕ್ಕೂ ಹೆಚ್ಚು ಜನರನ್ನು ಕಾರ್ಮಿಕ ಇಲಾಖೆಯಡಿ ನೋಂದಾಯಿಸಿ ಸೌಲಭ್ಯ ದೊರಕಿಸಲು ಸಹಾಯ ಮಾಡಿದ್ದಾರೆ. ಸುಕನ್ಯಾ, ಸ್ವರ್ಣಜಯಂತಿ, ಜೈಭವಾನಿ ಸೇರಿದಂತೆ ಹಲವಾರು ಉಳಿತಾಯ ಗುಂಪುಗಳನ್ನು ರಚಿಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದಾರಿ ನಿರ್ಮಿಸಿದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಸಾಲ, ಸಬ್ಸಿಡಿ ಪಡೆದು ವ್ಯಾಪಾರ ಹಾಗೂ ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ.

ರಾಮ್ಜಿ ನಗರದಲ್ಲಿ 205 ಮನೆಗಳಿಗೆ ಹಕ್ಕುಪತ್ರ, ಶೌಚಾಲಯ, ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ, ಬಾಡಿಗೆ ಮನೆಯಲ್ಲಿ ವಾಸವಿದ್ದ ಬಡವರಿಗೆ ಮನೆ ವಿತರಣೆ – ಇವೆಲ್ಲವುಗಳ ಹೋರಾಟದ ಹಿಂದೆ ಚಂದಮ್ಮರ ನೇತೃತ್ವವಿದೆ.
ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಲಭ್ಯವಿಲ್ಲದ ಸಮಯದಲ್ಲಿ “ಸುಲಗಾಯಿ ವ್ಯಾಪಾರ”ದ ಮೂಲಕ ಮಾದರಿಯೊಂದನ್ನು ರೂಪಿಸಿ, ನಿರುದ್ಯೋಗ ತೊಡೆದು ಸಾವಿರಾರು ಜನರಿಗೆ ಅನುಪಮ ದಾರಿ ತೋರಿಸಿದ್ದಾರೆ.
ಪ್ರಚಾರ–ಆಂದೋಲನಗಳಲ್ಲಿ ಚಂದಮ್ಮ:
ʼಸಾವಿತ್ರಿಬಾಯಿ ಫುಲೆ ಮಾಸಿಕ ಆಚರಣೆʼ, ʼಹೆಣ್ಣುಮಗು ಉಳಿಸಿ– ಮಾನವಕುಲ ರಕ್ಷಿಸಿʼ, ʼಅಪಮಾನದ ವರದಕ್ಷಿಣೆ ನಿಲ್ಲಿಸಿʼ, ʼಆಸ್ತಿ ಹಕ್ಕು ಜಾರಿಗೆ ಹೋರಾಟʼ, ʼಅತ್ಯಾಚಾರ ತಡೆʼ, ʼಮೂಢನಂಬಿಕೆ ವಿರುದ್ಧದ ಹೋರಾಟಗಳುʼ, ʼಮಹಿಳಾಪರ ಕಾನೂನು ಕಮ್ಮಟʼ, ʼಬಸ್ಸಿನಲ್ಲಿ ಮಹಿಳಾ ಮೀಸಲು ಆಸನಕ್ಕಾಗಿ ಹೋರಾಟʼ, ʼಚುನಾವಣೆಯಲ್ಲಿ ಮಹಿಳೆಯರ ಸಂರಕ್ಷಣೆಗೆ ಒತ್ತಾಯʼ, ʼಸೌಹಾರ್ದ ಇಫ್ತಾರ್ ಕೂಟ– ಧರ್ಮಸಾಮರಸ್ಯದ ಸಾಧನೆʼ, ʼಗುಜರಾತಿನಲ್ಲಿ ಮದುವೆ ಹೆಸರಿನಲ್ಲಿ ಮಹಿಳೆಯರ ಮಾರಾಟ ತಡೆಗೆ ಜಾಗೃತಿ ಕಾರ್ಯಗಳುʼ.. ಇನ್ನೂ ಹತ್ತು ಹಲವು ಹೋರಾಟಗಳಲ್ಲಿ ಚಂದಮ್ಮ ಭಾಗಿಯಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಚಂದಮ್ಮ ಗೋಳಾ ಅವರ ಬದುಕು ಪಠ್ಯಪುಸ್ತಕದ ವಿಷಯ ಮಾತ್ರವಲ್ಲ; ಅದು ಭದ್ರ ನಿರ್ಧಾರ, ದುಡಿಮೆ, ನಾಯಕತ್ವ ಮತ್ತು ಹೋರಾಟದಿಂದ ರೂಪುಗೊಂಡ ಜೀವನದ ಪಾಠ. ಶಿಕ್ಷಣವಿಲ್ಲದಿದ್ದರೂ ತಮ್ಮ ಸಮಾಜದ ಮಹಿಳೆಯರಿಗೆ ಬೆಳಕು ತೋರಿದ ಅವರು ನಿಜವಾದ ಪ್ರಜ್ಞಾವಂತರು. ಸಾಮಾಜಿಕ ಚಳವಳಿಯ ಸಂಚಾಲಕಿ. ʼಹೆಣ್ಣು ಮನಸ್ಸು ಮಾಡಿದರೆ, ಮೌನವನ್ನೇ ಬಲವಾಗಿ ಪರಿವರ್ತಿಸಬಹುದಾಗಿದುʼ ಎಂಬ ಸಂದೇಶ ಸಾರಿದ ಧೀರೆ.

