ಜನಸಂಖ್ಯೆ ಹೆಚ್ಚಳದಿಂದಾಗಿ, ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಅನೇಕ ಗಿಡ ಮರಗಳು ನಾಶವಾಗುತ್ತಿದ್ದು, ಇದನ್ನು ಸರಿದೂಗಿಸಲು ಪ್ರತಿಯೊಬ್ಬರೂ ಒಂದೊಂದು ಗಿಡಮರಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿ ಪರಿಸರ ಸಂರಕ್ಷಿಸಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದರು.
ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಪ್ರಕೃತಿ ಕಾಲೋನಿಯಲ್ಲಿ ಜರುಗಿದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಪರಿಸರ ನಾಶದಿಂದಾಗಿ, ಸರಿಯಾಗಿ ಮಳೆಯಾಗುತ್ತಿಲ್ಲ, ಬೆಳೆಗಳು ಬರುತ್ತಿಲ್ಲ, ಬಂದರೂ ಸರಿಯಾಗಿ ಇಳುವರಿ ಕೊಡುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಹೀಗೆ ಮುಂದುವರೆದರೆ, ಮುಂದೊಂದು ದಿನ ಮನುಷ್ಯರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಬೇಕು, ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, “ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಬೇಕು. ಅರಣ್ಯ ಕೃಷಿ ಮಾಡಬೇಕು, ಅರಣ್ಯ ಕೃಷಿ ಮಧ್ಯದಲ್ಲಿ ಅಂತರ ಬೇಸಾಯ ಮಾಡಬೇಕು. ಹಣ್ಣಿನ ಗಿಡ ಮರಗಳನ್ನು ಹೆಚ್ಚೆಚ್ಚು ಬೆಳಸಬೇಕು, ಸಾವಯವ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಲೋಟಸ್ ಕಾಲೇಜಿನಿಂದ ವಿಶ್ವ ತಂಬಾಕುರಹಿತ ದಿನ; ಜನ ಜಾಗೃತಿ ಜಾಥಾ
ಚಂದ್ರಶೇಖರ್ ಜಮಖಂಡಿ, ಮಹಾನಗರ ಪಾಲಿಕೆ ಸದಸ್ಯ ಮುಳಗೌಡ ಬಿರಾದಾರ ಮಾತನಾಡಿದರು. ಬಿಕೆ ಶೋಭಾ ಸ್ವಾಗತಿಸಿದರು. ಗಿರೀಶ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಬಿಕೆ ಶೈಲಾ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಕೆ ಸರೋಜಾ, ಸುವರ್ಣ, ಜಯಶ್ರೀ ಕನ್ನೂರ, ಶ್ರೀಪತಿರಾವ ಪಾಟೀಲ, ಕೆಎಸ್ ದೊಡ್ಡಮನಿ, ಬಸವರಾಜ, ರವೀಂದ್ರ ಬದ್ನಿಮಠ ಸೇರಿದಂತೆ ಬಡಾವಣೆಯ ನಾಗರಿಕರು, ವಿವಿಧ ಕೇಂದ್ರಗಳಿಂದ ಅಗಮಿಸಿದ ಈಶ್ವರಿಯ ವಿದ್ಯಾಲಯದ ಪದಾಧಿಕಾರಿಗಳು, ಆಮಂತ್ರಿತರು ಇದ್ದರು.