ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳೂ ಕಳೆದರು ದೇಶದಲ್ಲಿ ಸ್ಲಂಗಳು ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.
ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಸ್ಲಂ ನಿವಾಸಿಗಳ ಸಾಂಸ್ಕೃತಿಕ ಸಮಾವೇಶ ಹಾಗೂ ಸ್ಲಂ ಹಬ್ಬವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಸಂಪೂರ್ಣ ಅಭಿವೃದ್ದಿಯ ವ್ಯವಸ್ಥೆಯಲ್ಲಿ ಅನೇಕ ಮಾರ್ಪಾಡುಗಳು ಬಂದರೂ ಸ್ಲಂಗಳಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಆಮೆ ಗತಿಯಲ್ಲಿ ಸಾಗಿದ್ದೇವೆ.ಬಡವರ ಜೀವನ ಸದೃಢರಾಗಬೇಕು. ಬಡತನದಿಂದ ಮುಕ್ತರಾಗಬೇಕೆಂಬ ಚಿಂತನೆ ಎಲ್ಲ ಸರ್ಕಾರಗಳು ಯೋಜನೆಗಳನ್ನು ನೀಡುತ್ತವೆ ಆದರೂ ದಿನದಿಂದ ದಿನಕ್ಕೆ ಹೊಸ ಕೊಳಚೆ ಪ್ರದೇಶಗಳು ಹುಟ್ಟಿಕೊಳ್ಳುತ್ತಿವೆ. ಇರುವ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸರ್ಕಾರಗಳು ವಿಫಲರಾಗಿದ್ದೇವೆ ಎಂದರು.
ನಾಡಿನ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸ್ಲಂ ನಿವಾಸಿಗಳ ಪಾತ್ರ ಬಹುಮುಖ್ಯವಾಗಿದ್ದು, ಜನರು ತಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ನಿಲ್ಲಿಸದೇ ಮುಂದುವರೆಸಬೇಕು. ರಾಜ್ಯ ಸರ್ಕಾರದಿಂದ ಸ್ಲಂ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ತಲುಪಿಸಲಾಗುವುದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿ ಶಾಲೆಗಳ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯ
ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಗುತ್ತಿಗೆದಾರರು ಸ್ಲಂ ಜನರ ಹಣವನ್ನು ಲೂಟಿ ಹೊಡೆಯುತ್ತಿದ್ದು, ಇದರಿಂದ ನಗರದಲ್ಲಿರುವ ಎಲ್ಲಾ ಸ್ಲಂ ನಿವಾಸಿಗಳ ಮನೆಗಳು ಅರ್ಧಕ್ಕೆ ನಿಂತುಹೋಗಿವೆ.
ನಗರದ ಹಿಂದಿ ವರ್ಧಮಾನ ಶಾಲೆಯ ಹತ್ತಿರ ಸ್ಲಂನಲ್ಲಿ ವಾಸಿಸುವ ಜನರು ವಸತಿ ಇಲ್ಲದೇ ರಸ್ತೆಯ ಮೇಲೆಯೇ ಗಲೀಜು ನೀರಿನಲ್ಲಿಯೇ ಕಳೆದ 5 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಸ್ಲಂ ಜನರಿಗೆ ಸಿಗಬೇಕಾದ ಸೌಲಭ್ಯ ಹಾಗೂ ಯೋಜನೆಗಳ ಹಣವನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಿಂದು ತೇಗುತ್ತಿದ್ದಾರೆ ಅದೇ ಸ್ಲಂ ಜನರು ದಿನ ನಿತ್ಯ ನರಕಯಾತನೆಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಸ್ಲಂಗಳಲ್ಲಿ ರಸ್ತೆಗಳು, ಚರಂಡಿಗಳು ಹಾಗೂ ಮನೆಗಳನ್ನು ನಿರ್ಮಾಣ ಮಾಡದೇ ಬಿಲ್ಲುಗಳನ್ನು ಮಾತ್ರ ಎತ್ತಿಕೊಂಡು ತಿಂದಿದ್ದಾರೆ ಎಂದು ದೂರಿದರು.
ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಸಾಂಸ್ಕೃತಿಕ ಸಮಾವೇಶ ಹಾಗೂ ಎಲ್ಲಾ ಕಡೆ ಸ್ಲಂ ಜನರ ಹಬ್ಬವನ್ನು ಆಚರಣೆ ಮಾಡುತ್ತಿರುವುದು ವಿಶೇಷ ಹಾಗೂ ಆಶ್ಚರ್ಯದ ಸಂಗತಿಯಾಗಿದೆ. 2007 ರಲ್ಲಿ ಪ್ರಾರಂಭವಾಗಿ ಸ್ಲಂ ಜನಾಂದೋಲನ ಇಲ್ಲಿಯವರೆಗೆ ನಡೆದುಕೊಂಡು ಬಂದಿರುವುದು ಮುಂದಿನ ತಲೆಮಾರಿಗೂ ಈ ಒಗ್ಗಟ್ಟು ಹೀಗೆ ಇರಬೇಕು ಎಂದರು.
ಸಮಾಜದಲ್ಲಿ ಸ್ಲಂ ಜನರ ಮೇಲೆ ಎಷ್ಟೆ ದೌರ್ಜನ್ಯಗಳಾದರೂ ಇಲ್ಲಿಯ ಜನ ಒಗ್ಗಟ್ಟಾಗಿ ತಮ್ಮ ಸಂಸ್ಕೃತಿ ಪ್ರತಿರೋಧವನ್ನು ಎತ್ತಿ ಹಿಡಿದಿದ್ದಾರೆ. ಸ್ಲಂ ಎಂದರೆ ಸಮಾಜದ ಕಳಂಕವೆಂದು ಹೇಳಲಾಗುತ್ತದೆ ಅಂತಹ ಸ್ಥಳಗಳಲ್ಲಿ ಜನರು ಬದುಕುತ್ತಿದ್ದೇವೆ. ನೆಲೆದ ಮೂಲ ಸಂಸ್ಕೃತಿಯನ್ನು ಉಳಿಸುವವರು ಸ್ಲಂ ಜನರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಹೇಮಾವತಿ, ಪಾಳಿಕೆ ಸದಸ್ಯ ಎಂ.ಪವನ್ಕುಮಾರ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ದಲಿತ ಮುಖಂಡರಾದ ಅಂಬಣ್ಣ ಅರೋಲಿಕರ್, ಎಂ.ಆರ್.ಭೇರಿ, ಕೆಪಿಸಿಸಿ ವಕ್ತಾರ ರಝಾಕ್ ಉಸ್ತಾದ್, ಎಸ್.ರಾಜು, ಕರ್ನಾಟಕ ಕೊಳಚೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ದೇವೇಂದ್ರ ಕುಮಾರ, ಪ್ರಮುಖರಾದ ರೇಣುಕಾ ಸರಡಗಿ, ನೂರ್ ಜಹಾನ್, ಜನಾರ್ಧನ ಹಳ್ಳಿಬೆಂಚಿ, ಕೆ.ಪಿ.ಅನಿಲ್ಕುಮಾರ, ಶೋಭಾ, ಅಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
