ಬೀದರ್ ಜಿಲ್ಲಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಬುಧವಾರ (ಮೇ 21) ರಂದು ಜಿಲ್ಲೆಯ ಹಲವೆಡೆ ಬೆಳಿಗ್ಗೆಯಿಂದಲೇ ಭಾರಿ ಮಳೆಯಾಗಿದೆ.
ಬಸವಕಲ್ಯಾಣ, ಹುಲಸೂರ ಸೇರಿದಂತೆ ತಾಲ್ಲೂಕಿನ ಹಲವೆಡೆ ಸಂಜೆ 5 ಗಂಟೆಗೆ ಆರಂಭಗೊಂಡ ಮಳೆ ರಾತ್ರಿ 11 ಗಂಟೆವರೆಗೂ ಸುರಿಯಿತು. ಅಬ್ಬರ ಮಳೆಗೆ ಬಸವಕಲ್ಯಾಣ ನಗರದ ಹಲವು ರಸ್ತೆ, ಬಡಾವಣೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿತು.
ರಸ್ತೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನ ಸವಾರರು ರಸ್ತೆ ಕಾಣದೇ ಕೆಲ ಹೊತ್ತು ಪರದಾಡಿದರು. ಅಲ್ಲದೆ, ಕೆಲ ತಗ್ಗು ಪ್ರದೇಶದ ಅಂಗಡಿಗಳಿಗೂ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಸವಕಲ್ಯಾಣ ನಗರದಿಂದ ಮೀರಖಲ್ ಗ್ರಾಮದ ಮಧ್ಯೆ ಗೌರ್ ಗ್ರಾಮದ ಹತ್ತಿರ ಮಳೆ ನೀರಿನ ರಭಸದಿಂದ ರಸ್ತೆ ಜೊತೆಗೆ ಬ್ರಿಡ್ಜ್ ಕೊಚ್ಚಿಕೊಂಡು ಹೋಗಿದ್ದು ಸಂಚಾರ ಸ್ಥಗಿತಗೊಂಡಿತ್ತು.

ವಿಷಯ ತಿಳಿದು ಗುರುವಾರ ಶಾಸಕ ಶರಣು ಸಲಗರ ಅವರು ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಫೋನ್ ಕರೆ ಮೂಲಕ ಮಾತನಾಡಿ ಸ್ಥಗಿತಗೊಂಡ ರಸ್ತೆ ಸಂಚಾರಕ್ಕೆ ಅನುವುಮಾಡಿಕೊಡಬೇಕು ಶೀಘ್ರದಲ್ಲೇ ತಾತ್ಕಾಲಿಕ ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.