ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್, ಗಾಂಜಾ, ಅಫೀಮ್ ಸೇವನೆಯಿಂದ ವ್ಯಕ್ತಿಯ ಆರೋಗ್ಯಕ್ಕೆ ಮಾರಕ.ಆರೋಗ್ಯ ಹಾಳಾದರೆ ಸಮಾಜವು ಹಾಳಾಗುತ್ತದೆ.ಉತ್ತಮ ಸಮಾಜಕ್ಕೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರದೊಂದಿಗೆ ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಬೇಕೆಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ನವೋದಯ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಯುವಜನತೆಗೆ ಡ್ರಗ್ಸನಿಂದ ಉಂಟಾಗುವ ಹಾನಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನವೋದಯ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಡ್ರಗ್ಸ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದಲ್ಲಿ ಇತ್ತೀಚಿಗೆ ಯುವಜನರು ಡ್ರಗ್ಸ್ ಸೇವನೆಯಿಂದ ಭಯಾನಕ ಘಟನೆಗಳು ಸಂಭವಿಸಿವೆ. ಡ್ರಗ್ಸ್ ವಿರುದ್ಧ ಸೋಮವಾರ 9 ಪ್ರಕರಣ ದಾಖಲಾಗಿದೆ. ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರ ದಾಳಿ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ಸಾಗಣೆ ಕುರಿತು ಮಾಹಿತಿ ದೊರಕಿದ್ದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಡ್ರಗ್ಸ್ ಮುಕ್ತ ಮಾಡಲು ಪಂಚಾಯತ್ ಮಟ್ಟ, ಪಟ್ಟಣ ಪಂಚಾಯಿತಿ ನಗರಸಭೆ ಮುಂತಾದ ಹಂತಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ವಾಹನವನ್ನು ನಿಧಾನವಾಗಿ ಚಾಲನೆ ಮಾಡಬೇಕು ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಮೇ 31; ಸ್ಲಂ ಜನರ ವಿವಿಧ ಬೇಡಿಕೆಗೆ ಸ್ಲಂ ಹಬ್ಬೋತ್ಸವ
ನಂತರ ಮಾತನಾಡಿದ ಜಿಲ್ಲಾಧಿಕಾರಿ ನಿತೀಶ್ ಕೆ, ನಮ್ಮ ಸಮಾಜದ ರಕ್ಷಣೆಗೆ ಇಂಥ ಜಾಗೃತಿ ಅವಶ್ಯಕವಾಗಿದೆ. ಯುವಜನತೆ ಸಮಾಜದ ಶಕ್ತಿಯಾಗಿದೆ. ಡ್ರಗ್ಸ್ ಬಳಕೆಯಿಂದಾಗಿ ಅವರ ಉಜ್ವಲ ಭವಿಷ್ಯ ಧ್ವಂಸವಾಗುತ್ತಿದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕವಾಗಿ ಕೂಡಾ ವ್ಯಕ್ತಿಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಅಲ್ಲದೆ ಮಕ್ಕಳನ್ನು ಸೂಕ್ತ ಮಾರ್ಗದಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಡ್ರಗ್ ನಿಯಂತ್ರಣಾಧಿಕಾರಿ ಉದಯ ಕಿಶೋರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ನವೋದಯ ರಿಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ್, ನವೋದಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ದೇವನಂದ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನವೋದಯ ಮೆಡಿಕಲ್ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.
