ಬಡ, ನಿರ್ಗತಿಕ, ಅನಾಥರಿಗೆ ಅನ್ನ ಹಂಚುವುದು ಸೇರಿದಂತೆ ಅನೇಕ ಮಾನವೀಯ ಕಾರ್ಯಗಳಿಂದ ಬೀದರ್ ಜಿಲ್ಲಾದ್ಯಂತ ಹೆಸರುವಾಸಿಯಾಗಿರುವ ರಿಶೈನ್ ಆರ್ಗನೈಜೇಶನ್ ತಂಡದ ಸದಸ್ಯರು ಸಂಸದ ಸಾಗರ್ ಖಂಡ್ರೆ ಅವರನ್ನು ಬೀದರ್ನ ಅವರ ಕಚೇರಿಯಲ್ಲಿ ಭೇಟಿಯಾಗಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಜಿಲ್ಲೆಯ ವಿವಿಧ ಸಭೆ, ಸಮಾರಂಭಗಳಲ್ಲಿ ಹೆಚ್ಚುವರಿಯಾದ ಆಹಾರ ವಿತರಣೆ ಕಾರ್ಯವನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿಸ್ತರಿಸಲು ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ಅಗತ್ಯ ಅನುದಾನ ಒದಗಿಸಲು ಹಾಗೂ ಸಿಎಸ್ಆರ್ ಉಪಕ್ರಮಗಳ ಸಹಾಯಧನವನ್ನು ಸಂಸ್ಥೆಗೆ ಒದಗಿಸುವ ಕುರಿತು ಸಹಕರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಎಂಟು ವರ್ಷಗಳಿಂದ ಬೀದರ್ ಜಿಲ್ಲೆಯ ಹಸಿವು ಮತ್ತು ಅಪೌಷ್ಠಿಕತೆಯ ವಿರುದ್ಧ ಪಣ ತೊಟ್ಟು ಶ್ರಮಿಸುತ್ತಿರುವ ರಿಶೈನ್ ಸಂಸ್ಥೆಯ ಸೇವೆಯನ್ನು ಸಂಸದರು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು. ಮದುವೆ, ಹೋಟೆಲ್ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಪ್ರತಿದಿನ 1,500ಕ್ಕೂ ಹೆಚ್ಚು ಜನರಿಗೆ ಪೂರೈಕೆ ಮಾಡುವ ರಿಶೈನ್ ಸಂಸ್ಥೆಯ ವಿಶಿಷ್ಟ ಮತ್ತು ಪರಿಣಾಮಕಾರಿ ಮಾದರಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಸಿವಿನಿಂದ ಬಳಲುತ್ತಿರುವ ನಿರ್ಗತಿಕ, ಅನಾಥರಿಗೆ, ಕಾರ್ಮಿಕರಿಗೆ ಆಹಾರ ಒದಗಿಸುವ ಈ ಮಾದರಿಯ ಕಾರ್ಯ ನಾನು ಮೆಟ್ರೋ ನಗರಗಳಲ್ಲಿ ನೋಡಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಅಂತಹದೇ ಒಂದು ವಿಭಿನ್ನ ಕಾರ್ಯವನ್ನು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ರಿಶೈನ್ ಸಂಸ್ಥೆಯನ್ನು ಕಂಡು ನನಗೆ ಹೆಮ್ಮೆ ಆಗುತ್ತಿದೆ. ಸಂಸ್ಥೆಯ ಉದ್ದೇಶದಂತೆ ಬೀದರ್ನ ಪ್ರಮುಖ ಕೈಗಾರಿಕೆಗಳಿಂದ ಸಿಎಸ್ಆರ್ ಉಪಕ್ರಮದ ಸಹಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಬೀದರ್ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ ಉಪಸ್ಥಿತರಿದ್ದು, ಸಂಸ್ಥೆಯ ಮಾನವೀಯ ಸೇವೆಯನ್ನು ಶ್ಲಾಘಿಸಿ, ಸಂಸ್ಥೆಗೆ ಅಗತ್ಯವಿರುವ ಸೌಲಭ್ಯ ಕುರಿತು ಸಂಸದರಿಗೆ ತಿಳಿಸಿದರು.
ಇದನ್ನೂ ಓದಿ : ಬೀದರ್ | ದ.ರಾ.ಬೇಂದ್ರೆ ಸಾಹಿತ್ಯದಲ್ಲಿ ದೇಶಿ ಸೊಗಡು ಅಪಾರ : ಶಿವಾಜಿ ಮೇತ್ರೆ
ರಿಶೈನ್ ಸಂಸ್ಥೆಯ ಸಂಸ್ಥಾಪಕ ರೋಹನ್ ಕುಮಾರ, ಸದಸ್ಯರಾದ ಅಂಬರೀಶ್ ಕೆಂಚಾ, ಕಾರ್ತೀಕ, ಶ್ರೀಧರ ಸೋಮನೋರ್, ಸಿದ್ಧಾರ್ಥ ಮಂತಾಳೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.