ಮಂಗಳೂರಿನ ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆ ತನ್ನ 32ನೇ ವಾರ್ಷಿಕ ಘಟಿಕೋತ್ಸವದ ಸಂಭ್ರಮದಲ್ಲಿದೆ.
ಈ ಘಟಿಕೋತ್ಸವದಲ್ಲಿ 766 ಪದವಿ ವಿದ್ಯಾರ್ಥಿಗಳು, 440 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು 161 ಪಿಎಚ್ಡಿ ಪಡೆದವರು ಸೇರಿದಂತೆ 1,367 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. 616 ವಿದ್ಯಾರ್ಥಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿ, ತಮ್ಮ ಶೈಕಣಿಕ ಮತ್ತು ವೃತ್ತಿ ಜೀವನದ ಮೈಲಿಗಲ್ಲನ್ನು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯ (ಎನ್ಬಿಇಎಂಎಸ್) ಅಧ್ಯಕ್ಷ ಡಾ. ಅಭಿಜಾತ್ ಸೇಠ್ ಮಾತನಾಡಿ, “ಹಿಂದೆಂದೂ ಕಂಡಿರದಂತಹ ತಾಂತ್ರಿಕ ಪ್ರಗತಿ, ಪ್ರಾಕೃತಿಕ ಸವಾಲುಗಳು ಮತ್ತು ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ಸಮಾಜ ಈಗ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕೇವಲ ವಿದ್ಯಾವಂತರಷ್ಟೇ ಅಲ್ಲದೆ, ನೈತಿಕತೆಯನ್ನು ಬಲವಾಗಿ ಎತ್ತಿಹಿಡಿಯುವವರ ಅಗತ್ಯವಿದೆ. ಅರ್ಥಪೂರ್ಣ ಪ್ರಗತಿಗೆ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯ ಸಂಯೋಜನೆ ಕಾರಣ. ಪರಿಣಾಮಕಾರಿ ಸಂವಹನ ಮತ್ತು ಕ್ಲಿನಿಕಲ್ ಸಂಶೋಧನೆಯಲ್ಲಿ ಬಲವಾದ ಅಡಿಪಾಯ ಹೊಂದುವುದು ಭವಿಷ್ಯದ ಆರೋಗ್ಯ ವೃತ್ತಿಪರರಿಗೆ ಅಗತ್ಯವಾದ ಕೌಶಲ್ಯಗಳಾಗಿವೆ ಎನ್ನುವುದನ್ನು ನಾವು ನೀತಿ ನಿರೂಪಣೆಯ ಉನ್ನತ ಮಟ್ಟದಲ್ಲಿ ಗುರುತಿಸುತ್ತೇವೆ. ನಮ್ಮ ಪದವೀಧರರು ಆಧುನಿಕ ಆರೋಗ್ಯ ಸಂಕೀರ್ಣ ಬೇಡಿಕೆಗಳನ್ನು ಪೂರೈಸಲು ಸಜ್ಜಾಗಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಶಿಸ್ತನ್ನು ವೈದ್ಯಕೀಯ ತರಬೇತಿಯ ಆರಂಭಿಕ ಹಂತಗಳಲ್ಲಿ ಬೆಳೆಸಬೇಕು” ಎಂದರು.

“ಸಂಸ್ಥೆಗಳು, ದೂರದೃಷ್ಟಿ ಮತ್ತು ಸಮಗ್ರತೆಯೊಂದಿಗೆ ಸಂಕೀರ್ಣತೆಯನ್ನು ನಿಭಾಯಿಸಬಲ್ಲ ನಾಯಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೀವು ಇಲ್ಲಿ ಪಡೆದ ಶಿಕ್ಷಣವು ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ನಿಮ್ಮನ್ನು ಸಜ್ಜುಗೊಳಿಸಿದೆ. ನಿಮ್ಮ ಪ್ರಯಾಣವು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಮಾಹೆ ಪ್ರತಿಪಾದಿಸುವ ಶ್ರೇಷ್ಠತೆ, ನಾವೀನ್ಯತೆ ಮತ್ತು ಸೇವೆಯ ಪರಂಪರೆಯನ್ನು ನೀವೆಲ್ಲ ಮುಂದುವರಿಸಿ” ಎಂದು ಕಿವಿಮಾತು ಹೇಳಿದರು.
ವಿವಿಯ ಸಹ ಕುಲಪತಿ ಡಾ. ಎಚ್ ಎಸ್ ಬಲ್ಲಾಳ್ ಅವರು ಮಾತನಾಡಿ, “ವಿವಿಯಲ್ಲಿ ನಾವು ವಿದ್ಯಾರ್ಥಿಗಳನ್ನು ಕೇವಲ ವೃತ್ತಿಜೀವನಕ್ಕೆ ಮಾತ್ರ ಸಿದ್ಧಪಡಿಸುವುದಿಲ್ಲ. ಭವಿಷ್ಯವನ್ನು ರೂಪಿಸಲೂ ಅವರನ್ನು ಸಜ್ಜುಗೊಳಿಸುತ್ತೇವೆ. ನಾಳಿನ ಸವಾಲುಗಳನ್ನು ಸ್ವೀಕರಿಸಲು ಈಗ ಸಿದ್ಧರಾಗಿರುವ ಈ ಯುವ ಮನಸ್ಸುಗಳನ್ನು ಪೋಷಿಸಲು ನಮಗೆ ತುಂಬಾ ಹೆಮ್ಮೆಯಿದೆ. ಈ ಪದವೀಧರರು ಮುಂದಿನ ಪೀಳಿಗೆಯ ಸಂಶೋಧಕರು, ವೈದ್ಯರು, ಚಿಂತಕರು ಮತ್ತು ಬದಲಾವಣೆ ಹರಿಕಾರರನ್ನು ಪ್ರತಿನಿಧಿಸುತ್ತಾರೆ. ಅವರ ಸಾಧನೆಗಳು ಮಾಹೆ ಪ್ರತಿನಿಧಿಸುವ ಮೌಲ್ಯಗಳು ಮತ್ತು ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ” ಎಂದರು.

