ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಿರುವಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಗರದಲ್ಲಿ ಮಳೆಗಾಲದ ವೇಳೆ ಪ್ರತಿ ವಲಯದ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು” ಎಂದು ಸೂಚನೆ ನೀಡಿದರು.
“ಮಳೆಗಾಲದ ವೇಳೆ ರಾಜ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜಕಾಲುವೆ ವಿಭಾಗದಿಂದ ನಿರಂತರವಾಗಿ ಹೂಳು ತೆಗದು ಸ್ವಚ್ಛತೆ ಕಾಪಾಡುವ ಕೆಲಸ ಮಾಡಬೇಕು. ಇನ್ನು ಆರ್.ಸಿ.ಸಿ ತಡೆಗೋಡೆ ನಿರ್ಮಾಣ ಮಾಡದ ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದರು.
“ನಗರದಲ್ಲಿ 210 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಈಗಾಗಲೇ 166 ಕಡೆ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಲಯ ಆಯುಕ್ತರು ಅವುಗಳಿಗೆ ದೃಢೀಕರಣ ಮಾಡಿ ನೀಡಬೇಕು. ಇನ್ನು ಬಾಕಿಯಿರುವ 44 ಸ್ಥಳಗಳಲ್ಲಿ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಳ್ಳುವುದರ ಜೊತೆಗೆ ಶಾಶ್ವರ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು” ಅಧಿಕಾರಿಗಳಿಗೆ ಸೂಚಿಸಿದರು.
ಸ್ಲೂಯಿಸ್ ಗೇಟ್ ಅಳವಡಿಕೆಗೆ ಕ್ರಮ
“ಪಾಲಿಕೆ ಅಧೀನದಲ್ಲಿ 183 ಕೆರೆಗಳು ಬರಲಿದ್ದು, ಈ ಪೈಕಿ 13 ಕೆರೆಗಳಿಗೆ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲಾಗಿದೆ. ಸ್ಲೂಯಿಸ್ ಗೇಟ್ ಅಳವಡಿಸುವ ಕೆರೆಗಳಲ್ಲಿ ನೀರು ತುಂಬಿದ್ದರೆ ನೀರಿನ ಮಟ್ಟವನ್ನು ಕಡಿಮೆ ಮಾಡಿ ಮಳೆ ನೀರು ತುಂಬಲು ಅನುವಾಗುವಂತೆ ಮಾಡಬೇಕು. ಅದಲ್ಲದೆ ಉಳಿದ ಕೆರೆಗಳಿಗೂ ಹಂತ-ಹಂತವಾಗಿ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲು ಹಾಗೂ ಹೂಳು ತೆರವುಗೊಳಿಸದ ಕೆರೆಗಳಲ್ಲಿ ಹೂಳು ತೆರವು ಮಾಡುವ ವಿಚಾರವಾಗಿ ಯೋಜನೆ ರೂಪಿಸಿ” ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ
ಮರಗಳ ತೆರವು
“ನಗರದಲ್ಲಿ ಮಳೆಗಾಲದ ವೇಳೆ ಗಾಳಿ ಸಹಿತ ಬೀಳುವ ಮಳೆಗೆ ಮರಗಳು ಹಾಗೂ ಮರದ ರೆಂಬೆ/ಕೊಂಬೆಗಳು ಧರೆಗುರುಳಿದ ಸಂದರ್ಭದಲ್ಲಿ ಅವುಗಳನ್ನು ಕೂಡಲೇ ತೆರವು ಮಾಡಲು ತಂಡಗಳು ಸದಾ ಸನ್ನದ್ಧವಾಗಿರಬೇಕು. ಇನ್ನು ಒಣಗಿದ/ಅಪಾಯ ಸ್ಥಿತಿಯಲ್ಲಿರುವ ಮರ, ರೆಂಬೆ/ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸುವ ಕೆಲಸ ಮಾಡಿ” ಎಂದರು.
ಲಾರಿ ಪಾಯಿಂಟ್ಗಳನ್ನು ಸ್ಥಳಾಂತರಿಸಿ
“ನಗರದಲ್ಲಿ ರಸ್ತೆ ಬದಿಯಲ್ಲಿ ಆಟೋ ಟಿಪ್ಪರ್ ಗಳಿಂದ ಕಾಂಪ್ಯಾಕ್ಟರ್ ಗಳಿಗೆ ತ್ಯಾಜ್ಯ ವರ್ಗಾವಣೆ (ಟ್ರಾನ್ಸ್ ಫರ್ ಪಾಯಿಂಟ್) ಮಾಡುತ್ತಿದ್ದು, ರಸ್ತೆ ಬದಿ ವರ್ಗಾವಣೆ ಮಾಡುತ್ತಿರುವ ಸ್ಥಳಗಳನ್ನು ಕೂಡಲೇ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಈ ಸಂಬಂಧ ಪಾಲಿಕೆಯ ಜಾಗ ಅಥವಾ ಇನ್ನಿತರೆ ಸ್ಥಳಗಳನ್ನು ಗುರುತಿಸಿ, ರಸ್ತೆ ಬದಿ ವರ್ಗಾವಣೆ ಮಾದಡಂತೆ ಕ್ರಮವಹಿಸಿ” ಎಂದು ಸೂಚಿಸಿದರು.
ಪಾದಚಾರಿ ಮಾರ್ಗಗಳಿಗೆ ಆದ್ಯತೆ ನೀಡಿ
ನಗರದಲ್ಲಿ ಸುಗಮ ಪಾದಚಾರಿ ಮಾರ್ಗಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪಾದಚಾರಿಗಳಲ್ಲಿ ಇರುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ಪರಿಹಸಿದರೆ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ. ಆದ್ದರಿಂದ ಆಯಾ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಿಗೆ ಹೆಚ್ಚು ಗಮನ ನೀಡಿ ದುರಸ್ತಿ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಸಮೀಕ್ಷೆ
ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ, ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳ ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಬೇಕು. ತ್ವರಿತವಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಕರೀಗೌಡ, ಸ್ನೇಹಲ್, ರಮೇಶ್, ವಲಯ ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.