ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕೂಗನೊಳ್ಳಿ ಟೋಲ್ ನಾಕಾ ಬುಧವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಲಾರಿ ಸಂಪೂರ್ಣ ಸುಟ್ಟಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ.ಲಾರಿಯೊಂದು ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೊರಟಿತ್ತು.
ಬುಧವಾರ ರಾತ್ರಿ ಕೂಗನೊಳ್ಳಿ ಟೋಲ್ ನಾಕಾ ಬಳಿ ಲಾರಿ ಟೋಲ್ ದಾಟಲು ಬಂದು ನಿಂತಿತು. ಲಾರಿಯನ್ನು ಚಾಲಕ ತುಸು ಹಿಂದಕ್ಕೆ ಚಲಿಸುವಾಗ ಆಯಿಲ್ ಟ್ಯಾಂಕ್ ರಸ್ತೆಯ ವಿಭಜಕಕ್ಕೆ ಗುದಿತು. ಅದರಿಂದ ಹೊತಿಕೊಂಡ ಬೆಂಕಿ ಕಿಡಿಗಳು ಪಕ್ಕದಲ್ಲಿಯೇ ಇದ್ದ ಲಾರಿಯ ಬ್ಯಾಟರಿಗೆ ತಾಗಿದವು. ಬ್ಯಾಟರಿ ಸ್ಫೋಟಗೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡಿತು.
ನೋಡನೋಡುತ್ತಿದ್ದಂತೆಯೇ ಬೆಂಕಿ ಕೆನ್ನಾಲಿಗೆ ಟೋಲ್ ನಾಕಾದ ಟೋಲ್ ಕಲೆಕ್ಷನ್ ಕೇಂದ್ರಗಳಿಗೂ ವ್ಯಾಪಿಸಿತು. ಟೋಲ್ ನಾಕಾದ ಸಿಬ್ಬಂದಿ ಹಾಗೂ ಲಾರಿಯಲ್ಲಿದ್ದವರು ದೂರ ಓಡಿ ಹೋದರು. ನಾಕಾದ ಎರಡು ಕಲೆಕ್ಷನ್ ಕೇಂದ್ರಗಳು ಸುಟ್ಟುಹೋದವು.ನಂತರ ಬಂದ ನಿಪ್ಪಾಣಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.