ಕೊಲೆಗಳಂತಹ ಗಂಭೀರ ಪ್ರಕರಣಗಳಿಗೆ ವಾಟ್ಸ್ಆ್ಯಪ್ ಚಾಟ್ಗಳು ‘ಸಮರ್ಪಕ ಸಾಕ್ಷ್ಯ’ಗಳಾಗಲು ಸಾಧ್ಯವಿಲ್ಲ. ಅಂತಹ ಚಾಟ್ಗಳನ್ನು ಕೇವಲ ‘ದೃಢೀಕರಣದ ಪುರಾವೆ’ಗಳಾಗಿ ಮಾತ್ರವೇ ಬಳಸಬಹುದು ಎಂದು ದೆಹಲಿ ನ್ಯಾಯಾಲಯ ಹೇಳಿದೆ.
2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿರುವ 9 ಕೊಲೆ ಪ್ರಕರಣಗಳ ಪೈಕಿ 5 ಪ್ರಕರಣಗಳ ವಿಚಾರಣೆಯನ್ನು ಕಾರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ನಡೆಸಿದ್ದಾರೆ. ವಾಟ್ಸ್ಆ್ಯಪ್ ಚಾಟ್ಗಳು ಸಮರ್ಪಕ ಸಾಕ್ಷ್ಯಗಳಲ್ಲ ಎಂದಿದ್ದು, ಆರೋಪಿಗಳನ್ನು ಖಲಾಸೆಗೊಳಿಸಿದ್ದಾರೆ.
ವಿಚಾರಣೆ ನಡೆದ ಐದು ಪ್ರಕರಣಗಳಲ್ಲಿ 12 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಅದಕ್ಕೆ ಪ್ರಧಾನ ಸಾಕ್ಷ್ಯವಾಗಿ ವಾಟ್ಸ್ಆ್ಯಪ್ ಚಾಟ್ಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದಿರಿಸಿತ್ತು ಎಂದು ವರದಿಯಾಗಿದೆ.
ಈ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ‘ಕಟ್ಟರ್ ಹಿಂದು ಏಕ್ತಾ’ ಎಂಬ ವಾಟ್ಸ್ಆ್ಯಪ್ ಗುಂಪಿನ ಚಾಟ್ಗಳನ್ನು ಪುರಾವೆಗಳಾಗಿ ಪರಿಗಣಿಸಿದ್ದಾರೆ. ಇವೇ ಚಾಟ್ಗಳ ಆಧಾರದ ಮೇಲೆ ಚಾರ್ಜ್ಶೀಟ್ಅನ್ನೂ ಸಲ್ಲಿಸಿದ್ದರು.
ಈ ಲೇಖನ ಓದಿದ್ದೀರಾ?: ವಿಚಾರಣೆಯೂ ಇಲ್ಲ – ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ ಉಮರ್ ಖಾಲಿದ್
ದೆಹಲಿ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ, ಆರೋಪಿಗಳಲ್ಲಿ ಒಬ್ಬರಾದ ಲೋಕೇಶ್ ಸೋಲಂಕಿ ಅವರು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ‘ನಿಮ್ಮ ಸಹೋದರ 9 ಗಂಟೆಗೆ 2 ಮುಸ್ಲಿಂ ಪುರುಷರನ್ನು ಕೊಂದಿದ್ದಾನೆ’ ಎಂಬ ಸಂದೇಶವನ್ನು ಹಂಚಿಕೊಂಡಿದ್ದರು. ಆ ಮೆಸೇಜ್ ಆಧರಿಸಿ ಸೋಲಂಕಿ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿತ್ತು. ಅವರ ಹೇಳಿಕೆಗಳ ಆಧಾರದ ಮೇಲೆ ಇತರ 8 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ವಿವರಿಸಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು, “ವಾಟ್ಸ್ಆ್ಯಪ್ ಗುಂಪಿನ ಇತರ ಸದಸ್ಯರ ಎದುರು ಹೀರೋ ಆಗುವ ಉದ್ದೇಶದಿಂದ ಮಾತ್ರ ಅಂತಹ ಪೋಸ್ಟ್ಗಳನ್ನು ಗುಂಪಿನಲ್ಲಿ ಹಂಚಿಕೊಳ್ಳಬಹುದು. ಅದು