ಮನೆಯ ಗೇಟ್ ತೆಗೆಯುವ ವೇಳೆ ವಿದ್ಯುತ್ ತಗುಲಿ ಪ್ರೌಢ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸತ್ಯ ಪ್ರಮೋದ್ ನಗರದಲ್ಲಿ ನಡೆದಿದೆ.
ಪ್ರವೀಣ ಕುಮಾರ ಜಿ. ಕಡಪಟ್ಟಿಮಠ (41) ಮೃತ ದುರ್ದೈವಿ. ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಪ್ರವಾಸ ಮುಗಿಸಿ ವಾಪಸ್ ಮನೆಗೆ ಬಂದ ಸಂದರ್ಭದಲ್ಲಿ ಗೇಟ್ ತಗೆಯಲು ಹೋದಾಗ ವಿದ್ಯುತ್ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಲತಃ ತೇರದಾಳ ಗ್ರಾಮದವರಾದ ಇವರು, ತಾಲೂಕಿನ ಸತ್ತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರವೀಣ ಕುಮಾರ್ ದಂಪತಿ ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.