- ತನ್ನ ಹುಚ್ಚು ವರ್ತನೆಯಿಂದ ಫೇಮಸ್ ಆಗಿದ್ದ ಆರೋಪಿ ಫೆಲಿಕ್ಸ್
- ವ್ಯವಹಾರದಲ್ಲಿ ನಷ್ಟ ಅನುಭವಿಸಲು ಆರಂಭಿಸಿದ ಅರುಣ್ ಕುಮಾರ್
ಬೆಂಗಳೂರಿನ ಹೆಬ್ಬಾಳ ಸಮೀಪದ ಪಂಪಾ ಬಡಾವಣೆಯಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಕೊಲೆ ಸುಪಾರಿ ನೀಡಿದ್ದ ಆರೋಪದ ಮೇಲೆ ಜಿ ನೆಟ್ ಕಂಪನಿ ಮಾಲೀಕ ಅರುಣ್ ಕುಮಾರ್ನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ, ಏರೋನಿಕ್ಸ್ ಇಂಟರ್ನೆಟ್ ಕಂಪನಿ ಸಿಇಒ ವಿನುಕುಮಾರ್ ಮತ್ತು ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಅವರ ಹತ್ಯೆಯಾಗಿತ್ತು. ಘಟನೆಯು ಇಡೀ ರಾಜಧಾನಿ ಬೆಂಗಳೂರನ್ನೇ ಬೆಚ್ಚಿಬಿಳಿಸಿತ್ತು. ಈ ಜೋಡಿ ಕೊಲೆಗೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಮೊದಲಿಗೆ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಬಂಧಿತರಲ್ಲಿ ಪ್ರಮುಖ ಆರೋಪಿ ಶಬರೀಶ್ ಅಲಿಯಾಸ್ ಫೆಲಿಕ್ಸ್ ಹಾಗೂ ಹತ್ಯೆಯಾದ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ – ಇಬ್ಬರೂ ಈ ಹಿಂದೆ ಜಿ ನೆಟ್ ಎಂಬ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಬಳಿಕ ಫಣೀಂದ್ರ ಸುಬ್ರಮಣ್ಯ ಜಿ ನೆಟ್ ಕಂಪನಿಯಲ್ಲಿ ಕೆಲಸ ಬಿಟ್ಟು ಏರೋನಿಕ್ಸ್ ಇಂಟರ್ನೆಟ್ ಕಂಪನಿ ಪ್ರಾರಂಭಿಸಿ ಅಲ್ಲಿ ಎಂಡಿಯಾಗಿದ್ದನು. ಈತನ ಜತೆಗೆ ಫೆಲಿಕ್ಸ್ ಕೂಡ ಏರೋನಿಕ್ಸ್ ಇಂಟರ್ನೆಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಬಳಿಕ ಎಂಡಿ ಈತನನ್ನು ಕೆಲಸದಿಂದ ತೆಗೆದಿದ್ದರು. ಕೆಲಸದ ವೇಳೆ ಫಣೀಂದ್ರ ಫೆಲಿಕ್ಸ್ಗೆ ಅವಮಾನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬಳಿಕ ಫೆಲಿಕ್ಸ್ ಏರೋನಿಕ್ಸ್ ಇಂಟರ್ನೆಟ್ ಬಿಟ್ಟು ಹೊಸದಾಗಿ ತನ್ನದೇ ಕಂಪನಿ ಆರಂಭಿಸಿದ್ದ, ಇದಕ್ಕೆ ಫಣೀಂದ್ರ ವ್ಯವಹಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆ, ಫೆಲಿಕ್ಸ್ ತನ್ನ ಮೂವರು ಸಹಚರರ ಜೊತೆಗೆ ಸೇರಿ ಮಂಗಳವಾರ ಸಂಜೆ ಜೋಡಿ ಹತ್ಯೆಮಾಡಿ ಪರಾರಿಯಾಗಿದ್ದರು. ಈ ಮೂವರು ಆರೋಪಿಗಳನ್ನು ಪೊಲೀಸರು ತುಮಕೂರಿನ ಕುಣಿಗಲ್ ಬಳಿ ಬಂಧಿಸಿದ್ದರು.
