ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಸಲಾಗಿದ್ದು, ಇದರಿಂದಾಗಿ ಅಕ್ಕ-ಪಕ್ಕದ ಗ್ರಾಮಗಳ ಜನರು ಮೊಬೈಲ್ನಲ್ಲಿ ಮಾತನಾಡಲು ತೀವ್ರ ಸಂಕಷ್ಟವಾಗುತ್ತಿದೆ. ಕೂಡಲೇ ಪ್ರಿಕ್ವೆನ್ಸಿ ಕಡಿಮೆ ಮಾಡುವಂತೆ ಸುತ್ತಲಿನ ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂಬಂಧ ನಂದಿಕೂರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ನೇತೃತ್ವದಲ್ಲಿ ಪಾಣೆಗಾಂವ, ಸೀತನೂರ ಮತ್ತು ನಂದಿಕೂರ ಗ್ರಾಮಸ್ಥರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಖಂಡ ಪವನ್ ಕುಮಾರ್ ವಳಕೇರಿ ಮಾತನಾಡಿ, ʼಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಬಾರದೆಂದು ಜಾಮರ್ ಅಳವಡಿಸಿದ್ದಾರೆ. ಆದರೆ, ಇದರ ಶಿಕ್ಷೆ ಕೈದಿಗಳಿಗಿಂತ ಜನಸಾಮಾನ್ಯರಿಗೆ ಹೆಚ್ಚು ಆಗುತ್ತಿದೆ. ಜೈಲು ಸುತ್ತಲಿನ ಗ್ರಾಮಗಳಾದ ಪಾಣೇಗಾಂವ, ಸೀತನೂರ ಮತ್ತು ನಂದಿಕೂರ ಗ್ರಾಮಗಳ ಜನರು ನೆಟವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಇಲ್ಲಿನ ಜನರು ಮೊಬೈಲ್ ಕರೆ ಬರುವ-ಹೋಗುವುದು ಸಾಧ್ಯ ಇಲ್ಲದಂತಾಗಿದೆʼ ಎಂದು ದೂರಿದರು.
ʼಸೀತನೂರ್ ಗ್ರಾಮದಲ್ಲಿ ನೆಟ್ವರ್ಕ್ ಬ್ಯೂಸಿ ಎಂದು ತೋರಿಸುತ್ತಿದು, ಫೋನ್ ಕರೆ ಮಾಡಿದವರು ತಪ್ಪಾಗಿ ಅರ್ಥೈಸಿಕೊಂಡು ಉದ್ದೇಶಪೂರ್ವಕ ಕರೆ ಸ್ವೀಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಿದ್ದಾರೆ. ಇದರಿಂದ ಜನರು ಯಾರೊಂದಿಗೂ ಸಂಪರ್ಕಿಸಲು ಸಾಧ್ಯವಾಗದೇ ಕೆಲಸ ಕಾರ್ಯಗಳಿಗಾಗಿ ಪರದಾಡಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆʼ ಎಂದು ಹೇಳಿದರು.
ʼಜೈಲಿನಲ್ಲಿ ಅಳವಡಿಸಿರುವ ಜಾಮರ್ ಫ್ರಿಕ್ವೆನ್ಸಿ ತುಂಬಾ ಕಡಿಮೆ ಮಾಡಬೇಕು ಮತ್ತು ಅದರ ವ್ಯಾಪ್ತಿ ಕಡಿಮೆಗೊಳಿಸಿ ಜನರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇದೇ ಮೇ 26ರಂದು ಮುಖ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಮುಖರಾದ ಶಂಕರ್ ಕಾರ್ಬಾರಿ, ನಾಗೇಶ್ ಮುಚಖೇಡ, ಶರಣಯ್ಯ ಸ್ವಾಮಿ ಸೀತನೂರ್, ಹುಸೇನ್ ಸಾಬ್ ಮೋಹಜನ್, ವೀರಯ್ಯ ಸ್ವಾಮಿ, ಕಲ್ಯಾಣರಾವ್ ಪಾಟೀಲ್ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ : ಬೀದರ್ | ಬಿಟ್ಟೂಬಿಡದ ಮಳೆ : 325 ಹೆಕ್ಟೇರ್ಗೂ ಅಧಿಕ ಬೆಳೆ ಹಾನಿ; ಪರಿಹಾರದ ನಿರೀಕ್ಷೆಯಲ್ಲಿ ರೈತರು