ಇದನ್ನೂ ಓದಿ: ಬೆಳಗಾವಿ | ಮನರೇಗಾ ಯೋಜನೆಯಡಿ ಅಭಿವೃದ್ಧಿ; ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಮೆರಗು
ಚಂದಮ್ಮ ಗೋಳಾ ಅವರ ಬದುಕು ನಮ್ಮನ್ನು ಆತ್ಮವಿಶ್ಲೇಷಣೆಗೆ ಒಯ್ಯುತ್ತದೆ. ಒಬ್ಬ ಮಹಿಳೆ ಶಿಕ್ಷಣವಿಲ್ಲದೆ, ನಿತ್ಯದ ಬದುಕಿನ ಸಂಕಷ್ಟಗಳ ನಡುವೆಯೂ, ತನ್ನ ಜೀವನವನ್ನೇ ಒಂದು ದೊಡ್ಡ ಹೋರಾಟದ ಪರಿಕಲ್ಪನೆಯಾಗಿ ರೂಪಿಸಿಕೊಂಡಿರುವುದು ಇಂದಿನ ಯುಗಕ್ಕೆ ಅಪರೂಪ. ಅವರು ಬಡತನದ ಮಣ್ಣಿನಿಂದ ಬೆಳೆದರೂ, ಮಣ್ಣಿಗೆ ಸಿಂಚನ ನೀಡಿದವರು.

ತಮ್ಮ ಕಠಿಣ ಅನುಭವಗಳಿಂದ ಇತರರಿಗೆ ಬೆಳಕು ನೀಡಿರುವ ಈ ಹೆಮ್ಮೆಯ ಮಹಿಳೆ ನೂರಾರು ಮಹಿಳೆಯರ ಬದುಕಿಗೆ ದಿಕ್ಕು ತೋರಿಸಿದ್ದಾರೆ. ಹಕ್ಕುಪತ್ರ, ಪಿಂಚಣಿ, ವಸತಿ, ಉದ್ಯೋಗ, ಸಬಲೀಕರಣ – ಇವೆಲ್ಲವೂ ಕಾಗದದ ಪದಗಳಾಗಿಲ್ಲ, ಅವರಿಂದ ಕಾರ್ಯರೂಪಕ್ಕೆ ಬಂದ ಸತ್ಯಗಳಾಗಿವೆ. ಇಂದು ಅವರ ಹೋರಾಟದ ಹಾದಿಯಲ್ಲಿ ನಡಿಗೆಯಿಡುವ ಸಾವಿರಾರು ಹೆಜ್ಜೆಗಳು ನೂರಾರು ಹೊಸ ಚಂದಮ್ಮಗಳ ಹುಟ್ಟಿಗೆ ಅವಕಾಶ ನೀಡುತ್ತಿವೆ. ಅವರು ಆಧುನಿಕ ಭಾರತದ ಗ್ರಾಮೀಣ ಪ್ರಜ್ಞೆ, ಮಹಿಳಾ ಶಕ್ತಿಯ ಪ್ರತೀಕ.