ಯುವತಿಯ ವಿಚಾರದಿಂದ ಹತ್ಯೆ?
ಘಟನೆ ನಡೆದ ಮರುದಿನ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಫೆಲಿಕ್ಸ್ ಹಾಗೂ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಇಬ್ಬರು ಬನ್ನೇರುಘಟ್ಟದಲ್ಲಿದ್ದ ಜಿ ನೆಟ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಆರೋಪಿ ಫೆಲಿಕ್ಸ್ ಜತೆಗೆ ಯುವತಿಯೊಬ್ಬಳು ಸಲುಗೆಯಿಂದಿದ್ದಳು. ಅದೇ ಹುಡುಗಿ ಎಂಡಿ ಫಣಿಂದ್ರ ಜತೆಗೂ ಸಲುಗೆಯಿಂದ ಇದ್ದಳು. ಹೀಗೆ ಇರುವುದನ್ನು ಸಹಿಸದ ಫೆಲಿಕ್ಸ್ ಇದೇ ವಿಚಾರವಾಗಿ ಎಂಡಿ ಫಣಿಂದ್ರನ ಜತೆಗೆ ಜಗಳವಾಡುತ್ತಿದ್ದನು. ನನ್ನ ಹುಡುಗಿ ವಿಚಾರಕ್ಕೆ ಬಂದರೆ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಇದೇ ವೇಳೆ, ಎಲ್ಲ ಆಯಾಮಗಳಲ್ಲಿಯೂ ತನಿಖೆ ಆರಂಭಿಸಿದ ಅಮೃತಹಳ್ಳಿ ಪೊಲೀಸರು ಜಿ ನೆಟ್ ಕಂಪನಿಯ ಮಾಲೀಕ ಅರುಣ್ ಕುಮಾರ ಈ ಜೋಡಿ ಕೊಲೆಯಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಜಿ ನೆಟ್ ಮಾಲೀಕ ಅರುಣ್ ಕುಮಾರ್ ವಿರುದ್ಧ ಕೊಲೆ ಸುಪಾರಿ ಆರೋಪ
ಜಿ ನೆಟ್ ಕಂಪನಿಯ ಮಾಲೀಕ ಅರುಣ್ ಕುಮಾರ್ ಎಎಪಿ ಮುಖಂಡನಾಗಿ ಗುರುತಿಸಿಕೊಂಡಿದ್ದಾರೆ. ಏರೋನಿಕ್ಸ್ ಇಂಟರ್ನೆಟ್ ಕಂಪನಿಯಲ್ಲಿ ಎಂಡಿಯಾಗಿದ್ದ ಫಣೀಂದ್ರ ಈ ಹಿಂದೆ ಜಿ ನೆಟ್ ಕಂಪನಿಯಲ್ಲಿ ಎಚ್ ಆರ್ ಆಗಿ ಕೆಲಸ ಮಾಡುತ್ತಿದ್ದರು. ವಿನುಕುಮಾರ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಇಬ್ಬರು ಎಂಟು ತಿಂಗಳ ಹಿಂದೆ ಕೆಲಸ ತೊರೆದು ಅಮೃತಹಳ್ಳಿಯಲ್ಲಿ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಆರಂಭಿಸಿದ್ದರು. ಈ ವೇಳೆ, ಜಿ ನೆಟ್ನಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಉದ್ಯೋಗಿಗಳು ಕೆಲಸ ಬಿಟ್ಟು, ಏರೋನಿಕ್ಸ್ ಕಂಪನಿಗೆ ಸೇರಿಕೊಂಡಿದ್ದರು. ಇದರಿಂದ ವ್ಯವಹಾರದಲ್ಲಿ ನಷ್ಟ ಅನುಭವಿಸಲು ಆರಂಭಿಸಿದ ಅರುಣ್ ಕುಮಾರ್ ಫಣೀಂದ್ರ ಹತ್ಯೆ ಮಾಡಲು ಶಬರೀಶ್ ಜತೆಗೆ ಸಂಚು ರೂಪಿಸಿದ್ದನು.
ಪೊಲೀಸರು ಅನುಮಾನದ ಮೇಲೆ ಅರುಣ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ನಡೆಸುವ ವೇಳೆ ನಿಜಾಂಶ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಜೋಡಿ ಹತ್ಯೆ | ಯುವತಿಗೋಸ್ಕರ ನಡೆಯಿತಾ? ಜಿ ನೆಟ್ ಅರುಣ್ ಪಾತ್ರವಿದೆಯಾ?
ಟಿಕ್ಟಾಕ್ ಸ್ಟಾರ್ ಆಗಿದ್ದ ಆರೋಪಿ ಫೆಲಿಕ್ಸ್
ಶಿವಮೊಗ್ಗ ನಿವಾಸಿಯಾಗಿದ್ದ ಶಬರೀಶ್ ಬೆಂಗಳೂರಿಗೆ ಬಂದು ಫೆಲಿಕ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದನು. ಇತನು ರ್ಯಾಪರ್ ಎಂದು ಟಿಕ್ಟಾಕ್ನಲ್ಲಿ ರಿಲ್ಸ್ ಮಾಡುತ್ತಿದ್ದನು. ಇತನ ಹುಚ್ಚು ವರ್ತನೆಯಿಂದ ಫೇಮಸ್ ಆಗಿದ್ದನು.
ಇತನು ಈ ಹಿಂದೆ ಜಿ ನೆಟ್ನಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಕೆಲಸ ಬಿಟ್ಟು ಮುಂಬೈ ಮತ್ತು ಕಾಶಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಫೆಲಿಕ್ಸ್ ಸ್ಮಶಾನದಲ್ಲಿ ನೆಲೆಸಿದ್ದನು. ಗಾಂಜಾ ಸೇವನೆ ಮಾಡುತ್ತಿದ್ದನು ಎನ್ನಲಾಗಿದೆ.
ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮೂವರನ್ನು ಬಂಧಿಸಿ ತನಿಖೆ ಆರಂಭಿಸಿದ ಅಮೃತಹಳ್ಳಿ ಪೊಲೀಸರು ಇದೀಗ ಜೆ ನೆಟ್ ಕಂಪನಿ ಮಾಲೀಕ ಅರುಣ್ ಕುಮಾರ್ನನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಈ ಘಟನೆ ನಮ್ಮ ಬೆಂಗಳೂರಿನ ಜನತೆಗೆ ತುಂಬಾ ಆಘಾತಕಾರಿಯಾಗಿದೆ 😢. ಒಂದು ಕಡೆ ಟೆಕ್ನಾಲಜಿಯ ಪ್ರಗತಿ, ಇನ್ನೊಂದು ಕಡೆ ಇಂಥ ಘೋರ ಅಪರಾಧಗಳು. ನಮ್ಮ ಸಮಾಜದಲ್ಲಿ ಹಿಂಸೆ ಮತ್ತು ಅಸೂಯೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ರೀತಿ ಬದಲಾಗಬೇಕು. ಪ್ರೀತಿ, ಸಹಾನುಭೂತಿ, ಮತ್ತು ನ್ಯಾಯದ ಮೌಲ್ಯಗಳನ್ನು ಮರೆಯದೆ ಇರೋಣ. 🙏🕊️ #ಬೆಂಗಳೂರು #ಜೋಡಿಕೊಲೆ #ಸಮಾಜದಲ್ಲಿಬದಲಾವಣೆ