ಅಹಮದಾಬಾದ್ನಲ್ಲಿ ಜೂನ್ 3 ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಕ್ಕೆ ಭಾರತೀಯ ಸಶಸ್ತ್ರ ಪಡೆಗಳ ಮೂವರೂ ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.
ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿ ಕೈಗೊಂಡ ಭಾರತೀಯ ಸೇನಾಪಡೆಗಳಿಗೆ ಗೌರವ ಸಲ್ಲಿಸುವ ಸಮಾರಂಭವನ್ನು ಫೈನಲ್ ಪಂದ್ಯದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಗೌರವ ಸೂಚಕವಾಗಿ ನಾವು ಐಪಿಎಲ್ ಸಮಾರೋಪ ಸಮಾರಂಭವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಯೋಧರನ್ನು ಗೌರವಿಸಲು ನಿರ್ಧರಿಸಿದ್ದೇವೆ. ರಾಷ್ಟ್ರ ಮತ್ತು ಅದರ ಸಾರ್ವಭೌಮತ್ವ, ಸಮಗ್ರತೆ ಮತ್ತು ನಮ್ಮ ದೇಶದ ಭದ್ರತೆಗಿಂತ ದೊಡ್ಡದು ಯಾವುದೂ ಇಲ್ಲ” ಎಂದು ಸೈಕಿಯಾ ಹೇಳಿದ್ದಾರೆ.
