ಕೆಚ್ಚು ತೋರುವ ಸ್ಫೂರ್ತಿಯ ಕೊರತೆಯಿಂದಾಗಿ 26 ಮಂದಿ ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ ಎಂದು ಹರಿಯಾಣದ ರಾಜ್ಯಸಭಾ ಸದಸ್ಯ ರಾಮಚಂದ್ರ ಜಾಂಗ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಗ್ನಿವೀರ ಯೋಜನೆಯಡಿ ಸೂಕ್ತ ತರಬೇತಿ ಪಡೆದಿದ್ದರೆ, ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
“ತಮ್ಮ ಗಂಡಂದಿರನ್ನು ದಾಳಿಯಲ್ಲಿ ಕಳೆದುಕೊಂಡ ಮಹಿಳೆಯರು ಸಾಹಸ ಮನೋಭಾವವನ್ನು ಪ್ರದರ್ಶಿಸಲಿಲ್ಲ. ಇದರಿಂದಾಗಿ ಗುಂಡಿನ ದಾಳಿಗೆ 26 ಮಂದಿ ಬಲಿಯಾದರು ಎಂದು ಬಿಜೆಪಿ ಸರ್ಕಾರದ ಅಹಲ್ಯಾಬಾಯಿ ಹೋಳ್ಕರ್ ತ್ರಿಶಮಾನ ಸ್ಮಾರಕ ಅಭಿಯಾನ ಸಮಾರಂಭದಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ಪ್ರವಾಸಿಗರು ದೈನ್ಯತೆಯಿಂದ ಇದ್ದ ಕಾರಣ ಹತ್ಯೆಗೀಡಾದರು. ಪ್ರಧಾನಿಯವರ ಯೋಜನೆಯಡಿ ತರಬೇತಿ ಪಡೆದು ದಾಳಿಕೋರರ ಜತೆ ಸಂಘರ್ಷಕ್ಕೆ ಇಳಿದಿದ್ದರೆ, ಅಷ್ಟು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿರಲಿಲ್ಲ. ಪ್ರವಾಸಿಗರು ಮೂಲ ಸಲಕರಣೆಗಳಾದ ಬಡಿಗೆಯನ್ನು ಹೊಂದಿ, ದಾಳಿಕೋರರ ವಿರುದ್ಧ ಹೋರಾಟ ನಡೆಸಿದ್ದರೆ,ಸಾವಿನ ಸಂಖ್ಯೆ ಐದರಿಂದ ಆರಷ್ಟೇ ಆಗುತ್ತಿತ್ತು. ಮೂವರು ಉಗ್ರರನ್ನು ಸಾಯಿಸಬಹುದಿತ್ತು ಎಂದರು.
ಜಾಂಗ್ರ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದ್ದು, ತನ್ನ ಪತಿಯನ್ನು ದಾಳಿಯಲ್ಲಿ ಕಳೆದುಕೊಂಡ ಮಹಿಳೆಗೆ ಮಾಡಿದ ಘೋರ ಅವಮಾನ ಇದಾಗಿದೆ ಎಂದು ಆರೋಪಿಸಿದೆ.