ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಗೊಳಿಸುವುದು ನಮ್ಮ ಮೊದಲ ಆದ್ಯತೆ. ಇದಕ್ಕಾಗಿ ಕಾನೂನಿನ ಕೈಗಳಿಗೆ ಇನ್ನಷ್ಟು ಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿ, ಅರಾಜಕತೆ ತಾಂಡವವಾಡುತ್ತಿದೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ, “ದುಡ್ಡಿನ ವ್ಯವಹಾರದ ಕಾರಣಕ್ಕಾಗಿ ನಡೆದಿದೆ ಎನ್ನಲಾದ ಜೈನಮುನಿ ಕಾಮಕುಮಾರ ನಂದಿ ಮಹರಾಜರ ಹತ್ಯೆಯ ಆರೋಪಿಗಳನ್ನು ಕೊಲೆ ನಡೆದ 6 ಗಂಟೆಗಳ ಒಳಗೆ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಅದೇ ರೀತಿ ವೈಯಕ್ತಿಕ ದ್ವೇಷದ ಕಾರಣಕ್ಕಾಗಿ ತಿ ನರಸೀಪುರದ ವೇಣುಗೋಪಾಲ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ. ಬೆಂಗಳೂರಿನ ಏರೋನಿಕ್ಸ್ ಸಂಸ್ಥೆಯ ಎಂ.ಡಿ ಮತ್ತು ಸಿ.ಇ.ಒ ಹತ್ಯೆಯ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಗಳೊಳಗೆ ಬಂಧಿಸಲಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಈ ಎಲ್ಲ ಪ್ರಕರಣಗಳನ್ನು ಕೂಲಂಕಷವಾಗಿ ತನಿಖೆ ನಡೆಸಿ, ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಆಗುವಂತೆ ಕ್ರಮವಹಿಸಲು ರಾಜ್ಯದ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಈ ಬಗ್ಗೆ ಯಾವ ಸಂದೇಹವೂ ಬೇಡ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿ, ಅರಾಜಕತೆ ತಾಂಡವವಾಡುತ್ತಿದೆ: ಬಿಜೆಪಿ ವಾಗ್ದಾಳಿ
“ಹತ್ಯೆ, ಅಪಹರಣ ಮುಂತಾದ ಅಪರಾಧ ಕೃತ್ಯಗಳು ದುರದೃಷ್ಟಕರ. ಆದರೆ, ಒಂದು ಸರ್ಕಾರವಾಗಿ ಇಂಥ ಕಾನೂನು ವಿರೋಧಿ ಕೃತ್ಯಗಳು ನಡೆಯದಂತೆ ತಡೆಯಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ” ಎಂದು ಭರವಸೆ ನೀಡಿದ್ದಾರೆ.