ಮಾಹೆ ಉಪ ಕುಲಪತಿ ಎಂ ಡಿ ವೆಂಕಟೇಶ್ ವಿಎಸ್ಎಂ ಮಾತನಾಡಿ, “ಮಾಹೆ ಯಾವಾಗಲೂ ಸಂಪ್ರದಾಯ ಮತ್ತು ಪರಿವರ್ತನೆಯ ಮಧ್ಯದಲ್ಲಿರುತ್ತದೆ. ಅಲ್ಲಿ ಶೈಕ್ಷಣಿಕ ಕಠಿಣತೆ ಜಾಗತಿಕ ಪ್ರಸ್ತುತತೆಯನ್ನು ಸಂಧಿಸುತ್ತದೆ. ನಾವು ವಿದ್ಯಾರ್ಥಿಗಳನ್ನು ವಿಮರ್ಶಾತ್ಮಕವಾಗಿ ಯೋಚಿಸಲು, ವಿವಿಧ ಸಂಸ್ಕೃತಿಗಳೊಂದಿಗೆ ಸಾಮರಸ್ಯ ಮತ್ತು ಅರ್ಥಪೂರ್ಣ ಸಂಶೋಧನೆ ಕೈಗೊಳ್ಳಲು ಸಬಲಗೊಳಿಸುತ್ತೇವೆ. ನಾವು ಪ್ರಭಾವ ಬೀರುವ ವಿಶ್ವವಿದ್ಯಾಲಯವಾಗಿ ಬೆಳೆಯುತ್ತಿರುತ್ತೇವೆ. ಸಮಾಜದ ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವ, ಮುನ್ನಡೆಸುವ ಮತ್ತು ನಿರೀಕ್ಷಿಸುವ ಸಾಮರ್ಥ್ಯದಲ್ಲಿ ನಮ್ಮ ಬಲವಿದೆ. ಈ ಬಾರಿ ಪದವಿ ಪಡೆಯುವ ಬ್ಯಾಚ್ ಆ ಮನೋಭಾವವನ್ನು ಸಾಕಾರಗೊಳಿಸಿದ್ದು, ಬುದ್ದಿವಂತಿಕೆ ಮತ್ತು ಸಹಾನುಭೂತಿ ಎರಡರಿಂದಲೂ ಕೊಡುಗೆ ನೀಡಲು ಸಿದ್ಧವಾಗಿದೆ. ಅವರ ಪ್ರಯಾಣದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮತ್ತು ಅವರು ಸಮಾಜದಲ್ಲಿ ಯಾವ ಛಾಪು ಮೂಡಿಸುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.
ಮಾಹೆ ಮಂಗಳೂರು ಸಹ ಉಪಕುಲಪತಿ ಡಾ. ದಿಲೀಪ್ ಜಿ ನಾಯ್ಕ್ ಮಾತನಾಡಿ, “ಪದವಿಗಳು ಮತ್ತು ಪುರಸ್ಕಾರಗಳ ಹೊರತಾಗಿ, ಈ ದಿನ ವರ್ಷಗಳಲ್ಲಿ ಕಂಡುಕೊಂಡ ಸ್ನೇಹ, ಹಂಚಿಕೊಂಡ ಅನುಭವಗಳು ಮತ್ತು ಅರ್ಥಪೂರ್ಣ ಸಂಪರ್ಕಗಳನ್ನು ಸಹ ಸಂಭ್ರಮಿಸುತ್ತದೆ. ನಮ್ಮ ಪದವೀಧರರು ಹೊಸ ಹಾದಿಗಳನ್ನು ತುಳಿಯುತ್ತಿದ್ದಂತೆ, ಜಾಗತಿಕ ಜಾಲ ಮತ್ತು ಓದಿದ ಶಿಕ್ಷಣ ಸಂಸ್ಥೆಯೊಂದಿಗೆ ಆಳವಾದ ಸಂಬಂಧವನ್ನು ತಮ್ಮ ಜೊತೆಗೊಯ್ಯುತ್ತಾರೆ. ಮಾಹೆ ಕುಟುಂಬದ ಭಾಗವಾಗಿ ಶಾಶ್ವತವಾಗಿ ಉಳಿಯುತ್ತಾರೆ” ಎಂದು ಭಾವುಕ ನುಡಿಗಳನ್ನಾಡಿದರು.

ಇದನ್ನೂ ಓದಿ: ಮಂಗಳೂರು | ಮಳೆ ಅವಾಂತರ; ಮೂರು ಲಕ್ಷ ಮೌಲ್ಯದ ದಿನಸಿ ನೀರುಪಾಲು
ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ.ಶರತ್ ರಾವ್ ಕೆ, ಕುಲಸಚಿವ ಡಾ. ಗಿರಿಧರ್ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ. ವಿನೋದ್ ಥಾಮಸ್, ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ ಉನ್ನಿಕೃಷ್ಣನ್, ಮಂಗಳೂರಿನ ಮಣಿಪಾಲ ದಂತ ವಿಜ್ಞಾನ ಕಾಲೇಜಿನ ಡೀನ್ ಡಾ.ಆಶಿತಾ ಉಪ್ಪೂರ್ ಸೇರಿದಂತೆ ಹಲವರಿದ್ದರು.