ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಎಐಯುಟಿಯುಸಿ ಕಾರ್ಮಿಕ ಸಂಘಟನೆ ಮುಖಂಡ ಶರಣು ಹೇರೂರು ಮಾತನಾಡಿ, ʼಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮವು ಅತೀ ಹೆಚ್ಚು ದಿನಗೂಲಿ-ರೈತ ಕಾರ್ಮಿಕರು, ವಲಸೆ ಕಾರ್ಮಿಕರು ವಾಸಿಸುವ ಗ್ರಾಮ. ಈ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆʼ ಎಂದು ದೂರಿದರು.
ಎಐಡಿಎಸ್ಓ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, ʼಹರಿಜನವಾಡ ಬಡಾವಣೆಯ ಸರ್ಕಾರಿ ಶಾಲೆಗೆ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ. ಇನ್ನು ಶಿಕ್ಷಕರ ಕೊರತೆ ಎದುರಾಗಿದೆ.ಕೂಡಲೇ ಶಾಲೆಗೆ ಅಗತ್ಯ ಸೌಕರ್ಯ ಹಾಗೂ ಶಿಕ್ಷಕರನ್ನು ನೇಮಕ ಮಾಡಬೇಕುʼ ಎಂದು ಒತ್ತಾಯಿಸಿದರು.
ಯುವಜನ ಸಂಘಟನೆಯ ವಾಡಿ ಕಾರ್ಯದರ್ಶಿ ಗೌತಮ್ ಪರರ್ತುರಕ್ ಮಾತನಾಡಿ, ʼಕಡಿಮೆ ದಾಖಲಾತಿ ಹೊಂದಿರುವ ಹಲಕರ್ಟಿ ಗ್ರಾಮದ ಈ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ, ಈ ಕೂಡಲೇ ನೂತನ ಕಟ್ಟಡಕ್ಕೆ ಮಂಜೂರಾತಿ ನೀಡಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳು ಮುಚ್ಚುವ ನಿರ್ಧಾರ ತೆಗೆದುಕೊಳ್ಳಬಾರದುʼ ಎಂದರು.
ಇದನ್ನೂ ಓದಿ : ಆರ್ಎಸ್ಎಸ್, ಬಿಜೆಪಿ ಚಿಂತನೆಗಳಿಗೆ ಕಲ್ಯಾಣ ಶರಣರ ನಾಡು ಅವಕಾಶ ಕೊಡುವುದಿಲ್ಲ : ಪ್ರಿಯಾಂಕ್ ಖರ್ಗೆ
ಪ್ರತಿಭಟನೆಯಲ್ಲಿ ಪ್ರಮುಖರಾದ ಮಲ್ಲಿನಾಥ ಹುಂಡೇಕಲ್, ಚೌಡಪ್ಪ ಗಂಜಿ, ಗೋವಿಂದ ಯಳವಾರ, ಸಿದ್ದಾರ್ಥ್ ತಿಪ್ಪನೂರು, ದತ್ತು ಹುಡೇಕರ್, ಸಂಪತ್ ಗೌಂಡಿ, ಮಹಾದೇವಿ, ಗೋದಾವರಿ ಕಾಂಬಳೆ, ಸುದೀಪ್, ಆಕಾಶ್, ಮೋಹನ್ ಅಕ್ಕಿ, ಕಾರ್ತಿಕ್, ಸಂತೋಷ್, ಅನಿತಾ ಮತ್ತಿತರರಿದ್ದರು.