ನಮ್ಮ ರಾಜ್ಯಕ್ಕೆ ಆರ್ಸಿಬಿ ತಂಡದ ಹುಡುಗರು ಗೌರವ ಮತ್ತು ಹೆಮ್ಮೆ ತಂದಿದ್ದಾರೆ. ಈ ಕಾರಣಕ್ಕಾಗಿ ನಾವು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, “ಪಂಜಾಬ್ ಕಿಂಗ್ಸ್ ವಿರುದ್ದ ಅಭೂತಪೂರ್ವ ಗೆಲುವು ಸಾಧಿಸಿದ ಆರ್ ಸಿ ಬಿ ತಂಡಕ್ಕೆ ಗೌರವ ಸಲ್ಲಿಸಲು ಸರ್ಕಾರ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.
“ಆರ್ ಸಿ ಬಿ ತಂಡಕ್ಕೆ ನಾವು ಗೌರವ ಸಲ್ಲಿಸಬೇಕು. ಯಾವ ರೀತಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಗೆ ಯಾವ ರೀತಿಯಲ್ಲಿ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಬೆಂಗಳೂರಿನಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡುವ ಬಗ್ಗೆ ಆರ್ ಸಿ ಬಿ ತಂಡದವರು ಶೆಡ್ಯೂಲ್ಡ್ ಹಾಕಿಕೊಂಡಿರಬಹುದು. ಆದರೆ, ಪರಿಸ್ಥಿತಿಯನ್ನು ಇಲ್ಲಿ ನಿಯಂತ್ರಣ ಮಾಡುವವರು ನಾವಲ್ಲವೇ? ಗೃಹ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ” ಎಂದು ತಿಳಿಸಿದರು.
ಮಂಗಳವಾರ ರಾತ್ರಿಯೇ ಆರ್ ಸಿ ಬಿ ಗೆಲುವನ್ನು ಜನರು ಸಂಭ್ರಮದಿಂದ ಆಚರಿಸಿದ್ದರು. ಇಂದು ವಿಕ್ಟರಿ ಪರೇಡ್ ಮೂಲಕ ಬೆಂಗಳೂರಿನ ಬೀದಿಗಳಲ್ಲಿ ಆರ್ ಸಿ ಬಿ ಅಭಿಮಾನಿಗಳು ಗೆಲುವನ್ನು ಸಂಭ್ರಮಿಸಲು ಸರ್ಕಾರ ಅವಕಾಶ ನೀಡುತ್ತಾರೋ ಇಲ್ಲವೋ ಎಂಬುವುದು ಇನ್ನು ಅಧಿಕೃತವಾಗಿಲ್ಲ.
ಆರ್.ಸಿ.ಬಿ ತಂಡಕ್ಕೆ ಮುಖ್ಯಮಂತ್ರಿಗಳ ಅಭಿನಂದನೆ
ಐ.ಪಿ.ಎಲ್ ಹದಿನೆಂಟನೇ ಆವೃತ್ತಿಯನ್ನು ಗೆದ್ದಿರುವ ಆರ್.ಸಿ.ಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯ ಅತೀವ ಹೆಮ್ಮೆ ಹಾಗೂ ಪಡುವಂಥ ಕೆಲಸ ಆರ್.ಸಿ.ಬಿ ಮಾಡಿದ್ದು, ವಿಧಾನಸೌಧದ ಮೆಟ್ಟಿಲುಗಳಲ್ಲಿ ಇಂದು ತಂಡಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.