“ವಸತಿ ನಿಲಯದಲ್ಲಿ ಸರಿಯಾದ ಉತ್ತಮ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪುಸ್ತಕಗಳು, ಮೇಲ್ಚಾವಣಿ ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ” ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ವಂಚನೆ, ಹಾಸ್ಟೆಲ್ ಸ್ಥಳಾಂತರ ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ನೇತೃತ್ವದಲ್ಲಿ ವಸತಿ ನಿಲಯದ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ “ಸೌಕರ್ಯಗಳನ್ನು ದೊರಕಿಸುವಂತೆ ತಾಲ್ಲೂಕು ಅಧಿಕಾರಗಳಿಗೆ ಅನೇಕ ಬಾರಿ ಮನವಿ ಪತ್ರ ಬರೆಯಲಾಗಿದೆ. ಕಳೆದ ಡಿಸೆಂಬರ್, ಫೆಬ್ರವರಿ ತಿಂಗಳಲ್ಲಿ ಹೋರಾಟವನ್ನು ಕೂಡ ಮಾಡಿದ್ದೇವೆ. ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಳದೆ ಕೇವಲ ಭರವಸೆ ನೀಡುತ್ತಿದ್ದಾರೆ. ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ ಕೊಪ್ಪಳದ ಮಾತನಾಡಿ, “ನಿರಂತರ ಮಳೆಯಿಂದ ವಸತಿ ನಿಲಯದ ಕಿಟಕಿ ಬಾಗಿಲು ಗಳಿಂದ ನೀರು ಬರುತ್ತಿದ್ದ ಕಟ್ಟಡ ಇದ್ದರೂ ಇಲ್ಲದಂತೆ ಆಗಿದೆ. ಕಿಟಕಿ ಬಾಗಿಲು ಗ್ಲಾಸ್ ಹೊಡೆದು ಹೋಗಿ ವರ್ಷಗಳೆ ಕಳೆದು ಈವರೆಗೆ ಸರಿಪಡಿಸಲು ಅಧಿಕಾರಿಗಳ ಮುಂದಾಗಿಲ್ಲ. ‘ಗ್ರಂಥಾಲಯ ಇಲ್ಲ, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳಿಲ್ಲ, ಕಂಪ್ಯೂಟರ್ ಲ್ಯಾಬ್ ಇಲ್ಲ’ ಎಂದು ಕೇಳಿದಾಗ ಹೊಸ ಕಟ್ಟಡದ ಸ್ಥಳಾಂತರ ನೆಪ ಹೇಳಿ ಆರು ತಿಂಗಳಿಂದ ಸೌಲಭ್ಯಗಳಿಂದ ವಂಚಿಸುತ್ತಿದ್ದಾರೆ. ಹೋರಾಟ ಮಾಡುತ್ತೇವೆ ಎಂದಾಗ ಮಾತ್ರ ರಿಪೇರಿ ಮಾಡಿಸಲು ಮುಂದಾಗುತ್ತಾರೆಯೇ ವಿನಹ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹತ್ತು ಕಿಲೋಮೀಟರ್ ದೂರದಲ್ಲಿರುವ ನೂತನ ವಸತಿ ನಿಲಯಕ್ಕೆ ಏಕಾಏಕಿ ಸ್ಥಳಾಂತರ ಎಂದರೆ ಆಗುವುದಿಲ್ಲ. ಈಗ ಸೆಮಿಸ್ಟರ್ ಅಂತಿಮ ಪರೀಕ್ಷೆ ಇರುವುದರಿಂದ ಹೊಸ ವಸತಿ ನಿಲಯಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲ. ದೂರದ ನೂತನ ವಸತಿ ನಿಲಯಕ್ಕೆ ಹೋಗುವುದಿಲ್ಲ” ಎಂದು ಮುಖಂಡರು ನವೀನ್ ಬಡ್ಡಪ್ಪನವರ, ವಸಂತ ವಡ್ಡರ ಪಟ್ಟುಹಿಡಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ನಗರ, ಊರಿಂದ ದೂರವಿರುವ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಅನೇಕ ಬಾರಿ ಹೋರಾಟ, ಮನವಿ ನೀಡಿದರೂ, ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ಸರಿಯಲ್ಲ. ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇಲಾಖೆಯ ಸ್ವಂತ ಕಟ್ಟಡಕ್ಕೆ ವಿದ್ಯಾರ್ಥಿಗಳ ವಿರೋಧ ಇರುವಾಗ ಸ್ಥಳಾಂತರ ಪ್ರಕ್ರಿಯೆ ಕೈಬಿಡಬೇಕು. ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಕಾಲೇಜ್ ಕ್ಯಾಂಪಸ್ ನಲ್ಲಿ ಎಲ್ಲಾ ಇಲಾಖೆ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮನೆ ಬಿಟ್ಟು ಬಂದು ಕಾಲೇಜ್ ಒಂದೆಡೆ ಹಾಸ್ಟೆಲ್, ನಗರ ಎಲ್ಲಾ ದೂರದ ಹತ್ತಾರು ಕಿಲೋಮೀಟರ್ ದೂರವಾದರೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿ ಸಮುದಾಯ ಎದುರಿಸಬೇಕಾಗುತ್ತದೆ. ಆದರಿಂದ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಧಾವಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಹಾಗೂ ತಾಲ್ಲೂಕು ಅಧಿಕಾರಿ ಆಂಜನೇಯ ಹುಲ್ಲಾಳ ಅವರು ವಸತಿ ನಿಲಯ ವಾರ್ಡನ್ ಬಸವರಾಜ ದಲ್ಲಣ್ಣನವರ ಜೊತೆಗೆ ಪರಿಶೀಲನೆ ನಡೆಸಿ. ಪೋಲಿಸ್ ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ವಿದ್ಯಾರ್ಥಿಗಳು ಎಸ್ಎಫ್ಐ ಮುಖಂಡರೊಂದಿಗೆ ಸಭೆ ನಡೆಸಿ “ಹಾಸ್ಟೆಲ್ ಸ್ಥಳಾಂತರ ಪ್ರಕ್ರಿಯೆಯನ್ನು ಸಧ್ಯಕ್ಕೆ ಕೂಡಲೇ ಕೈ ಬಿಡುತ್ತೇವೆ, ಸಂಜೆಯ ಒಳಗೆ ಪುಸ್ತಕಗಳನ್ನು ಕೊಡಿಸುತ್ತೇವೆ, ಹೊಡೆದ ಕಿಟಕಿ ಬಾಗಿಲುಗಳನ್ನು ಸರಿಪಡಿಸುತ್ತೇವೆ, ಐದು ಕಂಪ್ಯೂಟರ್ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿ ಬಂಧನ
“ಈ ಬಾರಿಯೂ ಭರವಸೆ ಬೇಡ ಕೆಲಸವಾಗಬೇಕು ಅಲ್ಲಿಯವರೆಗೂ ಹಾಸ್ಟೆಲ್ ಬಂದ್ ಮಾಡಿ ಸ್ವಯಂ ಅಡುಗೆ ಮಾಡಿ ಧರಣಿ ಮುದುವರೆಸುತ್ತೇವೆ” ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿರು.
ಈ ಸಂದರ್ಭದಲ್ಲಿ ಪೋಲಿಸ್ ಠಾಣೆಯ ಎಮ್ ಜಿ ದೊಡ್ಡಕಾರಿಗಿ, ದೇವರಾಜ, ವಿದ್ಯಾರ್ಥಿ ಮುಖಂಡರಾದ ಅಭಿಶೇಕ ತಿಳುವಳ್ಳಿ. ರಘು ಕರಿಯಮ್ಮನವರ, ಈರಪ್ಪ ಹರಿಜನ್, ಕುಶಾಲ ಲಮಾಣಿ, ಮಾಂತೇಶ್ ಮಾಯಕೊಂಡ, ಮಂಜುನಾಥ್ ಹುಲಮನಿ, ಸುನಿಲ್ ಲಮಾಣಿ, ನಾಗೇಂದ್ರ ಎಮ್, ಕಿರಣ್ ಲಮಾಣಿ, ಅರುಣ್ ಕುಮಾರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
