ರಾಗಿ ತಳಿಯಲ್ಲಿ ಅದ್ಭುತ ಕ್ರಾಂತಿ ಮಾಡಿದ ಕೃಷಿ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ ಅವರ ಹೆಸರು ಭೂಮಂಡಲ ಇರುವವರೆಗೆ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ರಾಗಿ ಲಕ್ಷ್ಮಣಯ್ಯ ಅವರು ರಾಗಿ ತಳಿಯಲ್ಲಿ ಆವಿಷ್ಕಾರ ಮಾಡಿ ಜಗತ್ತಿಗೆ ಹೊಸ ತಳಿಗಳನ್ನು ಪರಿಚಯಿಸಿದವರು. ಇದರಿಂದ ರಾಗಿ ಬೆಳೆಯಲ್ಲಿ ಕ್ರಾಂತಿ ನಡೆದು ರೈತರಿಗೆ ಬಹಳ ಪ್ರಯೋಜನವಾಯಿತು. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಸ್ಮಾರಕ ಸಮಿತಿ ಕಟ್ಟಿಕೊಂಡು, ಅವರನ್ನು ಜಗತ್ತಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ” ಎಂದರು.
“ಇಂದು ಜಗತ್ತು ತನ್ನ ಎಲ್ಲ ಸ್ಥಾನಮಾನಗಳನ್ನು ಮೀರಿ ಮುಂದಕ್ಕೆ ದಾಪುಗಾಲು ಇಟ್ಟಿದೆ. ಆದರೆ, ಜಗತ್ತಿಗೆ ಅನ್ನವನ್ನು ನೀಡುವ ರೈತರು ಮಾತ್ರ ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಇಟ್ಟಿದ್ದಾರೆ. ಇದಕ್ಕೆ ಕಾರಣ ರೈತರಿಗೆ ಅವಕಾಶವಿಲ್ಲದಿರುವುದು. ನಮ್ಮ ಸರ್ಕಾರವು ರೈತರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ, ರೈತರನ್ನು ಸ್ವಾವಲಂಬಿಯಾಗಿ ಎತ್ತರಕ್ಕೆ ಕೊಂಡೊಯ್ಯಲಿದೆ. ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದರು.
ಈ ಅಂಕಣ ಓದಿದ್ದೀರಾ?: ನೆನಪು | ಮೌನಕ್ರಾಂತಿಯ ಹರಿಕಾರ ರಾಗಿತಜ್ಞ ಲಕ್ಷ್ಮಣಯ್ಯ: ಕೆ. ಪುಟ್ಟಸ್ವಾಮಿ ಬರೆಹ
“ರೈತರು ಬೆಳೆದ ಬೆಳೆಗಳು ಬರಗಾಲ ಅಥವಾ ವಿಪರೀತ ಮಳೆಯಿಂದ ಹಾನಿಗೊಳಗಾಗುತ್ತಿವೆ. ರೈತರು ಬೆಳೆದ ಬೆಳಗಳಿಗೆ ವಿಮೆ ಮಾಡಿಸಿ, ಹಾನಿಗೊಳಗಾದ ಸಂದರ್ಭದಲ್ಲಿ ಸರ್ಕಾರದ ವಿಮೆ ಸೌಲಭ್ಯದಂತಹ ಸವಲತ್ತುಗಳನ್ನು ಪಡೆಯಬೆಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿವಿಯ ನಿವೃತ್ತ ಸಂಶೋಧನಾ ನಿರ್ದೇಶಕ ಡಾ. ಪ್ರಭಾಕರ ಶೆಟ್ಟಿ, ಶಾಸಕರ ದರ್ಶನ್ ಪುಟ್ಟಣ್ಣಯ್ಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ವಿ ಸುರೇಶ್, ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯ ಅಧ್ಯಕ್ಷ ಕೆ ಬೋರಯ್ಯ, ಮುದ್ದೇಗೌಡ, ಸುನಂದಾ ಜಯರಾಮ್, ಸುಧೀರ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.