ಕಾರ್ಮಿಕ ವಿರೋಧಿಯಾದ 4 ಲೇಬರ್ ಕೋಡ್ಗಳ ಜಾರಿಯನ್ನು ವಿರೋಧಿಸಿ ಜಂಟಿ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ(ಜೆಸಿಟಿಯು) ಹಾಗೂ ಸಂಯುಕ್ತ ಕಿಸಾನ್ ಮೋರ್ಛಾ ಜಂಟಿಯಾಗಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ದುಡಿಯುವ ಜನರ ಬದುಕನ್ನು ಛಿದ್ರಗೊಳಿಸುವ, ಕಾರ್ಪೊರೇಟ್ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಶ್ರಮ ವಿರೋಧಿ ಕಾಯ್ದೆಗಳನ್ನು ತರಲು ಹೊರಟಿವೆ. ದುಡಿಯುವ ಜನರ ಬದುಕಿನ ಮೇಲೆ ನಡೆಯಲಿರುವ ಈ ಪ್ರಹಾರವನ್ನು ವಿರೋಧಿಸಿ ಜೆಸಿಟಿಯು ಮತ್ತು ಎಸ್ಕೆಎಂ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದ್ದು, ದೇಶವ್ಯಾಪಿಯಾಗಿ ರೈತರು ಮತ್ತು ಕಾರ್ಮಿಕರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ತಂದಿದ್ದ ನೀತಿಗಳನ್ನೇ ಮುಂದುವರೆಸುತ್ತಿರುವುದರಿಂದ ಮತ್ತು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕೊಟ್ಟ ಮಾತುಗಳನ್ನೆಲ್ಲಾ ಮರೆತಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧವೂ ರೈತರು, ಕಾರ್ಮಿಕರು ಸೇರಿ ತೀವ್ರ ಸ್ವರೂಪದ ಪ್ರತಿಭಟನೆ ದಾಖಲಿಸಬೇಕಿದೆ. ಈ ಕಾರ್ಮಿಕ ನೀತಿಗಳು ಭಾರತದ ಕಾರ್ಮಿಕರನ್ನು ಯಾವುದೇ ಭದ್ರತೆ ಇಲ್ಲದೆ, ಮಾಲಿಕರಿಗೆ ಯಾವುದೇ ಹೊಣೆಗಾರಿಕೆ ಇಲ್ಲದೆ, ಅಗ್ಗದ ಕೂಲಿ ದರದಲ್ಲಿ ಅತಿ ಹೆಚ್ಚು ಗಂಟೆ ದುಡಿಯುವ, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಕೆಲಸ ಮಾಡುವ ನವ ಗುಲಾಮರನ್ನಾಗಿ ಮಾಡಲಾಗುತ್ತಿದೆ.
ಮನಬಂದಂತೆ ಕಾರ್ಮಿಕರನ್ನು ದುಡಿಸಿಕೊಳ್ಳುವ, ಬೇಡವಾದರೆ ಬಿಸಾಕುವ ಸಂಪೂರ್ಣ ಸ್ವಾತಂತ್ರ್ಯ ಮಾಲಿಕರಿಗೆ ನೀಡುವುದು. ಅಗ್ಗದ ದರದಲ್ಲಿ ಭೂಮಿ, ಉಚಿತ ಕರೆಂಟ್, ನೀರು ಒದಗಿಸಿ, ತೆರಿಗೆಯಲ್ಲಿ ಸಬ್ಸಿಡಿ ನೀಡಿವುದು, ಬ್ಯಾಂಕ್ ಸಾಲ ಮನ್ನಾ ಮಾಡಿ, ಹೊಸ ಕಂಪನಿಗಳಿಗೆ ರೂ 20 ಲಕ್ಷ ಕೋಟಿಯವರೆಗೂ ಉತ್ತೇಜನ ನಿಧಿ ಕೊಟ್ಟು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರದ ಒಡೆತನದಲ್ಲಿದ್ದ ರಸ್ತೆ, ವಿದ್ಯುಚ್ಛಕ್ತಿ, ಪೆಟ್ರೋಲ್, ಡೀಸೆಲ್, ಗ್ಯಾಸ್, ಮಿಲಿಟರಿ ಉತ್ಪಾದನೆ, ವಿಮಾನ, ರೈಲ್ವೆ, ಸ್ಟೀಲ್-ಉಕ್ಕು–ಕಲ್ಲಿದ್ದಲನ್ನು ತಯಾರಿಸುವ ಕೈಗಾರಿಕೆಗಳು, ಬ್ಯಾಂಕ್ – ಎಲ್ ಐ ಸಿ, ಎಲ್ಲವುಗಳನ್ನೂ ಖಾಸಗೀಕರಣ ಮಾಡಿ ಖಾಸಗಿ ಖದೀಮರಿಗೆ ಅರ್ಪಿಸಲಾಗುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ವಂ ಕಾರ್ಪೋರೇಟ್ ಮಯಂ. ಕಾರ್ಮಿಕರ ಪಾಲಿಗೆ ಸರ್ವಂ ಸರ್ವನಾಶಂ. ಸಾರ್ವಜನಿಕರ ಮತ್ತು ದೇಶದ ಸಕಲ ಸಂಪತ್ತು ಅದಾನಿ–ಅಂಬಾನಿ ಸ್ವಾಹಂ ಸ್ವಾಹಂವಾಗುತ್ತಿದೆ. ಮಿಲಿಯಂತರ ಜನ ಹಸಿವು, ಬಡತನ, ನಿರುದ್ಯೋಗ, ಶಿಕ್ಷಣ, ಇನ್ನಿತರ ಸಮಸ್ಯೆಗಳಿಂದ ಜರ್ಜರಿತರಾಗಿದ್ದಾರೆ. ಇದು ಸರ್ಕಾರಗಳ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶರಣು ಗಡ್ಡಿ, ಎಐಟಿಯುಸಿಯ ಕಾಸಿಂ ಸರ್ದಾರ್, ಬಸವರಾಜ್ ಶೀಲವಂತರ್, ಎಸ್.ಎ.ಗಫಾರ್, ಚನ್ನಬಸಪ್ಪ ಅಪ್ಪಣ್ಣವರ್, ಆಶಾ ಸಂಘದ ಕೊಪ್ಪಳ ತಾಲೂಕು ಅಧ್ಯಕ್ಷೆ ಸುನೀತಾ ಆಚಾರ, ಗಾಳೆಪ್ಪ ಮುಂಗೋಲಿ, ಮುದುಕಪ್ಪ, ಈರಪ್ಪ, ವೇಕಟೇಶ್ ರೆಡ್ಡಿ, ಅಂಬರೀಶ್ ಗಾಣಿಗ, ರತ್ನ ಕೇಸ್ಲಾಪುರ್, ರಂಗಮ್ಮ, ತಾಜುದ್ದೀನ್ ಬೆಳಗಟ್ಟಿ, ಮಂಜುನಾಥ್, ಶಾಂತಮ್ಮ ಎಲಿಗಾರ್, ಪ್ರದೀಪ್ ಹಾಗೂ ಇತರರಿದ್ದರು.