“ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ. ಸಹನೆ, ಸಹಿಸಿಕೊಳ್ಳುವ ಗುಣ ಮಾನವನ ದೊಡ್ಡ ಶಕ್ತಿಯಿದ್ದಂತೆ. ಸಹನೆ, ಸಹಕಾರ, ತ್ಯಾಗದ ಮೂಲಕ ಒತ್ತಡದ ಜೀವನದಿಂದ ಹೊರ ಬರಲು ಸಾಧ್ಯ. ಧ್ಯಾನ, ಮಿತವಾದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು” ಎಂದು ಚಿತ್ರದುರ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಸರ್ಕಾರಿ ನೌಕರರು ಕೆಲಸದಿಂದ ನಿವೃತ್ತರಾಗಿರಬಹುದು. ಆದರೆ ಪ್ರವೃತ್ತಿಯಿಂದ ಅಲ್ಲ. ಪ್ರತಿಭೆಗಳನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳಿಗೆ ಇನ್ನು ಪ್ರೋತ್ಸಾಹ ನೀಡಿದಂತಾಗುತ್ತದೆ. ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸುವುದರಿಂದ ಅವರು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ. ಒಳ್ಳೆಯ ಹೃದಯವಿದ್ದವರು ದೀರ್ಘಾಯುಷಿಗಳಾಗಿರುತ್ತಾರೆ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಬೇಕಾದರೆ ಭಾವನಾತ್ಮಕ ಬದುಕು ಮುಖ್ಯ” ಎಂದು ಹೇಳಿದರು.

“ನಿವೃತ್ತಿಯ ನಂತರ ಒಂದಲ್ಲ ಒಂದು ರೀತಿಯ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಲವಲವಿಕೆಯಿಂದ ಇರಬಹುದಲ್ಲದೆ, ತಲ್ಲಣಗೊಂಡಿರುವ ಮನಸ್ಸುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಸ್ಥಿತ ಪ್ರಜ್ಞೆ ಬೆಳೆಸಿಕೊಂಡು ಸುತ್ತಮುತ್ತಲಿನ ವಾತಾವರಣವನ್ನು ತಣ್ಣಗಾಗಿಸಿಕೊಂಡು ಹಿರಿಯರ ಸಲಹೆ ಮಾರ್ಗದರ್ಶನಗಳನ್ನು ಪಡೆದುಕೊಂಡಾಗ ಸಮಾಜ ಸಂಘಟನೆ ಬಲಿಷ್ಟವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮಯ್ಯ ಮಾತನಾಡಿ “ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಜಾಸ್ತಿಯಿದ್ದು, ಉತ್ತಮ ಫಲಿತಾಂಶಕ್ಕೆ ನಿವೃತ್ತ ನೌಕರರ ಮಾರ್ಗದರ್ಶನ ಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿ, ಇಲ್ಲವೇ ಹೋರಾಟ ಎದುರಿಸಿ; ರೈತ ಸಂಘ
ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ಪ್ರೇಮನಾಥ್ ಮಾತನಾಡಿ “ನೌಕರರ ಸಂಘದ ಬೆಳವಣಿಗೆ ಹಿಂದೆ ನಿವೃತ್ತ ನೌಕರರ ಸಹಕಾರವಿದೆ. ಎಲ್ಲರ ದೇಣಿಗೆ ಸಹಕಾರದಿಂದ ಕಟ್ಟಡ ನಿರ್ಮಾಣವಾಗಿದೆ. ಸಂಘದಲ್ಲಿ ಮನೋರಂಜನಾ ಕೇಂದ್ರವಿದೆ. ನಿವೃತ್ತ ನೌಕರರು ಆರಾಮವಾಗಿ ಕಾಲ ಕಳೆಯಬಹುದು. ದಿನನಿತ್ಯವೂ ನಗರವನ್ನು ಶುಚಿಗೊಳಿಸುವ ಹತ್ತು ಪೌರ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಸನ್ಮಾನಿಸಲಾಗುವುದು. ಪ್ರತಿಭಾ ಪುರಸ್ಕಾರಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದ ಮೇಲೆ ಹೆತ್ತವರನ್ನು ಕೈಬಿಡದೆ ಪೋಷಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ, ನಿಕಟಪೂರ್ವ ಅಧ್ಯಕ್ಷ ರಂಗಪ್ಪರೆಡ್ಡಿ, ಉಪಾಧ್ಯಕ್ಷರುಗಳಾದ ಎಫ್.ಆರ್.ಅಲಗೇರಿ, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ, ಕಾರ್ಯಾಧ್ಯಕ್ಷ ಎಂ.ಶಿವಾನಂದಪ್ಪ, ಖಜಾಂಚಿ ಎನ್.ಆರ್.ಬೈಯಣ್ಣ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ವಿಧ್ಯಾರ್ಥಿಗಳು ಹಾಜರಿದ್ದರು.