- ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿರುವ ಚಂದ್ರಯಾನ 3
- ಚಂದ್ರಯಾನ ಮೂಲಕ ಭಾರತಕ್ಕೆ ಈ ಸಾಧನೆ ಮಾಡಿದ 4ನೇ ರಾಷ್ಟ್ರ ಸ್ಥಾನ
ಚಂದ್ರಯಾನ 3 ನೌಕೆಯ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ವಿಜ್ಞಾನಿಗಳ ತಂಡ ಆಂಧ್ರಪ್ರದೇಶದ ತಿರುಮಲದ ತಿರುಪತಿ ದೇವಸ್ಥಾನಕ್ಕೆ ಗುರುವಾರ (ಜುಲೈ 13) ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.
ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷ ಅಧಿಕಾರಿಗಳಿದ್ದ ತಂಡ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಚಂದ್ರಯಾನ 3 ನೌಕೆಯ ಮಿನಿಯೇಚರ್ ಮಾಡೆಲ್ ಜೊತೆ ವಿಜ್ಞಾನಿಗಳ ತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಯೋಜನೆ ಯಶಸ್ವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಜ್ಞಾನಿಗಳ ಭೇಟಿಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಹಿತಿ ನೀಡಿದೆ.
“ಹೌದು, ಇಸ್ರೊ ತಂಡ ತಿರುಮಲಕ್ಕೆ ಭೇಟಿ ನೀಡಿದೆ. ಆದರೆ ನಮ್ಮ ಪ್ರಚಾರ ವಿಭಾಗ ಅದನ್ನು ವರದಿ ಮಾಡಿಲ್ಲ. ಇತರ ಉನ್ನತ ಅಧಿಕಾರಿಗಳು ದೇಗುಲಕ್ಕೆ ಭೇಟಿ ನೀಡುತ್ತಾರೆ. ಆದರೆ ಇಸ್ರೊ ಅಧಿಕಾರಿಗಳು ಸಾಮಾನ್ಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದು ಕಡಿಮೆಯಾಗಿದ್ದು ಈ ಬಾರಿ ಚಂದ್ರಯಾನ 3 ಉಡಾವಣೆ ಹಿನ್ನೆಲೆ ಭೇಟಿ ನೀಡಿರುವುದು ವಿಶೇಷ” ಎಂದು ಟಿಟಿಡಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಚಂದ್ರಯಾನ 3ರ ನೌಕೆಯು ಶುಕ್ರವಾರ ಮಧ್ಯಾಹ್ನ 2.35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು ಆಗಸ್ಟ್ 23ರ ಸುಮಾರಿಗೆ ಚಂದ್ರನ ಕಕ್ಷೆಯನ್ನು ತಲುಪಲಿದೆ. ಬಳಿಕ 15 ದಿನಗಳಲ್ಲಿ ನೌಕೆ ಚಂದ್ರನ ಮೇಲೆ ಇಳಿಯಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಚಂದ್ರಯಾನ 3 ನೌಕೆಯ ಉಡಾವಣೆಗೆ ಬುಧವಾರ ಸಿದ್ಧತಾ ಪರಿಶೀಲನೆಯನ್ನು ಇಸ್ರೊ ಪೂರ್ಣಗೊಳಿಸಿದ್ದು ಉಡ್ಡಯನಕ್ಕೆ ಅನುಮತಿ ನೀಡಿದೆ. ಈ ಉಡಾವಣೆಯನ್ನು ಸಂಸ್ಥೆಯ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ವೀಕ್ಷಿಸಬಹುದು ಎಂದು ಇಸ್ರೊ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಪುರುಷತ್ವ ಪರೀಕ್ಷೆಗೆ ರಕ್ತದ ಮಾದರಿ ಬಳಸಿ, ಸ್ತ್ರೀಯರಿಗೆ ಎರಡು ಬೆರಳ ಪರೀಕ್ಷೆ ನಿಲ್ಲಿಸಿ: ಮದ್ರಾಸ್ ಹೈಕೋರ್ಟ್
ಈ ಉಡಾವಣೆಯು ಚಂದ್ರಯಾನ 2 ಯೋಜನೆಯ ಮುಂದುವರೆದ ಭಾಗವಾದ ಹಿನ್ನೆಲೆ ಈ ಯೋಜನೆಯ ಆರ್ಬಿಟರನ್ನು ಕೈಬಿಡಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೊ ಸಿದ್ಧತೆ ನಡೆಸಿದೆ. ಈ ಬಾರಿ ಸಕಲ ಪೂರ್ವ ತಯಾರಿಯೊಂದಿಗೆ ನೌಕೆಯನ್ನು ಸಿದ್ಧಪಡಿಸಲಾಗಿದೆ.
ಚಂದ್ರಯಾನ 3ರ ಉಡಾವಣೆ ಮೂಲಕ ಭಾರತ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆಯಲಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ತಮ್ಮ ಉಪಗ್ರಹವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿವೆ.