ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕು ಎಂದು ಮಾಜಿ ಸಚಿವ ಎಚ್ ಆಂಜನೇಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬಳ್ಳಾರಿ ನಗರದ ರಾಯಲ್ ಪೋರ್ಟ್ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಮನೆ ಬಾಗಿಲಿಗೆ ಬರುವ ಜಾತಿ ಗಣತಿದಾರರಿಗೆ ಆದಿ ಕರ್ನಾಟಕ, ಆದಿ ಜಾಂಬವ ಎಂದು ಬರೆಸದೆ ಪರಿಶಿಷ್ಟ ಜಾತಿ ಮಾದಿಗ” ಎಂದು ಬರೆಸಲು ಮಾದಿಗ ಜನಾಂಗಕ್ಕೆ ಕರೆ ನೀಡಿದರು.
“ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದರೂ ಈಗಾಗಲೇ ಸುಮಾರು 80ರಷ್ಟು ಜಾತಿಗಳು ಅಳಿದು ಹೋಗಿವೆ. ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ ಎಂದು ಬ್ರಿಟಿಷ್ ಕಾಲದ ಮಿಲ್ಲರ್ ನಡೆಸಿದ್ದ ಜಾತಿ ಜನಗಣತಿಯನ್ನು ಈಗಲೂ ಹಾಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆ ಸಂದರ್ಭದಲ್ಲಿ ಬೇಡ ಜಂಗಮ, ಹಲಾಲ್ ಕೋರ, ಚಾಂಡಾಳ ಜಾತಿಗಳು ಸೇರಿದಂತೆ ಅನೇಕ ಜಾತಿಗಳು ಈಗಾಗಲೇ ನಶಿಸಿಹೋಗಿವೆ. ನಶಿಸಿ ಹೋದ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕು” ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
“ಈಗಾಗಲೇ ನಶಿಸಿ ಹೋದ ಬೇಡ ಜಂಗಮ ಜಾತಿಯವರು ವೀರಶೈವ ಜನಾಂಗಕ್ಕೆ ಸೇರಿದ್ದು, ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇವರು ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದಾರೆ ಹಾಗೂ ಮೇಲ್ವರ್ಗದ ಜಾತಿಗೆ ಸೇರಿದವರಾಗಿದ್ದಾರೆ. ಆದರೂ ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣ ಪತ್ರ ಪಡೆದು ನಮ್ಮ ಅನ್ನವನ್ನು ಕಸಿದುಕೊಳ್ಳುತ್ತಿದ್ದಾರೆ. ಬೇಡ ಜಂಗಮ ಎಂದು ಸುಳ್ಳು ಹೇಳಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡವರಿಗೆ ಮತ್ತು ಮಂಜೂರು ಮಾಡಿದವರಿಗೆ ಜೈಲು ಶಿಕ್ಷೆ ನೀಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಚಾಮರಾಜನಗರ | ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಪ್ರಗತಿ ಪರಿಶೀಲನೆ
“ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಒಳ ಮೀಸಲಾತಿಯನ್ನು ನೀಡಬೇಕು. ಆಂಧ್ರ ಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರ ಹೋರಾಟಕ್ಕೆ ಮಣಿದು ಅಲ್ಲಿನ ಸರ್ಕಾರ ಒಳಾಮಿಸಲಾತಿಯನ್ನು ಜಾರಿಗೊಳಿಸಿರುತ್ತದೆ. ಅದೇ ಪ್ರಕಾರ ರಾಜ್ಯದಲ್ಲಿಯೂ ಸಹ ನಾಗಮೋಹನ್ ದಾಸ್ ಅವರ ವರದಿಯ ಅನುಗುಣವಾಗಿ ಆದಷ್ಟು ಬೇಗ ಜೂನ್ ಒಳಗೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು” ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ ಮಾನಯ್ಯ, ಕೆಪಿಸಿಸಿ ಸದಸ್ಯ ಎಲ್ ಮಾರೆಣ್ಣ, ಸಂಗನಕಲ್ಲು ವಿಜಯ್ ಕುಮಾರ್, ಎ ಕೆ ಗಂಗಾಧರ, ಸಿದ್ದೇಶ್, ಎರುಕುಲ ಸ್ವಾಮಿ, ಎನ್ ಡಿ ವೆಂಕಮ್ಮ, ವೆಂಕಟೇಶ್ ಹೆಗಡೆ, ಮಾದಿಗ ಜನಾಂಗದ ಮುಖಂಡರು ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.