ಸತ್ಯವಲ್ಲದೆ, ಹಿರಿಮೆಯ ಭಾಗವೂ ಆಗಿರಬಹುದು. ಆದ್ದರಿಂದ, ಆರೋಪಿಯು ಇಬ್ಬರು ಮುಸ್ಲಿಮರನ್ನು ಕೊಂದಿದ್ದಾನೆ ಎಂದು ವಾದಿಸಲು ಬಳಸಲಾಗಿರುವ ವಾಟ್ಸ್ಆ್ಯಪ್ ಚಾಟ್ಗಳು ಗಣನೀಯ ಪುರಾವೆಯಾಗಲು ಸಾಧ್ಯವಿಲ್ಲ. ಈ ಚಾಟ್ಗಳನ್ನು ದೃಢೀಕರಣ ಸಾಕ್ಷ್ಯವಾಗಿ ಮಾತ್ರವೇ ಬಳಸಬಹುದು” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆರೋಪಿಗಳನ್ನು ದೋಷಮುಕ್ತರೆಂದು ಘೋಷಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಹಾರೋಹಳ್ಳಿ | ಬನವಾಸಿಯಲ್ಲಿ ಅಸ್ಪೃಶ್ಯತೆ ಆಚರಣೆ: ರಾಜಿ, ಮಾತುಕತೆ ನೆಪದಲ್ಲಿ ಆರೋಪಿಗಳ ರಕ್ಷಣೆ
ಇದಕ್ಕೂ ಮೊದಲು, ಏಪ್ರಿಲ್ 30ರಂದು ನ್ಯಾಯಾಲಯವು ನೀಡಿದ ಮತ್ತೊಂದು ತೀರ್ಪಿನಲ್ಲಿ, ಹಾಶಿಮ್ ಅಲಿ ಎಂಬಾತನ ಕೊಲೆ ಪ್ರಕರಣದಲ್ಲಿ ಕೊಲೆಗೆ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ ಎಂಬುದನ್ನು ಪರಿಗಣಿಸಿ 12 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಅಂದಿನ ತೀರ್ಪಿನ ವೇಳೆಯೂ, “ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲು ವಾಟ್ಸ್ಆ್ಯಪ್ ಚಾಟ್ಗಳನ್ನು ಏಕೈಕ ಆಧಾರವೆಂದು ರೂಪಿಸಲು ಸಾಧ್ಯವಿಲ್ಲ. ಸಾಕ್ಷ್ಯಗಳು ಸ್ವತಂತ್ರ, ವಿಶ್ವಾಸಾರ್ಹವಾಗಿರಬೇಕು” ಎಂದು ನ್ಯಾಯಾಲಯ ಹೇಳಿತ್ತು.
ಗಮನಾರ್ಹ ಸಂಗತಿ ಎಂದರೆ, ಇದೇ 2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಯುವ ಹೋರಾಟಗಾರ ಉಮರ್ ಖಾಲಿದ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿದೆ. ಖಾಲಿದ್ ಬಂಧನಕ್ಕೂ ಪ್ರಮುಖ ಸಾಕ್ಷ್ಯವಾಗಿ ‘ವಾಟ್ಸ್ಆ್ಯಪ್ ಚಾಟ್’ಗಳನ್ನೇ ಉಲ್ಲೇಖಿಸಲಾಗಿದೆ. ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಅವರು ಮತ್ತು ಇತರ ಆರೋಪಿಗಳು ನಡೆಸಿರುವ ಚಾಟ್ಗಳನ್ನೇ ಆಧರಿಸಿ, ಖಾಲಿದ್ ಮತ್ತು ಇತರರರು ಗಲಭೆಗೆ ಸಂಚು ರೂಪಿಸಿದ್ದರೆಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಆ ಚಾಟ್ಗಳು ಗಲಭೆಗೆ ನೇರವಾಗಿ ಸಂಬಂಧಿಸಿಲ್ಲವೆಂದು ಖಾಲಿದ್ ಪರ ವಕೀಲರು ವಾದಿಸಿದ್ದಾರೆ. ಆದರೂ, ಕಳೆದ ನಾಲ್ಕೂವರೆ ವರ್ಷಗಳಿಂದ ಖಾಲಿದ್ ಜೈಲಿನಲ್ಲಿಯೇ ಇದ್ದಾರೆ. ಖಾಲಿದ್ ಪ್ರಕರಣ ಖುಲಾಸೆ ಯಾಗುವುದಿರಲಿ, ಅವರಿಗೆ ಜಾಮೀನು ಕೂಡ ದೊರೆತಿಲ್ಲ.